Friday, February 17, 2023

ಪ್ರಾಯಶ್ಚಿತ್ತ


This short story was written as the back-story of a certain Swamiji in a Ten Little Indians/Gumnaam/Aatagara-esque play, Swamiji, of course, played by yours truly


The "Ten Little Indians" in the play were replaced with a desi, ಹತ್ತು ಕೋತಿಮರಿs, which are referenced in the story. A limit of 1500 words had been placed on the length of the story, because of which the narrative is terse. This story was printed in the 2015 KKNC Swarnasetu magazine.


****


ಅರಬೀ ಸಮುದ್ರದ ಮಧ್ಯದ ದ್ವೀಪದಲ್ಲಿದ್ದ ಗಾಜಿನ ಮನೆ ಗೆಸ್ಟ್‌ಹೌಸ್‌ನಲ್ಲಿ ಸೇರಿದ ನಾವು ೧೦ ಮಂದಿ.... ಅಲ್ಲ ೧೧ ಮಂದಿ, ಸುಮನಾಳನ್ನೂ ಸೇರಿಸಿ. ಅಲ್ಲೇ ಕೆಲಸ ಮಾಡುತ್ತಿದ್ದ ಭಟ್ಟ ಮತ್ತವನ ಹೆಂಡತಿ ಅಂಜಲಿ, ಅಂದೇ ಕೆಲಸಕ್ಕೆ ಬಂದ ಸೆಕ್ರೆಟರಿ ವೀಣಾ, ಪರ್ವತಾರೋಹಿ ಲೋಕೇಶ, ಚೀಟಿ ಸುಬ್ಬಲಕ್ಷ್ಮಿ, ಕರ್ನಲ್ ರಾಜೇಂದ್ರ‌ಪ್ರದಾದ್, ಸಿಸ್ಟರ್ ರೋಸ್‌ಮೇರಿ, ಡಿಟೆಕ್ಟಿವ್ ವೆಂಕಟೇಶ ಮೂರ್ತಿ, ಡಾಕ್ಟರ್ ಸಂಪತ್‌ ಕುಮಾರ್, ಆತ್ಮಾನಂದ ಸ್ವಾಮಿ, ಅಂದರೆ ನಾನು, ಜೊತೆಗೆ ವೀಣಾಳ ಅಣ್ಣನ ಮಗಳು ಸುಮನಾ. ಪರಸ್ಪರ ಮಾತನಾಡಿ ನೋಡಿದಾಗ ಒಬ್ಬೊಬ್ಬರಿಗೆ ಒಂದೊಂದು ಕಾರಣ ಹೇಳಿ ಗಾಜಿನ ಮನೆಗೆ ಬರಮಾಡಿಕೊಳ್ಳಲಾಗಿತ್ತೆಂದು ತಿಳಿಯಿತು.

ಅಂದು ಊಟವಾದಮೇಲೆ, ಸೀಡೀಯೊಳಗಿಂದ ಮೊಳಗಿದ ಧ್ವನಿಯೊಂದು ನಮ್ಮೆಲ್ಲರನ್ನೂ ಕೊಲೆಗಾರರೆಂದು ಆರೋಪಿಸಿತು. "ಆತ್ಮಾನಂದ ಸ್ವಾಮಿ, ನಿಮ್ಮ ಹೆಂಡತಿ ಲಲಿತಾದೇವಿ ಅವರ ಕೊಲೆ ಆರೋಪ ನಿಮ್ಮ ಮೇಲಿದೆ" ಎಂದಿತ್ತು ನನ್ನ ಮೇಲಿನ ಆರೋಪ. ಲಲಿತಾಳ ಹೆಸರು ಕೇಳಿದ ಮೇಲೆ ಉಳಿದವರ ಮೇಲಿದ್ದ ಆರೋಪಗಳು ನನ್ನ ಮನಸಿಗೆ ನಾಟಲೇಯಿಲ್ಲ.

ಲಲಿತಾ! ನಾನು ಲಲಿತಾಳನ್ನು ಮೊದಲ ಬಾರಿ ಕಂಡಿದ್ದು ನೆನಪಿಗೆ ಬಂತು.


****

ಸುಮಾರು ೧೮ರ ವಯಸ್ಸಿರಬಹುದು ನನಗೆ. ಆಗಿನ್ನೂ ಪಿ.ಯು.ಸಿ ಮುಗಿದಿತ್ತು, ರಜದಲ್ಲಿ ಯಾವುದೋ ಮದುವೆಗೆಂದು ಊರಿಗೆ ಹೋಗಿ, ಅಮ್ಮನ ದೊಡ್ಡಪ್ಪನ ಮಗನ ಮನೆಯಲ್ಲಿ ಇಳಿದುಕೊಂಡಿದ್ದೆವು. ಅಲ್ಲೇ ನನ್ನ ಹಾಗು ಲಲಿತಾಳ ಮೊದಲ ಭೇಟಿಯಾದದ್ದು.

ಲಲಿತಾ ಮಾವನ ಮಗಳು. ನನಗಿಂತ ಒಂದು ವರ್ಷ ಚಿಕ್ಕವಳು. ಅವಳನ್ನು ಮೊದಲ ಬಾರಿ ನೋಡಿದಾಗಲೇ ಏನೋ ಒಂದು ರೀತಿ ಮೈ ಜುಂ ಎಂದಿತ್ತು. ಹೆಚ್ಚೇನೂ ಮಾತನಾಡಲಿಲ್ಲ. ಎನೋ ಒಂದೆರಡು ಔಪಚಾರಿಕ ಮಾತುಗಳಿರಬಹುದೇನೊ. ಆದರೆ ಆ ಎರಡು ಮಾತುಗಳಲ್ಲೇ ನಾನು ಎಲ್ಲಿಗೋ ತಾರಣವಾದಂತಾಗಿತ್ತು. ಅವಳು ನುಡಿದರೆ ವೀಣೆಯ ತಂತಿಗಳನ್ನು ಮೀಟಿದ ಹಾಗೆ ಕೇಳಿಸಿತ್ತು.

ಮಾವ ಬಹಳ ಶಿಸ್ತಿನ ಉಗ್ರಹಾಸ. ಹೆಂಡತಿ, ಮಗಳನ್ನು ಗದರಿಸಿ, ಹೆದರಿಸಿ ಇಟ್ಟಿದ್ದ. ಎಲ್ಲವೂ ತನ್ನ ಮೂಗಿನ ನೇರಕ್ಕೇ ಆಗಬೇಕು. ಮಾತು-ಮಾತಿಗೂ ಲಲಿತಾಳ ಮೇಲೆ ಗದರುವುದು, ಬೈಯುವುದು ಸರ್ವೇ-ಸಾಧಾರಣ. ಲಲಿತಾಳೋ ಪಾಪದ ಪ್ರಾಣಿ. ಅಪ್ಪನ ಜೊತೆ ಬಹುಶಃ ದಿನಕ್ಕೆರಡು ಮಾತನಾಡಿದರೆ ಹೆಚ್ಚು. ಅವನು ಹೇಳಿದ್ದಕ್ಕೆಲ್ಲ ತಲೆದೂಗಿ ಮರೆಯಾಗುತ್ತಿದ್ದಳು.

ಅಂದು ಮದುವೆ ಮನೆಯಿಂದ ನಾನು ಬೇಗನೆ ಹಿಂತಿರುಗಿದೆ. ಲಲಿತಾಳೂ ಇನ್ನೆಲ್ಲಿಂದಲೋ ನಾನು ಬರುವ ಹೊತ್ತಿಗೇ ಸರಿಯಾಗಿ ಹಿಂತಿರುಗಿದಳು. ಆಗಲೇ ಸ್ವಲ್ಪ ಕತ್ತಲಾಗಹತ್ತಿತ್ತು. ಮುಖಾಮುಖಿಯಾಗಿ ಅವಳು ನಾಚಿ, ನನ್ನಕಡೆ ಸಣ್ಣ ನಗೆ ಬೀರಿ ಒಳಕ್ಕೆ ಓಡಿದಳು. ನಾನು ಕೈ-ಕಾಲು ತೊಳೆದು ಮಹಡಿಮೇಲೆ ನಮಗೆ ಬಿಟ್ಟುಕೊಟ್ಟಿದ್ದ ಕೋಣೆಗೆ ಹೋಗಿ ಬೆಳಗಿನ ಪೇಪರ್ ಓದಲಾರಂಭಿಸಿದೆ. ಹೊರಗಿನಿಂದ ಗದ್ದಲ. ಕೋಗಾಟದ ಶಬ್ಧ. ಮಾವ ಲಲಿತಾಳನ್ನು ತಡವಾಗಿ, ಕತ್ತಲಾದಮೇಲೆ ಬಂದದ್ದಕ್ಕೆ ಹೀನಾಮಾನವಾಗಿ ಬೈಯ್ಯುತ್ತಿದ್ದ. ಹೊರಗೆ ಇಣುಕಿ ನೋಡಿದೆ. ಲಲಿತಾ ಪಾಪ ತಲೆ ಬಗ್ಗಿಸಿ ಒಂದು ಮಾತನ್ನೂ ಆಡದೆ ಬೈಯ್ಯಿಸಿಕೊಳ್ಳುತ್ತಿದ್ದಳು.

ಮೊದಲಿಂದಲೂ ನಾನು ಅನ್ಯಾಯವನ್ನು ಸಹಿಸಲಾರೆ. ಆ ಸಂದರ್ಭದಲ್ಲಿ ಅವಳನ್ನು ರಕ್ಷಿಸಲು ನನಗೆ ತಿಳಿದಿದ್ದು ಒಂದೇ ಉಪಾಯ. ನಾನು ಮಾವನ ಬಳಿ ಹೋಗಿ "ಅದು ನನ್ನ ತಪ್ಪು, ಮಾವ. ನಾನೇ ಲಲಿತಾಳನ್ನು ಅಂಗಡಿ ತೋರಿಸು ಅಂತ ಕರೆದುಕೊಂಡು ಹೋಗಿದ್ದೆ. ಸಾರಿ, ನನಗೆ ಗೊತ್ತಾಗಲಿಲ್ಲ" ಎಂದೆ. ಮಾವ ಕಕ್ಕಾಬಿಕ್ಕಿಯಾಗಿ ನನ್ನಿಂದ ಲಲಿತಾಳನ್ನು, ಲಲಿತಾಳಿಂದ ನನ್ನನ್ನು ನೋಡ ತೊಡಗಿದ. ಒಂದು ಕಡೆ ನಾನು ಸುಳ್ಳು ಹೇಳುತ್ತಿದ್ದೇನೆಂಬ ಸಂಶಯ, ಮತ್ತೊಂದು ಕಡೆ ಅಪರೂಪವಾಗಿ ಬಂದ ಅತಿಥಿಗಳು. ಯಾವುದೂ ಬಹೀರಂಗವಾಗಿ ಹೇಳಲಾರ, ನನ್ನನ್ನು ಏನೂ ಬೈಯ್ಯಲಾರ. ಲಲಿತಾ ಬಗ್ಗಿಸಿದ ತಲೆ ಎತ್ತಲೇ ಇಲ್ಲ. ನಾನೋ ಭಂಡ ಧೈರ್ಯದಿಂದ ಮಾವನನ್ನೇ ದಿಟ್ಟಿಸಿ ನೋಡುತ್ತಿದ್ದೆ. ಕಡೆಗೆ ಮಾವ ಸೋತು ಇಬ್ಬರನ್ನೂ ಹೋಗೆನ್ನುವಂತೆ ಸನ್ನೆ ಮಾಡಿ ಮತ್ತೆ ಲೆಕ್ಕ ಬರೆಯುವುದರಲ್ಲಿ ತೊಡಗಿದ.

ಇಬ್ಬರೂ ಮೆಲ್ಲನೆ ಕೋಣೆಯಿಂದ ಹೊರಗೆ ಹೋದೆವು. ನನ್ನ ಎದೆ ನೂರು ಮೈಲಿ ವೇಗದಲ್ಲಿ ಹೊಡೆದುಕೊಳ್ಳುತ್ತಿತ್ತು. ಲಲಿತಾ ನಿಟ್ಟುಸಿರು ಬಿಟ್ಟು ನನ್ನ ಕಡೆ ನೋಡಿದಳು. ಆ ಕಣ್ಣೀರು ತುಂಬಿದ ಬಟ್ಟಲು ಕಂಗಳಲ್ಲಿ ಕೃತಜ್ಞತೆ, ಸಮಾಧಾನ, ಜೊತೆಗೆ ಕದಾಚಿತ್ ಇನ್ನೂ ಎನೋ ಇತ್ತೋ ಅಥವ ಕೇವಲ ನನ್ನ ಊಹೆಯೊ?

ಮಾರನೆಯ ದಿನ ಬೆಳಗ್ಗೆ ಸಣ್ಣನೆಯ ಹಾಡಿನ ಶಬ್ಧದಿಂದ ಎಚ್ಚರವಾಯಿತು. ಕಿಟಕಿಯಿಂದ ಹೊರಗೆ ನೋಡಿದಾಗ ಆಗತಾನೇ ಹುಟ್ಟುವ ಸೂರ್ಯನ ಹೊಂಬೆಳಕಿನಲ್ಲಿ ಹಳದಿ ಲಂಗ, ಬಿಳಿ ದಾವಣಿ ತೊಟ್ಟು, ಒದ್ದೆ ಕೂದಲಿಗೆ ಟವಲ್ ಸುತ್ತಿಕೊಂಡು, ಕೆನ್ನೆ ತುಂಬ ಅರಿಶಿನ, ತುಂಬು ತೊಂಡೆಹಣ್ಣು ತುಟಿಗಳಲ್ಲಿ ಸಣ್ಣ ನಗೆ, ಕಪ್ಪು ಹಚ್ಚಿದ ಬಟ್ಟಲು ಕಂಗಳು, ತೀಡಿದ ರೆಪ್ಪೆ, ದಟ್ಟ ಹುಬ್ಬು, ಅಗಲವಾದ ಹಣೆ, ಹಣೆಯಲ್ಲಿ ಬಾನಿನಲ್ಲಿ ಅದಾಗ ಹೊಳೆಯುತ್ತಿದ್ದ ಆ ಸೂರ್ಯನಂತೆಯೇ ಕಾಣುತ್ತಿದ್ದ ಪುಡಿ ಕುಂಕುಮವಿಟ್ಟು, ಸುಂದರವಾದ ರಂಗೋಲಿ ಬಿಡಿಸುತ್ತ ತೆಳ್ಳನೆಯ ಧ್ವನಿಯಲ್ಲಿ ಹಾಡು ಹೇಳುತ್ತಿದ್ದ ಲಲಿತಾ ಕಂಡಳು. ನಾನು ಏನೋ ಸಪ್ಪಳ ಮಾಡಿದೆನೋ ನೆನಪಿಲ್ಲ. ಅದೇ ಸಮಯಕ್ಕೆ ಅವಳೂ ನಾನಿದ್ದ ಕಿಟಕಿಯ ಕಡೆ ನೋಡಿ, ಒಂದು ಕ್ಷಣ ಹಾಡು ನಿಲ್ಲಿಸಿದಳು. ನಂತರ ಮಂದಸ್ಮಿತೆ ಮುಖದಲ್ಲಿ ಮೂಡಿಸಿಕೊಂಡು ಪುನಃ ಹಾಡು ಆರಂಭಿಸಿ, ರಂಗೋಲಿ ಬಿಡಿಸುವುದನ್ನು ಮುಂದುವರೆಸಿದಳು. ಆ ಕ್ಷಣದಲ್ಲಿ ಪ್ರಾಯಶಃ ನನಗೆ ಅವಳ ಮೇಲೆ ಪ್ರೇಮವುಂಟಾಯಿತು. ಕಿಶೋರಾವಸ್ಥ ಒಲವೋ, ಪರ್ಯಂತ ಪ್ರೇಮವೋ, ಅವಳು ನನ್ನ ಅಂತರಾಳದಲ್ಲಿ ಸಂಪೂರ್ಣವಾಗೆ ಬೆರೆತುಹೋದಳು.

ಎರಡು ದಿನಗಳ ನಂತರ ನಾವು ಮಾವನ ಮನೆ ಬಿಟ್ಟು ಊರಿಗೆ ಹಿಂತಿರುಗಿದೆವು. ಆ ಎರಡು ದಿನಗಳಲ್ಲಿ ಲಲಿತಾ-ನನ್ನ ಮಧ್ಯೆ ಹೇಗೋ ಆತ್ಮೀಯತೆ ಬೆಳೆದುಕೊಂಡಿತ್ತು. ಪತ್ರಗಳ ಮೂಲಕ ಸಂಪರ್ಕದಲ್ಲಿರೋಣವೆಂದು ಮಾತನಾಡಿಕೊಂಡಿದ್ದೆವು. ಆ ಸುಂದರ ಕಂಗಳಂಚಿನಲ್ಲಿ ಕಣ್ಣೀರು ಜಿನುಗುತ್ತಿದ್ದಂತೆ "ಪತ್ರಗಳನ್ನು ’ಕೇರ್ ಆಪ್ ಪೋಸ್ಟ್‌ಮಾಸ್ಟರ್’ ಬರಿ, ಅಲ್ಲಿಂದ ಪಡೆದುಕೊಳ್ಳುತ್ತೇನೆ. ಇಲ್ಲದಿದ್ದರೆ ಅಪ್ಪ ಗಲಾಟೆ ಮಾಡಿಯಾರು" ಎಂದು ಗುಟ್ಟಾಗಿ ಎಚ್ಚರಿಕೆ ಕೊಟ್ಟು ನನ್ನನ್ನು ಬೀಳ್ಕೊಟ್ಟಳು. ನನ್ನ ಎದೆಯೂ ತುಂಬಿ ಬಂದಿತ್ತು. ಮಾತನಾಡಿದರೆ ನನ್ನ ಮನಸ್ತಿಥಿ ಎಲ್ಲರ ಮುಂದೆ ಬಹೀರಂಗವಾದೀತು ಎಂದು ನಾನೂ ಮೌನವಾಗಿಯೇ ಅವಳಿಂದ ಬೇರ್ಪಟ್ಟೆ.

****

ಅಂದು ರಾತ್ರಿಯೇ ಶುರುವಾಯಿತು. ಮೊದಲಿಗೆ ಚೀಟಿ ಸುಬ್ಬಲಕ್ಷ್ಮಿ ಕೂತಲ್ಲೇ ಸತ್ತುಹೋಗಿದ್ದಳು. ಮರುದಿನ ಬೆಳಗ್ಗೆ ಏಳುವ ಹೊತ್ತಿಗೆ ಹಿಂದಿನ ದಿನದಿಂದ ಆರಾಮವಿಲ್ಲದೆ ತೊಳಲುತ್ತಿದ್ದ ಭಟ್ಟನ ಹೆಂಡತಿ ಅಂಜಲಿ ಪ್ರಾಣ ನೀಗಿದ್ದಳು. ಡಾಕ್ಟರ್ ಸಂಪತ್ ಮತ್ತು ಸುಮನ ಇಬ್ಬರೂ ಸೇರಿ ಸುಬ್ಬಲಕ್ಷ್ಮಿ ಸತ್ತಿದ್ದು ವಿಷದ ಗಣಿಕೆಹಣ್ಣಿನಿಂದ ಎಂದು ಊಹೆ ಮಾಡಿದರು. ಲೋಕೇಶ ಮತ್ತು ವೀಣಾ ಸೇರಿ ಇದನ್ನು ಹೇಗೋ ಆ ಹತ್ತು ಕೋತಿಮರಿಗಳ ಮಕ್ಕಳ ಪದ್ಯಕ್ಕೆ ಕಟ್ಟಿದರು. ಅಷ್ಟರಲ್ಲಿ ತನ್ನ ದುಷ್ಕರ್ಮದಿಂದಲೇ ಬಳಲುತ್ತಿದ್ದ ಕರ್ನಲ್ ರಾಜೇಂದ್ರ‌ಪ್ರಸಾದ್ ಚೂರಿ ಇರಿತದಿಂದ ಕೊಲೆಯಾಗಿದ್ದ. ಇದೂ ಕೋತಿಮರಿ ಪದ್ಯಕ್ಕನುಗುಣವಾಗಿಯೇ ಆಗಿದ್ದರಿಂದ ಉಳಿದವರೆಲ್ಲರು ಹೆದರಿ ಹೋಗಿದ್ದರು.

****

ಅದೇ ವರ್ಷ ನನಗೆ ಕಾಲೇಜ್ ಓದಲು ಬನಾರಸ್ ಹಿಂದು ಯುನಿವರ್ಸಿಟಿಯಲ್ಲಿ ಸೀಟ್ ಸಿಕ್ಕಿ, ನಾನು ವಾರಣಾಸಿಗಿ ಹೋಗಿಬಿಟ್ಟೆ. ಲಲಿತಾಳನ್ನು ಕಾಣುವ ಸಂಭವವಾಗುತ್ತಿದ್ದದ್ದು ಆರು ತಿಂಗಳಿಗೋ ವರ್ಷಕ್ಕೊಮ್ಮೆಯೋ ಊರಿಗೆ ಬಂದಾಗ ಮಾತ್ರ. ಹಾಗಾಗಿ, ಊರಿಗೆ ಬಂದಾಗೆಲ್ಲ ಯಾವ ಮದುವೆ-ಮುಂಜಿ ಇದ್ದರೂ ಅಲ್ಲಿಯಾದರೂ ಲಲಿತಾಳನ್ನು ನೋಡಬಹುದೆಂಬ ಬಯಕೆಯಿಂದ ಬಿಡದೆ ಅಮ್ಮ-ಅಪ್ಪನ ಜೊತೆ ಹೋಗುತ್ತಿದ್ದೆ.

ವರ್ಷಕ್ಕೊಮ್ಮೆಯೋ, ಎರಡು ಬಾರಿಯೋ ಅವಳನ್ನು ನೋಡಿದರೆ ಹೆಚ್ಚು. ಎದುರಿಗೆ ಸಿಕ್ಕಾಗ ಇಬ್ಬರೂ ಪರಸ್ಪರ ಹೆಚ್ಚು ಮಾತನಾಡುವವರೇ ಅಲ್ಲ. ಕದ್ದು-ಕದ್ದು ಅಲ್ಲೊಂದು, ಇಲ್ಲೊಂದು ನೋಟ. ಹೆಚ್ಚೆಂದರೆ ಮದುವೆ-ಮುಂಜಿಗಳ ಕಲ್ಪ ನಡೆಯುತ್ತಿದ್ದಾಗಲೋ ಅಥವ ಊಟಕ್ಕೋ ಹತ್ತಿರ ಕೂರುವುದು. ಬಾಯ್ಮಾತಿನಲ್ಲಿ ಒಂದೆರಡೇ ಮಾತನಾಡಿದರೂ ಅವಳ ಆ ದುಂಡು ಕಂಗಳು ಇಡೀ ಕಾದಂಬರಿಗಳನ್ನೇ ವ್ಯಾಖ್ಯಾನ ಮಾಡಿದಹಾಗೆನ್ನಿಸುತ್ತಿತ್ತು.

ಪತ್ರ ವ್ಯವಹಾರ ಉದ್ದಕ್ಕೂ ಜಾರಿಯಾಗಿಯೇ ಇಟ್ಟಿದ್ದೆವು. ಇಬ್ಬರೂ ಬರವಣಿಗೆಯಲ್ಲಿ ನಿರಾತಂಕವಾಗಿ ವ್ಯವಹರಿಸುತ್ತಿದ್ದೆವು. ವಾರಣಾಸಿಯ ಬಗ್ಗೆ, ಕಾಶಿ, ವಿಶ್ವವಿದ್ಯಾಲಯ, ನನ್ನ ಓದು, ಎಲ್ಲಿಯಾದರೂ ಹೋಗಿದ್ದು, ಬಂದಿದ್ದು, ಕಾಶಿಯ ಸಾಂಸ್ಕೃತಿಕ ಕಾರ್ಯಕ್ರಮಗಳು (ಅವಳಿಗೆ ಸಂಗೀತದ ಕಾರ್ಯಕ್ರಮಗಳೆಂದರೆ ಪ್ರಾಣ) ಎಲ್ಲಾವುದರ ಬಗ್ಗೆ ನಾನು ಬರೆಯುತ್ತಿದ್ದೆ. ಅವಳ ಓದು, ಊರಿನ ಕಡೆ ನೆಂಟರ-ಇಷ್ಟರ ಸಮಾಚಾರ, ಅವರ ಅಪ್ಪ ಅವಳನ್ನು ಬೈದದ್ದು ಇತ್ಯಾದಿಗಳ ಬಗ್ಗೆ ಅವಳು ನನಗೆ ತಿಳಿಸುತ್ತಿದ್ದಳು. ಇಷ್ಟಾದರೂ ನಾವೆಂದೂ ಪ್ರೀತಿ-ಪ್ರೇಮಗಳ ವಿಷಯವಾಗಲಿ, ನಮ್ಮಿಬ್ಬರ ಭವಿಷ್ಯದ ವಿಷಯವಾಗಲಿ ಮಾತನಾಡಿದವರೇ ಅಲ್ಲ. ಆದರೂ ಇಬ್ಬರಿಗೂ ಪರಸ್ಪರ ಮತ್ತೊಬ್ಬರ ಮನಸ್ಸಿನಲ್ಲಿ ಇರುವ ಅನುಪಮ ಅಂತರಂಗ ಪ್ರೇಮ ಹೇಗೋ ತಿಳಿದಿತ್ತು. ಕಣಕಣದಲ್ಲಿ ಲಲಿತಾ ಬೆರೆತು ಹೋಗಿದ್ದಳು. ಭವಿಷ್ಯವೆಲ್ಲ ಪ್ರಕಾಶಮಯ, ಲಲಿತಾಮಯವಾಗಿ ಕಾಣಿಸುತ್ತಿತ್ತು.

****

ಆರು ವರ್ಷಗಳು ಕಳೆದುಹೋದವು. ನಾನಿನ್ನೂ ಬನಾರಸ್ ನಿವಾಸಿಯಾಗಿಯೇ ಇದ್ದೆ. ಬ್ಯಾಚುಲರ್ಸ್ ಡಿಗ್ರಿ ಮುಗಿಸಿ, ನಂತರ ಮಾಸ್ಟರ್ಸ್ ಓದಲು ಸೇರಿದ್ದೆ. ಓದಿನ ಕೊನೆಯ ವರ್ಷದ ಪರೀಕ್ಷೆಗಳು ಹತ್ತಿರ ಬಂದಿದ್ದವು. ಕೆಲಸ ಆಗಲೆ ಸಿಕ್ಕಿತ್ತು. ಪರೀಕ್ಷೆ ಮುಗಿದ ಕೂಡಲೆ ದೆಹಲಿಯಲ್ಲಿ ಕೆಲಸಕ್ಕೆ ಸೇರುವುದಿತ್ತು. ಮದುವೆಯಾದರೆ ಲಲಿತಾಳನ್ನೇ ಎಂದು ನಿರ್ಧರಿಸಿದ್ದೆ. ಕೆಲಸಕ್ಕೆ ಸೇರಿದ ನಂತರ ಊರಿಗೆ ಹೋಗಿ ಲಲಿತಾಳ ವಿಷಯ ಅಪ್ಪ-ಅಮ್ಮನ ಜೊತೆ ಮಾತನಾಡಿ, ಹೇಗಾದರೂ ಅವರನ್ನು, ಮಾವನನ್ನೂ ಒಪ್ಪಿಸಿ ಅವಳನನ್ನು ನನ್ನ ಸಂಗಾತಿಯಾಗಿ ಮಾಡಿಕೊಳ್ಳಬೇಕೆಂದು ಯೋಚಿಸಿದ್ದೆ.

ಮಾನವೇಚ್ಛೆ ಒಂದಾದರೆ ದೈವೇಚ್ಛೆ ಮತ್ತೊಂದು. ಅದೇ ಸಮಯದಲ್ಲಿ ಕಾಶಿಯಲ್ಲಿ ಹುಚ್ಚು ಮಳೆ ಹಿಡಿದಿತ್ತು. ಉತ್ತರ ಭಾರತದಲ್ಲೆಲ್ಲ ೧೦ ದಿನಗಳ ನಿರಂತರ ಮಳೆಯಾಗಿ ಗಂಗಾನದಿಯಲ್ಲಿ ಪ್ರವಾಹ ಬಂದು ಕಾಶಿಯೆಲ್ಲ ಮುಳುಗಿ ಹೋಗಿತ್ತು. ಹೀಗಾಗಿ ಅವಳ ಆ ಪತ್ರ ನನಗೆ ಮೂರ್ನಾಲ್ಕು ದಿನ ತಡವಾಗಿ ಸಿಕ್ಕಿತು. ಅದರಲ್ಲಿ ಅವಳು ನಮ್ಮ ಮಾವ ತನಗೆ ಇಷ್ಟವಿಲ್ಲದ ಮದುವೆ ಮಾಡಿಕೊಳ್ಳಲು ಆಜ್ಞೆ ಮಾಡಿದ್ದಾರೆಂದು ಬರೆದಿದ್ದಳು. "ಅಪ್ಪ ಯಾವುದೇ ಕಾರಣಕ್ಕೂ ಈ ಮದುವೆ ತಡೆದು ನಿನ್ನನ್ನು ಮದುವೆ ಮಾಡಿಕೊಳ್ಳೋಕ್ಕೆ ಒಪ್ಪೋದಿಲ್ಲ. ಕೂಡಲೆ ಬಾ ಓಡಿಹೋಗಿಯಾದರೂ ಮದುವೆಯಾಗೋಣ" ಎಂದು ಯಾಚಿಸಿಕೊಂಡಿದ್ದಳು.

****

ಮರುದಿನ ಬೆಳಗ್ಗೆ ’ಬರ್ರೋ’ ಎಂದು ಮಳೆ ಹುಯ್ಯುತ್ತಿತ್ತು. ನನಗೆ ಲಲಿತಾಳ ಆ ಕಾಗದ ಬಂದ ದಿನದ ನೆನಪೇ ಕಾಡಿತು. ಲೋಕೇಶ ಭಟ್ಟನನ್ನು ಎಳೆದುಕೊಂಡು ದ್ವೀಪದಿಂದ ಪಾರಾಗಲು ದೋಣಿ ಸಿಗುತ್ತದೆಯೋ ನೋಡಲು ಹೋಗಿ ಬರಿ ಕೈಯಲ್ಲೇ ಹಿಂತಿರುಗಿದ್ದ. ಡಾಕ್ಟರ್‌ಗೆ ಕಾಫಿ ಕೊಡಲು ಹೋಗಿದ್ದ ನಾನು ಹಿಂತಿರುಗಿದಾಗ ಇನ್ನೆರಡು ಕೋತಿಮರಿಗಳು ಮಾಯವಾಗಿರುವುದನ್ನು ಕಂಡೆ. ಎಲ್ಲರಿಗೂ ಆತಂಕ. ಬಟ್ಟೆ ಬದಲಾಯಿಸಲು ಹೋಗಿದ್ದ ಲೋಕೇಶ, ಮತ್ತು ಅಡುಗೆಮನೆಗೆ ಹೋಗಿದ್ದ ಭಟ್ಟ ಬಿಟ್ಟು ಎಲ್ಲರೂ ಕಣ್ಣಿಗೆ ಕಾಣಿಸುತ್ತಿದ್ದರು.

ಭಟ್ಟನನ್ನು ಹುಡುಕಿಕೊಂಡು ಹೋದ ಮೂರ್ತಿ ಏದುಸಿರು ಬಿಡುತ್ತ ಬಂದು ಒನಕೆ ಪೆಟ್ಟಿನಿಂದ ಭಟ್ಟ ಸತ್ತು ಬಿದ್ದಿದ್ದಾನೆಂದು ತಿಳಿಸಿದರು. ಅಷ್ಟರಲ್ಲೆ ಲೋಕೇಶ ಬಟ್ಟೆ ಬದಲಾಯಿಸಿ ಹಿಂತಿರುಗಿದಾಗ ತಿಳಿದಿದ್ದು ಕೂತಲ್ಲೇ ವಿಷದ ಇಂಜೆಕ್ಷನ್‌ನಿಂದ ಸಿಸ್ಟರ್ ರೋಸ್‌ಮೇರಿ ಹತ್ಯೆಯಾಗಿದೆಯೆಂದು.

ಎಲ್ಲರಿಗೂ ಇನ್ನಷ್ಟು ಆತಂಕ ಹೆಚ್ಚಿತು. ಕಂಗಾಲಾಗಿ ಮುಂದೇನು ಮಾಡಬೇಕೆಂದು ತಿಳಿಯಲಾರದೆ ತೊಳಲಾಡುತ್ತಿದ್ದರು. ಎಲ್ಲರಿಗೂ ಉಳಿದವರೆಲ್ಲರ ಮೇಲೆ ಅನುಮಾನ. ಆಗ ನಾನೇ ಮುಂದಾಳತ್ವ ವಹಿಸಿ ಎಲ್ಲರಿಗೂ ಸಮಾಧಾನ ಮಾಡಿಸಿ ಒಟ್ಟಿಗೆ ಇದ್ದರೆ ಕೊಲೆಗಳು ಮರುಕಳಿಸಲಾಗದೆಂದು ಹೇಳಿದೆ. ನಾನು ಹಾಕಿದ ಕಟ್ಟಳೆಗಳನ್ನು ಪಾಲಿಸಿದರೆ ಮಾರನೆಯ ದಿನದವರೆಗು ಬದುಕುಳಿಯಬಹುದೆಂಬ ಭರವಸೆ ಮೂಡಿಸಿದೆ.

****

ಪ್ರವಾಹದಿಂದ ಬಸ್ಸು-ರೈಲುಗಳ ಸಂಚಾರ ಕಡಿದು ಹೋಗಿತ್ತು. ಸೈಕಲ್ ತುಳಿದುಕೊಂಡು ಹೋಗಿ ಬಿಹಾರ ರಾಜ್ಯದೊಳಕ್ಕೆ ಸೇರಿದೆ. ಅಲ್ಲಿ ಒಂದು ಟ್ರ್ಯಾಕಾಟರ್, ಒಂದು ಎತ್ತಿನ ಗಾಡಿ, ನಂತರ ಒಂದು ಗ್ರಾಮೀಣಸಾರಿಗೆ ಬಸ್ ಹಿಡಿದು ಕಲ್ಕತ್ತಾ ಸೇರಿಕೊಂಡೆ. ಮರುದಿನ ಕಲ್ಕತ್ತಾದಿಂದ ರೈಲು ಹಿಡಿದು ವಾಪಸ್ ಊರು ಸೇರುವಷ್ಟು ಹೊತ್ತಿಗೆ ಎರಡು ದಿನಗಳು ಮೀರಿದ್ದವು. ಆದರೆ ಎಲ್ಲ ಸಂಪೂರ್ಣ ವ್ಯರ್ಥವಾಗಿಹೋಯಿತು.

ಲಲಿತಾಳ ಮನೆಗೆ ಹೋಗುವ ದಾರಿಯಲ್ಲಿ, ಹೊಳೆಯ ದಂಡೆಯಲ್ಲಿ ಗಲಾಟೆಯಾಗುತ್ತಿದ್ದದ್ದನ್ನು ನೋಡಿ ಅಲ್ಲಿಗೆ ಹೋದೆ. ಅಲ್ಲಿ ತಿಳಿದದ್ದು ನಾನು ಹಿಂತಿರುಗುವುದು ತಡವಾಗಿಹೋಗಿತ್ತು ಎಂದು. ಲಲಿತಾ ಎರಡು ದಿನಗಳ ಹಿಂದೆಯೇ ಹೊಳೆಗೆ ಹಾರಿ ಪ್ರಾಣ ಕೊಟ್ಟಿದ್ದಳು. ಆಗಿನ್ನು ಲಲಿತಾಳ ಮೃತದೇಹ ಸಿಕ್ಕಿತ್ತು. ಅವಳ ಹೆಸರನ್ನು ಜೋರಾಗಿ ಕೂಗುತ್ತ ಅವಳನ್ನು ನನ್ನ ತೊಡೆಯ ಮೇಲೆ ಮಲಗಿಸಿಕೊಂಡು, ತಬ್ಬಿ, ಅತ್ತೆ. ಸಿಡಿಲು ಬಡಿದಂತಾಗಿತ್ತು. ಬಹುಶಃ ನನ್ನ ಮಾನಸಿಕ ಸಂತುಲನವೇ ಕಳೆದು ಹೋಗಿತ್ತು. ಅವಳು ಇನ್ನಿಲ್ಲವೆಂದು ನನ್ನ ಮನಸಿನೊಳಗೆ ನಾಟಲೇ ಇಲ್ಲ.

ಮಲಗಿ ನಿದ್ದೆ ಮಾಡಿದವಳಂತೆ ಕಾಣಿಸುತ್ತಿದ್ದಳು. ಅವಳ ಕೆನ್ನೆಯ ಅಂಕ, ಅವಳ ತುಂಬು ತುಟಿಗಳು, ಅವಳ ಮುದ್ದಾದ ಮುಖ, ಉದ್ದನೆಯ ಕೂದಲು ಹಾಗೇ ಇದ್ದವು. ಅವಳನ್ನು ಅಲ್ಲಾಡಿಸುತ್ತ, ಅವಳ ಕೆನ್ನೆ ಸವರುತ್ತ "ಲಲಿತಾ... ಲಲಿತಾ..." ಎಂದು ಕೂಗುತ್ತ ಅವಳ ಕೆನ್ನೆ ತಟ್ಟಿ ಅವಳನ್ನು ಎಬ್ಬಿಸಲು ಪ್ರಯತ್ನಿಸಿದ ಹಾಗೆ ನೆನಪು. ಆದರೆ ಇನ್ನೆಲ್ಲಿ ಲಲಿತಾ. ನನ್ನ ಜೀವನ ಸಂಪೂರ್ಣ ಕತ್ತಲು ತುಂಬಿದಂತೆ ಕಾಣಿಸುತ್ತಿತ್ತು.

ಮಾವನಿಗೆ ಯಾರೋ ಹೋಗಿ ಹೇಳಿದ್ದರೋ ಎನೋ. ಅಂತು ವಿಷಯ ತಿಳಿದು, ಲಲಿತಾಳನ್ನು ನಾನು ತೊಡೆಯಮೇಲೆ ಮಲಗಿಸಿಕೊಂಡಿದ್ದ ಕಡೆ ಬಂದ. ನನ್ನನ್ನು ನೋಡಿ ಒಂದು ಮಾತೂ ಆಡದೆ, ಯಾವ ದುಃಖವನ್ನು ವ್ಯಕ್ತ ಪಡಿಸದೆ, ಹೆಗಲ ಮೇಲಿನ ಟವಲ್ ತೆಗೆದು, ಕೊಡವಿ, ಮಗಳಲ್ಲ ಯಾರೋ ಎಂಬಂತೆ ಹಿಂತಿರುಗಿ ಹೊರಟುಹೋದ.

ವಾರಣಾಸಿಗೆ ಹಿಂತಿರುಗಿದ ಮೇಲೆ ಲಲಿತಾ ಬರೆದಿದ್ದ ಕೊನೆಯ ಪತ್ರ ಕೈಗೆ ಸಿಕ್ಕಿತು. ಅದರಲ್ಲಿ ಅಪ್ಪನ ಒತ್ತಾಯ ತಡೆಯಲಾರದೆ ಹೇಗೋ ಧೈರ್ಯ ಮಾಡಿ, ನನ್ನನ್ನು ಪ್ರೇಮಿಸುತ್ತಿರುವುದಾಗಿ, ಮದುವೆಯೆಂದಾದರೆ ಕೇವಲ ನನ್ನನ್ನೇ ಮದುವೆಯಾಗುವುದಾಗಿ ಹೇಳಿಕೊಂಡಿದ್ದ ವಿಷಯ ಬರೆದಿದ್ದಳು. ಆಗ ಕೋಪಗೊಂಡು, ಅವಳನ್ನು ಗದರಿ, ಬೈದು, ಅವಳನ್ನು ಮನೆಯಲ್ಲಿ ಕೂಡಿಹಾಕಿ, ತಾನು ಹೇಳಿದ ಮದುವೆಗೆ ಒಪ್ಪಲೇ ಬೇಕೆಂಬ ಹಟ ಹಿಡಿದನಂತೆ ಆ ಕಟುಕ. ಪಾಪ ಲಲಿತಾಳಿಗೆ ಅವರಪ್ಪನನ್ನು ಕಂಡರೆ ಮೊದಲೇ ಭಯ. ಹುಲಿಯ ಕೈಯಲ್ಲಿ ಸಿಕ್ಕ ಜಿಂಕೆಮರಿಯಂತಾಗಿತ್ತು ನನ್ನ ಲಲಿತಾಳ ಗತಿ.

ಅತ್ತ ಅಪ್ಪನ ಹಿಂಸೆ ತಾಳಲಾರದೆ, ಇತ್ತ ನಾನೂ ಅಲ್ಲಿಗೆ ಬಾರದೆ, ಆತ್ಮಹತ್ಯೆಯೊಂದೇ ತನಗುಳಿದಿರುವ ದಾರಿ, ನನ್ನನ್ನು ಮುಂದಿನ ಲೋಕದಲ್ಲಿ ಕಾಣುವುದಾಗಿ ಬರೆದು, ಶಾಶ್ವತವಾಗಿ ಅವಳು ನನ್ನವಳೇ, ನನ್ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿರುವುದಾಗಿ ಹೇಳಿ ಪತ್ರ ಮುಗಿಸಿದ್ದಳು. ನಾನೂ ಅವಳನ್ನು ಅಷ್ಟೇ, ಅದಕ್ಕಿಂತ ಹೆಚ್ಚು ಪ್ರೀತಿಸುತ್ತಿರುವ ವಿಷಯ ಅವಳಿಗೆ ಹೇಳಲು ಆಗಲೇಯಿಲ್ಲ. ಅವಳ ಆ ಪತ್ರ ಹಿಡಿದು ಆರು ತಿಂಗಳು ಪ್ರತಿದಿನ ಅತ್ತಿದ್ದೆ.

****

ಡಕ್ಟರ್‌ಗೆ ಕಾಪಿ ಕೊಡಲು ಹೋದಾಗ ಅವನ ಜೊತೆ ಒಂದು ರಹಸ್ಯ ಒಪ್ಪಂದ ಮಾಡಿಕೊಂಡಿದ್ದೆ. ಮುಂದೆ ಅವಕಾಶ ಒದಗಿದಾಗ ನಾನು ಸಾಯುವ ನಾಟಕ ಮಾಡುವುದಾಗಿ, ನಾನು ಸತ್ತಿರುವೆ ಎಂದು ಅವನು ಉಳಿದವರನ್ನೆಲ್ಲ ನಂಬಿಸಲು ಹೇಳಿದ್ದೆ. ಹೀಗಾದರೆ ನಾನು ನಿಜವಾದ ಕೊಲೆಗಾರನ ಮೇಲೆ ಕಣ್ಣಿಡಲು ಸಾಧ್ಯವಾಗುತ್ತದೆ, ಕೊಲೆಗಾರನನ್ನು ಹಿಡಿಯಬಹುದೆಂದು ಅವನನ್ನು ನಂಬಿಸಿದ್ದೆ.

ಅದರಂತೆಯೇ ಮೂರ್ತಿ ಪಿಸ್ತೂಲನ್ನು ಮೆಲ್ಲನೆ ಎತ್ತಿ, ಆ ಹುಡುಗಿ, ಸುಮನ, ಲೈಟಿನ ಮೇಲೆ ಎಡವಿ ದೀಪಗಳೆಲ್ಲ ಆರಿದಾಗ ನಾನೇ ಗುಂಡು ಹಾರಿಸಿ ಸತ್ತಿರುವ ನಾಟಕ ಮಾಡಿದೆ. ಡಾಕ್ಟರ್ ಆ ನಾಟಕವನ್ನು ಮುಂದುವರೆಸಿ, ಎಲ್ಲರೂ ನಾನೇ ಆರನೆಯ ಕೋತಿಮರಿ ಎಂದು ನಂಬುವ ಹಾಗೆ ಮಾಡಿದ. ಇನ್ನುಳಿದದ್ದು ನಾಲ್ಕು ಕೋತಿಮರಿಗಳು - ಡಾಕ್ಟರ್, ಮೂರ್ತಿ, ಲೋಕೇಶ, ಮತ್ತು ವೀಣಾ.

****

ಮಾವನ ಮೇಲೆ ನನಗೆ ಆರಿಸಲಾರದ ಕೋಪ ಹತ್ತಿತು. ನನ್ನ ಲಲಿತಾಳನ್ನು ಕತ್ತು ಹಿಸುಕಿ ಕೊಂದಷ್ಟೇ ಪಾಪಿಷ್ಟ ಅವನು. ಆದರೂ ಕಿಂಚಿತ್ತೂ ಪಶ್ಚಾತಾಪವಿಲ್ಲ ಅವನಿಗೆ. ಕೊಲೆಗಾರರಿಗೆ ಕಾನೂನು ಕೊಡುವುದು ಮರಣ ದಂಡನೆ. ಆದರೆ ಕಾನೂನಿನಿಂದ ಮಾವನಿಗೆ ಆ ಶಿಕ್ಷೆ ಸಿಗಲಾರದು. ಯಾರಿಗೂ ಹೇಳದೆ ಮತ್ತೆ ಲಲಿತಾಳ ಊರು ಸೇರಿದೆ. ಮಾವ ಸ್ನಾನಕ್ಕೆಂದು ಹೊಳೆಗೆ ಬಂದಾಗ ನಾನು ನೀರಿನೊಳಗೇ ಕಾದಿದ್ದೆ. ಕಳೆದ ೬ ವರ್ಷಗಳಿಂದ ಯೋಗ, ಪ್ರಾಣಾಯಾಮ ಮಡುತ್ತಿದ್ದ ನನಗೆ ಉಸಿರು ಹಿದಿದುಕೊಳ್ಳುವುದೇನೂ ಕಷ್ಟವಾಗಿರಲಿಲ್ಲ. ಅವನು ಮೂಗು ಹಿಡುದು ಮಳುಗುತ್ತಿದ್ದಂತೆ ನಾನು ಅವನ ಬಳಿ ಹೋಗಿ ಅವನ ಕತ್ತು ಹಿಡಿದು ಅವನನ್ನು ನೀರಿನಿಂದ ಮೇಲೇಳಲು ಬಿಡಲೇಯಿಲ್ಲ. ಮೂರ್ನಾಲ್ಕು ನಿಮಿಷಗಳ ನಂತರ ಒದ್ದಾಟ ನಿಂತಿತು. ಅವನ ಉಸಿರೂ ನಿಂತಿತ್ತು. ಮಾವನಿಗೆ ತಕ್ಕ ಶಿಕ್ಷೆ ವಿಧಿಸಿದ್ದೆ.

ಪುನಃ ಯಾರಿಗೂ ಹೇಳದಂತೆ ಹೋಗಿ ವಾರಣಾಸಿ ಸೇರಿಕೊಂಡೆ. ಲಲಿತಾಳನ್ನು ನಾನು ಮದುವೆಯಾಗಿರಲಿಲ್ಲ, ಆದರೆ ಅವಳು ನನ್ನನ್ನೇ ಗಂಡ ಅಂದುಕೊಂಡಿದ್ದಳು. ನಾನು ಅವಳನ್ನು ಸಾಯಿಸಲಿಲ್ಲ, ಆದರೆ ಅವಳು ನನ್ನಿಂದಲೇ ಸತ್ತು ಹೋದಳೆಂದು ಆರು ತಿಂಗಳು ಮಂಕಾಗಿಹೋಗಿದ್ದೆ. ಆದರೆ ಮಾವನಿಗೆ ಶಿಕ್ಷೆ ವಿಧಿಸಿದ್ದಕ್ಕೆ ನನಗಾವ ಪಾಶ್ಚಾತಾಪವೂ ಇರಲಿಲ್ಲ.

ಓದು ಅಲ್ಲಿಗೇ ನಿಲ್ಲಿಸಿ ಹಿಮಾಲಯಕ್ಕೆ ತೆರಳಿದೆ. ಅಲ್ಲಿ ಗುರುಗಳು ಸಿಕ್ಕಿ, ಯೋಗ, ಇತ್ಯಾದಿಗಳಲ್ಲಿ ವ್ಯಸ್ಥನಾದೆ. ಕ್ರಮೇಣ ಊರಿಗೆ ಹಿಂತಿರುಗಿ ನನ್ನದೇ ಟಿ.ವಿ. ಕಾರ್ಯಕ್ರಮ ಶುರು ಮಾಡಿ ಟಿ.ವಿ.ಯಲ್ಲಿ ಯೋಗ ಪಾಠ ಹೇಳಿಕೊಡಲಾರಂಭಿಸಿದೆ. ಅದೇ ಸ್ಟುಡಿಯೋದಲ್ಲಿ "ಆಪ್ತ ಸಲಹೆ" ಎಂಬ ಕಾರ್ಯಕ್ರಮ ನಡೆಯುತ್ತಿತ್ತು. ಆ ಕಾರ್ಯಕ್ರಮಕ್ಕೆ ಬರುತ್ತಿದ್ದ ಪತ್ರಗಳನ್ನು ನಿರ್ಲಕ್ಷ್ಯವಾಗಿ ಅಲ್ಲಿಲ್ಲಿ ಎಸೆದಿರುತ್ತಿದ್ದರು. ಹಾಗೇ ಒಮ್ಮೆ ಒಂದು ಕಾಗದ ಓದುವಾಗ ಮಾವನಂತಹ ಕೊಲೆಗಾರರು ಬೇಕಾದಷ್ಟು ಮಂದಿ ಆರಾಮವಾಗಿ ಓಡಾಡಿಕೊಂಡಿದ್ದಾರೆಂದು ಗೋಚರವಾಯಿಯಿತು. ಲಲಿತಾಳ ಸಾವಿನ ನಂತರ ಮೇಲ್ಪದರಿನ ಸ್ವಲ್ಪವೇ ಕೆಳಗಿದ್ದ ಕೋಪ ಮತ್ತೆ ಮರುಕಳಿಸಿತು.

ಆ ಪತ್ರಗಳ ಮೂಲಕ ಕೊಲೆಗಾರರೆಂದು ನನಗನ್ನಿಸಿದ ೯ ಜನರನ್ನು ಹೆಕ್ಕಿ ತೆಗೆದೆ. ಇವರಿಗೆ ನ್ಯಾಯವಾಗಿ ಬರಬೇಕಾದ ಶಿಕ್ಷೆ ಕೊಡುವುದೇ ನನ್ನ ಗುರಿ. ದ್ವೀಪದ ಮಧ್ಯದ ಗಾಜಿನ ಮನೆಯನ್ನು ಬಾಡಿಗೆಗೆ ತೊಗೊಂಡೆ. ದ್ವೀಪದಲ್ಲಿ ಹೊರಗಿನ ಸಂಪರ್ಕ ಸಾಧ್ಯವಿಲ್ಲ. ದ್ವೀಪಕ್ಕೆ ಹೋಗಲು, ಬರಲು ದಿನಕ್ಕೆರಡು ದೋಣಿ ಬಿಟ್ಟರೆ ಬೇರೆ ಸಾಧನೆಯಿಲ್ಲ. ೯ ಜನರನ್ನು ಒಂದಲ್ಲ ಮತ್ತೊಂದು ಕಾರಣವಾಗಿ ಒಂದೇ ದಿನ ಗಾಜಿನ ಮನೆಗೆ ಬರುವಹಾಗೆ ಮಾಡಿ, ನಾನೂ ಅಲ್ಲಿಗೆ ಹೋದೆ. ಆ ಹುಡುಗಿ ಸುಮನ ಬರುವ ವಿಷಯ ಮಾತ್ರ ನನಗೆ ತಿಳಿದಿರಲಿಲ್ಲ.

ಸಾಲ ತೊಗೊಂಡ ಸಿದ್ದಪ್ಪನನ್ನು ಆಕ್ಸಿಡೆಂಟ್ ಮಾಡಿಸಿ ಕೊಲೆ ಮಾಡಿದ ಸುಬ್ಬಲಕ್ಷ್ಮಿಗೆ ವಿಷದ ಗಣಿಕೆಹಣ್ಣು ಸೇವಿಸಿ ಸಾವು. ಹಣದಾಸೆಗೆ ಕೆಲಸ ಕೊಟ್ಟ ನಾಗಲಕ್ಷಮ್ಮಳನ್ನು ಕೊಂದ ಅಂಜಲಿಗೆ ನಿದ್ದೆ ಔಷದಿಯ ಸಾವು, ಹಾಗು ಅದೇ ಕೊಲೆಯಲ್ಲಿ ಶಾಮೀಲಾದ ಭಟ್ಟನಿಗೆ ಒನಕೆ ಏಟಿನ ಸಾವು. ಸಹೋದ್ಯೋಗಿ ಗೌತಮ್ ಪುರಾಣಿಕ್‌ನನ್ನು ಫ್ರೆಂಡ್ಲಿಫಯರ್‌ನಿಂದ ಕೊಲ್ಲಿಸಿದ ಕರ್ನಲ್ ರಾಜೇಂದ್ರಪ್ರಸಾದ್‌ಗೆ ಛೂರಿ ಇರಿತದ ಸಾವು. ಸ್ಕೂಲ್ ಹುಡುಗಿ ಕಲಾಳನ್ನು ಬೈದು, ಹೆದರಿಸಿ ಅವಳ ಸಾವಿಗೆ ಕಾರಣಳಾದ ಸಿಸ್ಟರ್ ರೋಸ್‌ಮೇರಿಗೆ ವಿಷದ ಇಂಜೆಕ್ಷನ್.

ಕರೀಗೌಡನನ್ನು ತನ್ನ ಅಜಾಗರೂಕತೆಯಿಂದ ಕೊಂದ ಡಾಕ್ಟರ್ ಸಂಪತ್‌ಕುಮಾರ್‌ಗೆ ಜಲಸಮಾಧಿ - ಅವನನ್ನು ಪ್ರಪಾತದ ಮೇಲಿಂದ ಸಮುದ್ರಕ್ಕೆ ತಳ್ಳಿ ಅವನ ಕತೆ ಅಲ್ಲೇ ಮುಗಿಸಿದೆ. ಸೇಡಿನಿಂದ ಕ್ಯಾಶಿಯರ್ ಜಗನ್ನಾಥಶೆಟ್ಟಿಯ ಹೆಸರನ್ನು ಅಪರಾಧಿಗಳ ಪಟ್ಟಿಗೆ ಸೇರಿಸಿ ಅವನ ಸಾವಿಗೆ ಕಾರಣನಾದ ದಿನಕರ ಪ್ರಭು ಉರ್ಫ್ ವೆಂಕಟೇಶ ಮೂರ್ತಿಯನ್ನು ಚಪ್ಪಡಿಕಲ್ಲು ತಲೆಮೇಲೆ ಹಾಕಿ ಮುಗಿಸಿದೆ.

ನಾನು ಸೈಕೋಪಥಿಕ್ ಕೊಲೆಗಾರನಾಗಿದ್ದೇನೆಯೇ ಎಂಬ ಯೋಚನೆ ಬಂದು, ನನ್ನ ಬುದ್ಧಿಯನ್ನು ನಾನೇ ವಿಚಾರಿಸಿಕೊಂಡು ನೋಡಿದೆ. ನನ್ನ ಕೈಯಲ್ಲಿ ಹತರಾದ ಜನರು ದ್ವೇಷ, ಅಸೂಯೆ, ಕಿಚ್ಚು, ದರ್ಪ, ಪ್ರಮಾದ, ಧನಮದಗಳ ಕಾರಣಗಳಿಂದಾಗಿ ಕೊಲೆ ಮಾಡಿದವರು. ಇವರೆಲ್ಲ ಕಡಾಖಂಡಿತವಾಗಿ ತಪ್ಪಿತಸ್ತರು ಎನ್ನುವುದರಲ್ಲಿ ನನಗಾವ ಸಂದೇಹವೂ ಇರಲಿಲ್ಲ. ಅದೇ ರೀತಿ ಇವರಾರು ಕಾನೂನು-ಕೋರ್ಟುಗಳ ಹಿಡಿತಕ್ಕೆ ಸಿಕ್ಕುವವರಲ್ಲವೆಂದೂ ತಿಳಿದಿತ್ತು. ಹಾಗಾಗಿ ಅವರಿಗೆಲ್ಲ ಅವರವರ ಅಪರಾಧಗಳಿಗೆ ತಕ್ಕಂತೆ ಮರಣ ದಂಡನೆ ವಿಧಿಸಿದ್ದೆ. ನನಗೆ ಇನ್ಯಾರ ಪ್ರಾಣವನ್ನೂ ಆಹುತಿ ತೆಗೆದುಕೊಳ್ಳುವ ಅಪೇಕ್ಷೆಯಾಗಲಿ ಅಗತ್ಯವಾಗಲಿ ಕಾಣಿಸಲಿಲ್ಲ. ಹಾಗಾದರೆ ನನ್ನ ಬುದ್ಧಿ ನನ್ನ ಹಿಡಿತದಲ್ಲೇ ಇದೆ. ನಾನು ಸೈಕೋಪಥಿಕ್ ಕೊಲೆಗಾರನಾಗಿಲ್ಲವೆಂದು ನಂಬಿದ್ದೇನೆ.

ಲೋಕೇಶನ ಪ್ರಕಾರ ತಾನು ಲೋಕೇಶನಲ್ಲವೇ ಅಲ್ಲವಂತೆ. ಅವನು ರಮೇಶನಂತೆ, ನಾನು ಲೋಕೇಶನಿಗೆ ಕಳಿಸಿದ್ದ ಆಹ್ವಾನ-ಪತ್ರ ಹಿಡಿದು ’ವೆಕೇಶನ್’ಗಾಗಿ ಗಾಜಿನ ಮನೆಗೆ ಬಂದನಂತೆ. ಏಕೋ ಏನೋ, ಅವನ ಮಾತಿನ ಮೇಲೆ ನಂಬಿಕೆ ಬರುತ್ತಿದೆ. ವೀಣಾಳ ಪ್ರಕಾರ ಅವಳ ತಪ್ಪು ಕೇವಲ ಮೌನವಾಗಿದ್ದದ್ದು. ಆ ಮಗುವನ್ನು ಅವಳಾಗಲಿ ಅವರ ತಾಯಿಯಾಗಲಿ ಬೇಕೆಂದಾಗಲಿ, ನಿರ್ಲಕ್ಷ್ಯದಿಂದಾಗಲಿ ಕೊಲ್ಲಲಿಲ್ಲವಂತೆ. ಅದೊಂದು ಆಕಸ್ಮಿಕ ಸಾವು ಎಂಬ ನಿರ್ಧಾರಕ್ಕೆ ಬಂದಿದ್ದೇನೆ.

ಲೋಕೇಶ, ವೀಣಾ ಈ ಇಬ್ಬರು ಆಪಾದಿತರನ್ನು ನಿರಪರಾಧಿಗಳೆಂದು ಪರಿಗಣಿಸಿ ಬಿಡುಗಡೆ ಮಾಡಲಾಗುತ್ತದೆ.

ಹತ್ತು ಕೋತಿಮರಿಗಳಲ್ಲಿ ಇವೆರಡನ್ನು ಬಿಟ್ಟು ಇನ್ನುಳಿದಿದ್ದು ಒಂದು ಕೋತಿ ಮರಿ. ಆ ಕೋತಿಮರಿಯೂ ಅಪರಾಧಿಯೇ. ಲಲಿತಾಳ ಅಪ್ಪನನ್ನು ಸೇರಿಸಿ ಒಟ್ಟು ೮ ಕೊಲೆ ಮಾಡಿರುವ ಈ ಕಳ್ಳ ಕೋತಿಮರಿಗೂ, ಈ ನ್ಯಾಯಾಲಯವು ಮರಣದಂಡನೆಯನ್ನೇ ವಿಧಿಸುತ್ತದೆ. ಇದು ಈ ಕೋತಿಮರಿಯ ಶಿಕ್ಷೆಯೂ ಹೌದು, ಪ್ರಾಯಶ್ಚಿತ್ತವೂ ಹೌದು. ಆದರೆ ಆತ್ಮಹತ್ಯೆ ಮಹಾಪಾಪ. ಹಾಗಾಗಿ ಲೋಕೇಶ, ವೀಣ ಇವರಿಬ್ಬರಲ್ಲಿ ಒಬ್ಬರ ಕೈಲಿ ಶಿಕ್ಷೆ ಕೊಡಿಸಿಕೊಳ್ಳಬೇಕು. ಮೂರ್ತಿ ಪಿಸ್ತೂಲು ಅವರ ಕೈಯಲ್ಲಿದೆ. ಯಾರಾದರೂ ಒಬ್ಬರ ಪ್ರಾಣಕ್ಕೆ ಬೆದರಿಕೆ ಹಾಕಿದರೆ ಇನ್ನೊಬ್ಬರು ನನ್ನನ್ನು ಆ ಪಿಸ್ತೂಲಿನಿಂದು ಸುಟ್ಟುಬಿಡುವುದು ಖಂಡಿತ.

ಸುಸ್ತಾಗಿದೆ. ಸಾಕಾಗಿದೆ. ಕೊಲೆಗೆ ಬಹುಶಃ ಮರಣದಂಡನೆ ತಕ್ಕ ಶಿಕ್ಷೆ ಅಲ್ಲವೇನೋ ಎಂಬ ಸಂದೇಹಗಳು ಮೂಡುತ್ತಿವೆ. ಲಲಿತಾ ಈ ಕೋತಿಮರಿಗಾಗಿ ಕಾಯುತ್ತಿದ್ದಾಳೆ. ನನ್ನ ಕಣ್ಣಲ್ಲಿ ಲಲಿತಾಳ ಚಿತ್ರವೇ ತುಂಬಿಕೊಂಡಿದೆ. ಬಂದೆ, ಲಲಿತಾ, ಇಗೋ ಇನ್ನೇನು ಬಂದೇ ಬಿಟ್ಟೆ.

****