Wednesday, January 31, 2007

ರಾಷ್ಟ್ರನಿಧಿ

ರಾಷ್ಟ್ರನಿಧಿ

2007 KKNC ಸ್ವರ್ಣಸೇತು ಪುಸ್ತಕದಲ್ಲಿ ಈ ಕತೆ ಮೂಡಿ ಬಂದಿದೆ.

Language: Kannada
Category: Thriller, Fantasy
Abstract: This is the story of a legendary treasure, weird clues for finding it, and finally the surprising location it exists in. It has historical, fantasy and comtemporary elements.

Keywords: hampi, history, thriller, stone chariot, treasure, vijayanagar, kannada, treasure-hunt, kallina ratha, mysore palace, varaha emblem

Disclaimer: Although this piece alludes to many historical facts, most of them true, not all are. No claims are made for historical accuracy.


"ಸುಮಾರು ಮೂರು ಸಾವಿರ ವರ್ಷಗಳಿಂದ ಕ್ರಿಸ್ತ ಪೂರ್ವ ಹದಿನಾರನೇ ಶತಮಾನದವರೆಗೂ ಭಾರತವೇ ವಿಶ್ವದ ಅತ್ಯಂತ ಸಿರಿವಂತ ದೇಶವಾಗಿತ್ತು. ಒಂಬತ್ತನೇ ಶತಮಾನದಿಂದ ಮಧ್ಯ-ಏಶಿಯಾದ ಮುಸಲ್ಮಾನ ಆಕ್ರಮಣಕಾರರು, ಬಿಡದೆ ಒಂದೇಸಮನೆ ನಮ್ಮ ದೇಶವನ್ನು ಕೊಳ್ಳೆಹೊಡೆದು ಸಂಪತ್ತನ್ನು ಹೊರದೇಶಗಳಿಗೆ ಸಾಗಿಸಿದ್ದರೂ, ಅವರು ಈ ದೇಶದಲ್ಲಿದ್ದ ಸಂಪತ್ತಿನ ಕೇವಲ ಒಂದು ಸಣ್ಣ ಭಾಗವನ್ನು ಮಾತ್ರ ಹೊರತೆಗೆದುಕೊಂಡು ಹೋಗಿದ್ದರು. ಹದಿನಾರನೇ ಶತಮಾನದಲ್ಲೂ ಈ ಅಪಾರ ಸಂಪತ್ತಿನ ಪ್ರದರ್ಶನವನ್ನು ಕಾಣಬಹುದು" ಭಾಸ್ಕರ ಹೇಳುತ್ತಿದ್ದ.

ಭಾಸ್ಕರ ಹಂಪೆಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಇತಿಹಾಸ ವಿಭಾಗದ ಪ್ರೊಫೆಸರ್. ಅವನ ಸ್ಪೆಶಲೈಸೇಶನ್ ದಕ್ಷಿಣ-ಭಾರತದ ಸಾಮ್ರಾಜ್ಯಗಳು. 'ಹಂಪೆ ಉತ್ಸವ'ದ ಅಂಗವಾಗಿ ಬೆಂಗಳೂರಿನ ಬಸವನಗುಡಿಯಲ್ಲಿರುವ ಭಾರತೀಯ ವಿಶ್ವ ಸಂಸ್ಕೃತಿ ಸಂಸ್ಥೆಯಲ್ಲಿ ಭಾರತದ ಐತಿಹಾಸಿಕ ಸಂಪತ್ತಿನ ಬಗ್ಗೆ ಉಪನ್ಯಾಸ ಮಾಡುತ್ತಿದ್ದ.

"ಈ ಸಂಪತ್ತು ರಾತ್ರೋ-ರಾತ್ರಿ ಹುಟ್ಟಿಕೊಂಡದ್ದಲ್ಲ. ಇದು ಸಾವಿರಾರು ವರ್ಷಗಳಿಂದ ಶೇಖರಿಸಿಕೊಂಡು ಬಂದಂತಹ ಐಶ್ವರ್ಯ. ಇದರ ಬೀಜ ಮೌರ್ಯವಂಶದ ಸಾಮ್ರಾಟ್ ಅಶೋಕನ ಕಾಲದಲ್ಲಿ ಬಿತ್ತಿದ್ದಿರಬಹುದು. ನಂತರ ಶತವಾಹನರ ಕಾಲದಲ್ಲಿ-ಅಂದರೆ ಸುಮಾರು ಕ್ರಿ.ಪೂ.ನಾಲ್ಕನೆಯ ಶತಮಾನದವರೆಗು ಶತವಾಹನರು ಇದನ್ನು ನಿಭಾಯಿಸಿಕೊಂಡು ಬಂದರು. ಶತವಾಹನರ ನಂತರ ಈ ನಿಧಿಯು ಮಯೂರಶರ್ಮನೆಂಬ ಬ್ರಾಹ್ಮಣನ ಕೈಹತ್ತಿದಾಗ ಅವನು ಪಲ್ಲವರ ವಿರುದ್ಧ ದಂಗೆಯೆದ್ದು ವೈಜಯಂತೀನಗರಿ-ಇಂದಿನ ಬನವಾಸಿಯಲ್ಲಿ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿಕೊಂಡ. ಅದೇ ಸಮಯದಲ್ಲಿ ಈ ನಿಧಿಯು ದ್ವಿಗುಣವಾಯಿತೆಂದು ತೋರುತ್ತದೆ. ಸುಮಾರು ಇನ್ನೂರು ವರ್ಷಗಳ ಕಾಲ ಕದಂಬರು ಇದನ್ನು ಉಣಿಸುತ್ತ ಕಾಪಾಡಿದರು. ಮುಂದೆ ಐದನೇ ಶತಮಾನದ ಮಧ್ಯಭಾಗದಲ್ಲಿ ಕದಂಬರ ಸಾಮಂತನಾಗಿದ್ದ ಪುಲಿಕೇಶಿ ಇದನ್ನು ಅಪಹರಿಸಿ ವಾತಾಪಿ-ಇಂದಿನ ಬಾದಾಮಿಯಲ್ಲಿ ಚಾಳುಕ್ಯವಂಶವನ್ನು ಸ್ಥಾಪಿಸಿದ. ಅನೇಕ ಯುದ್ಧಗಳಿಂದ ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ಈ ಬೊಕ್ಕಸಕ್ಕೆ ಮಧ್ಯಭಾರತದ ಸಂಪತ್ತು ಸೇರಿಕೊಂಡು ಇದು ನೂರುಪಟ್ಟು ಹೆಚ್ಚಿತು. ಚಾಳುಕ್ಯರ ನಂತರ ಏಳನೇ ಶತಮಾನದ ಮಧ್ಯಭಾಗದಲ್ಲಿ ಈ ನಿಧಿಯನ್ನು ರಾಷ್ಟ್ರಕೂಟರು ವಶಪಡಿಸಿಕೊಂಡರು. ರಾಷ್ಟ್ರಕೂಟರ ಕೆಳಗೆ ಈ ನಿಧಿಯು ಕೌತುಕ ಬೆಳವಣಿಗೆ ಕಾಣದಿದ್ದರೂ ಕ್ರಮೇಣ ಬೆಳೆಯುತ್ತಲೇ ಬಂದಿತು. ರಾಷ್ಟ್ರಕೂಟರ ನಂತರ ಹೊಯ್ಸಳರ ಕೆಳಗೆ ಹನ್ನೊಂದನೇ ಶತಮಾನದಿಂದ ಹದಿನಾಲ್ಕನೇ ಶತಮಾನದ ಮಧ್ಯಭಾಗದವರೆಗೂ ಪುನಃ ಅಧಿಕವಾಗಿಯೇ ವರ್ಧಿಸಿತು. ಕ್ರಿ.ಪೂ.೧೩೩೬ರಲ್ಲಿ ಈ ನಿಧಿಯು ಹರಿಹರ-ಬುಕ್ಕರ ಕೈಸೇರಿ ಅವರು ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದರು. ವಿಜಯನಗರದ ಅರಸರ ಕೆಳಗೆ ಮತ್ತೆ ಅತಿಯಾದ ಅಭಿವೃದ್ಧಿ ಕಂಡ ಈ ಬೊಕ್ಕಸ ಕ್ರಿ.ಪೂ.೧೫೬೫ರಲ್ಲಿ ನಡೆದ ತಾಳೀಕೋಟೆ ಯುದ್ಧದ ನಂತರ ಸಂಪೂರ್ಣವಾಗಿ ಮಾಯವಾಯಿತು. ಅಂದಿನಿಂದ ಇಂದಿನವರೆಗು ಇದನ್ನು ಯಾರೂ ಕಂಡಿಲ್ಲ, ಇದರ ಬಗ್ಗೆ ಕೇಳಿಲ್ಲ" ಎನ್ನುತ್ತ ಭಾಸ್ಕರ ವೇದಿಕೆಯ ಮೇಲೆ ಇಟ್ಟಿದ್ದ ಮಿನರಲ್ ವಾಟರ್ ಲೋಟಕ್ಕೆ ಬಗ್ಗಿಸಿಕೊಂಡು ಕುಡಿಯುತ್ತ ತಾನು ಹೇಳಿದ ಮಾತುಗಳನ್ನು ಶ್ರೋತೃಗಳು ಅರಗಿಸಿಕೊಳ್ಳಲು ಕೊಂಚ ಸಮಯ ಕೊಟ್ಟ.

ಎರಡು ನಿಮಿಷಗಳ ಸಂಪೂರ್ಣ ಮೌನದ ನಂತರ ಸಭಿಕರು ಚೇತರಿಸಿಕೊಂಡು, ಅವರಲ್ಲೊಬ್ಬ ಕೈಯೆತ್ತಿದ. ಭಾಸ್ಕರ ಅವನ ಕಡೆ ಬೆರಳು ಮಾಡಿ ತೋರಿಸಿದಾಗ ಆತ ಎದ್ದು "ಪ್ರೊಫೆಸರ್, ವಿಜಯನಗರವನ್ನು ಆಕ್ರಮಿಸಿದ ಬಹಮನಿ ಸುಲ್ತಾನರು ಆರು ತಿಂಗಳ ಕಾಲ ಹಂಪೆಯನ್ನು ಕೊಳ್ಳೆಹೊಡೆದು ಅಲ್ಲಿದ್ದ ಸಂಪತ್ತನ್ನು ಲೂಟಿ ಮಾಡಿದರಲ್ಲವೇ? ಈ ನಿಧಿಯನ್ನೇ ದೋಚಿರಬೇಕು" ಎಂದ

"ಆಹಾ! ಅಲ್ಲೇ ಇರೋದು ವಿಚಿತ್ರ!" ಭಾಸ್ಕರ ಉದ್ವಿಗ್ನನಾಗಿ ಹೇಳಿದ. "ಆ ವಿಚಾರಕ್ಕೆ ಹಿಂತಿರುಗುವೆ. ಏತನ್ಮಧ್ಯೆ ಯೋಚಿಸಿ-ಘಾಝ್ನಿಯ ಮಾಹ್ಮೂದ್, ಘೌರಿಯ ಮಹಮ್ಮದ್, ಪರ್ಶಿಯಾದ ನಾದಿರ್ ಶಾಹ್, ಸೇರಿದಂತೆ ಅಲೆಕ್ಸಾಂಡರ್‌ನಿಂದ ಹಿಡಿದು ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿಯವರೆಗು ಅನೇಕ ಲೂಟಿದಾರರು-ಎಲ್ಲರೂ ಭಾರತಕ್ಕೇ ಏಕೆ ಧಾಳಿ ಇಡುತ್ತಿದ್ದರು? ಚೈನಾಗೆ, ಆಫ್ರಿಕಾಗೆ, ರಶಿಯಾಗೆ ಏಕೆ ಹೋಗುತ್ತಿರಲಿಲ್ಲ? ಈ ಅದ್ಭುತ ನಿಧಿಯ ವಿಚಾರ ಎಲ್ಲೆಲ್ಲೂ ಪ್ರಚಲಿತವಾಗಿತ್ತು. ಎಲ್ಲರೂ ಬರುತ್ತಿದ್ದದ್ದು ಈ ಅಪಾರ ನಿಧಿಯನ್ನು ಪಡೆಯಲೆಂದೇ"

ನಂತರ ಸೌಮ್ಯ ಧ್ವನಿಯಲ್ಲಿ ಮುಂದುವರಿಸಿದ "ಘಾಝ್ನಿಯ ಮಾಹ್ಮೂದ್ ಭಾರತವನ್ನು ಲೂಟಿ ಮಾಡಲು ಹದಿನೇಳು ಬಾರಿ ಏಕೆ ಬರಬೇಕಿತ್ತು? ವಿಚಿತ್ರವೆನಿಸುವುದಿಲ್ಲವೇ? ಒಂದೇ ಬಾರಿ ಬಂದು ಎಲ್ಲವನ್ನೂ ದೋಚಲಾಗುತ್ತಿರಲಿಲ್ಲವೇ? ಒಮ್ಮೆ ಲೂಟಿ ಮಾಡಿದ ನಂತರ ಮರುವರ್ಷವೇ ಪುನಃ ದೋಚಲು ಭಾರೀ ಸಂಪತ್ತು ಹೇಗೆ ಬಂದಿರುತ್ತಿತ್ತು?"

ಸಭಿಕರ ಮುಖಗಳಲ್ಲಿ ಕುತೂಹಲವನ್ನು ಕಂಡು "ಎಲ್ಲವೂ ಆ ಗುಪ್ತ ನಿಧಿಯ ಪರಿಣಾಮ! ಇಂದಿನ ಕಾಲದಲ್ಲಿ ನಮ್ಮ ಪರ್ಸ್ ಯಾರಾದರೂ ಹೊಡೆದರೆ ಬ್ಯಾಂಕಿಗೆ ಹೋಗಿ ಮತ್ತಷ್ಟು ಹಣ ಡ್ರಾ ಮಾಡುವುದಿಲ್ಲವೇ? ಅದೇ ರೀತಿ ಅತ್ತ ಮಾಹ್ಮೂದ್ ಲೂಟಿ ಮಾಡುತ್ತಿದ್ದ, ಅವನು ತನ್ನ ತಾಣಕ್ಕೆ ಹಿಂತಿರುಗಿದ ನಂತರ ಸಾಗರದಿಂದ ಉದ್ಧರಣೆ ನೀರು ತೆಗೆದಂತೆ ಪುನಃ ಚಲಾವಣೆಗೆ ಬೇಕಾಗುವಷ್ಟು ಸಂಪತ್ತನ್ನು ನಿಧಿಯಿಂದ ಹೊರತೆಗೆದು ಬಳಸಿಕೊಳ್ಳುತ್ತಿದ್ದರು" ಎಂದ ಭಾಸ್ಕರ

ಮತ್ತೊಬ್ಬ ವಯಸ್ಸಾದ ವ್ಯಕ್ತಿ ಕೈಯೆತ್ತಿದರು "ಹಾಗಾದರೆ ಆ ನಿಧಿಯನ್ನೇ ಏಕೆ ಯಾರೂ ಅಪಹರಿಸಲಿಲ್ಲ?"

"ಪ್ರತಿ ಬಾರಿ ಹೊರತೆಗೆದ 'ಚಲಾವಣೆ ಸಂಪತ್ತು' ತ್ಯಾಗ ಮಾಡುವುದು ಒಂದು ರೀತಿಯಲ್ಲಿ ಲೂಟಿದಾರರನ್ನು ತಡೆಹಿಡಿಯುವ ಸಾಧನೆಯಾಗಿತ್ತು-ಡೆಟರ್ರೆಂಟ್ ಅಗೈನ್ಸ್‌ಟ್ ರಾಬರಿ. ಆ ಗುಪ್ತ-ನಿಧಿಯ ಒಟ್ಟು ಮೊತ್ತ ಬಿಗಿಯಾಗಿ ಕಾಪಾಡಿಕೊಂಡು ಬಂದ ರಹಸ್ಯವಾಗಿತ್ತು. ಮಾಹ್ಮೂದ್‌ಗೆ ತಿಳಿದಿದ್ದು ನಿಧಿ ಇದೆಯೆಂದು. ಭಾರತಕ್ಕೆ ಬರುತ್ತಿದ್ದ, ದೋಚುತ್ತಿದ್ದ. ಮಾಹ್ಮೂದ್ ಪ್ರತಿ ಬಾರಿ ಲೂಟಿ ಮಾಡುತ್ತಿದ್ದದ್ದು ಬೃಹತ್ತಾದ ಮೊತ್ತವಾದರೂ ಈ ನಿಧಿಯ ಪಾಲಿಗೆ ತೃಣಮಾತ್ರವಾಗಿತ್ತು. ಅವನನ್ನು ತಡೆಹಿಡಿಯಲು, ನಿಧಿಯನ್ನು ಕಾಪಾಡಲು ಆ ತೃಣವನ್ನು ಬಿಟ್ಟುಕೊಡಲು ಸಿದ್ಧವಾಗಿದ್ದರು. ತಾನು ಲೂಟಿ ಮಾಡಿದ್ದೇ ರಹಸ್ಯ ನಿಧಿಯೆಂದು ಭಾವಿಸಿ, ಮಾಹ್ಮೂದ್ ಹಿಂತಿರುಗುತ್ತಿದ್ದ"

ಪುನಃ ಮೌನ ತಾಳಿತು. ಭಾಸ್ಕರ ತಾನು ಮಾಡಿದ ಅಂಶ ಒತ್ತಿ ಹೇಳಲು ಮೊದಲ ಪ್ರಶ್ನೆ ಕೇಳಿದವನ ಕಡೆ ಬೆರಳು ಮಾಡಿ "ಬಹಮನಿ ಸುಲ್ತಾನರ ಸೈನ್ಯ ವಿಜಯನಗರದ ರಾಜಧಾನಿಯನ್ನು ಆರು ತಿಂಗಳ ಕಾಲ ಏಕೆ ದೋಚಬೇಕಿತ್ತು? ಆ ಗಾತ್ರದ ಊರನ್ನು ದೋಚಲು ದೊಡ್ಡ ಸೈನ್ಯವೊಂದಕ್ಕೆ ಆರು ತಿಂಗಳು ಬೇಕೇ? ಅದೇನು ಇಂದಿನ ಬೆಂಗಳೂರಿನಷ್ಟು ದೊಡ್ಡದಲ್ಲ" ನೆರೆದಿದ್ದ ಜನ ಕಿರುನಗೆ ನಕ್ಕರು "ಇಲ್ಲ! ಬಹಮನಿ ಸುಲ್ತಾನರೂ ಆ ಅಪಾರ ರಹಸ್ಯ ನಿಧಿಯ ವಿಚಾರವನ್ನು ಕೇಳಿದ್ದರು. ಆರು ತಿಂಗಳ ಕಾಲ ಅದನ್ನೇ ಹುಡುಕುತ್ತಿದ್ದರು. ಅವರಿಗೆ ಯಾವುದೋ ಒಂದು ಸಣ್ಣ ಗಂಟು ಸಿಕ್ಕಿ ಅದೇ ಆ ನಿಧಿಯೆಂದು ಭಾವಿಸಿಯೋ ಅಥವ ನಿಧಿಯೇ ಸುಳ್ಳೆಂದು ನಿರ್ಧರಿಸಿಯೋ ವಿಜಯನಗರವನ್ನು ಬಿಟ್ಟು ಹೊರಟುಹೋದರು. ಒಟ್ಟಿನಲ್ಲಿ ಆ ನಿಧಿ ಅವರ ಕೈಹತ್ತಿದ ಸೂಚನೆಗೆಳು ಕಾಣುವುದಿಲ್ಲ. ಅವರ ಕೈಗೆ ಹತ್ತಿದ್ದು ಬಹುಶಃ ವಿಜಯನಗರದಲ್ಲಿ ಚಲಾವಣೆಗೆ ಹೊರತೆಗೆದಿದ್ದ ಸಂಪತ್ತು ಮಾತ್ರ. ಮೂಲ ನಿಧಿ ಹಾಗೆಯೇ ಉಳಿಯಿತು"

ಈ ಬಾರಿ ಒಬ್ಬ ಹೆಂಗಳೆ ಕೈ ಎತ್ತಿದಳು. ಭಾಸ್ಕರ ಅವಳ ಕಡೆ ಕೈಮಾಡಿ ತೋರಿಸಿದಾಗ ಆಕೆ ನಿಂತು ಕೇಳಿದಳು. "ಹಾಗಾದರೆ ನೀವು ಹೇಳುತ್ತಿರುವ ನಿಧಿಯ ಒಟ್ಟು ಮೊತ್ತ ಎಷ್ಟಿರಬಹುದು?" ಉಳಿದವರು ಗೊಣಗತೊಡಗಿದರು.

"ಒಳ್ಳೆ ಪ್ರಶ್ನೆ!" ಭಾಸ್ಕರ ವಿಪರ್ಯಾಸಕರವಾಗಿ ಹೇಳಿದ "ಯಾರಿಗೂ ತಿಳಿಯದು. ಯಾರೂ ಬಹುಶಃ ಈ ನಿಧಿಯನ್ನು ಇಡಿಯಾಗಿ ಕಂಡಿಲ್ಲ-ಕಂಡಿದ್ದರೆ ಎಲ್ಲೂ ವಿವರಿಸಿಲ್ಲ. ವಿವರಿಸುವುದೇನು-ಎಲ್ಲಿಯೂ, ಯಾರೂ ಇದರ ಉಲ್ಲೇಖ ಕೂಡ ಮಾಡಿಲ್ಲ. ಆದರೆ ಇದರ ಉಪಸ್ಥಿತಿಯ ಪ್ರಭಾವಗಳು ಇತಿಹಾಸದಲ್ಲಿ ಎಲ್ಲೆಲ್ಲೂ ಕಂಡು ಬರುತ್ತವೆ. ರಾಜ-ವಂಶಗಳ ಉದಯ-ಅಸ್ತಗಳನ್ನು ವಿಧಿಸುವಂತಹ ನಿಧಿ ಇದು! ದೇಶ-ಸಾಮ್ರಾಜ್ಯಗಳ ಅರಳು-ಉರುಳುಗಳನ್ನು ನಿಯಂತ್ರಿಸುತ್ತಿದ್ದ ನಿಧಿ ಇದು! ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆ ಜನರ ವೈಭವವಂತೂ ಹೇಳಿಯೇ ಮುಗಿಯದು! ಎಲ್ಲೆಲ್ಲೂ ಚಿನ್ನ, ಬೆಳ್ಳಿ, ವಜ್ರ, ವಢೂರ್ಯಗಳ ವಿವರಣೆಗಳನ್ನು ಪೋರ್ಚುಗೀಸ್ ಪ್ರಯಾಣಿಕರಾದ ಡೊಮಿಂಗೋಸ್ ಪಯಸ್ ಮತ್ತು ಫರ್ನೊ ನ್ಯೂನಿಝ್ ಬಿಟ್ಟಿದ್ದಾರೆ. ಬೀದಿ ಬೀದಿಗಳಲ್ಲಿ ಈ ಅತ್ಯಮೂಲ್ಯ ವಸ್ತುಗಳ ವ್ಯಾಪಾರ ನಡೆಯುತ್ತಿದ್ದ ವಿವರಗಳನ್ನು ಬರೆದಿದ್ದಾರೆ. ಆ ಕಾಲದಲ್ಲಿ ಹತ್ತಾರು ಕೋಟಿ ಚಿನ್ನದ ವರಾಹಗಳ ಕಾಣಿಕೆ ವಿಜಯನಗರದ ರಾಯನಿಗೆ ಸಾಮಂತರು ತಂದುಕೊಡುತ್ತಿದ್ದ ಬಗ್ಗೆ ವಿವರಣೆಗಳನ್ನು ಬಿಟ್ಟಿದ್ದಾರೆ. ಒಂದೊಂದು ವರಾಹವೂ ಕನಿಷ್ಠ ಮೂರರಿಂದ ನಾಲ್ಕು ಗ್ರಾಂ ಎಂದು ಭಾವಿಸಿದರೆ ನೀವೇ ಲೆಕ್ಕ ಹಾಕಿ" ಎಂದು ಹೇಳಿ ಯೋಚಿಸಲು ಸಮಯ ಕೊಟ್ಟ.

"ಹದಿಮೂರನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸ್ವಲ್ಪ ಮುಂಚೆ ಕ್ರಿ.ಪೂ. ೧೩೧೦ರಲ್ಲಿ ಆಗಿನ ದೆಹಲಿ ಸುಲ್ತಾನನಾದ ಅಲಾಉದ್ದೀನ್ ಖಿಲ್ಜಿಯ ದಂಡನಾಯಕ ಮಲಿಕ್ ಕಫೂರ್ ಡಖನ್‍ಅನ್ನು ಲೂಟಿ ಮಾಡಿದ. ಮಲಬಾರ್ ತೀರದುದ್ದಕ್ಕೂ ಎಲ್ಲ ದೇವಾಲಯಗಳನ್ನು ಲೂಟಿ ಮಾಡಿದ್ದಲ್ಲದೆ ಇಂದಿನ ಕರ್ನಾಟಕವಿರುವ ಪ್ರದೇಶವನ್ನು ಸಂಪೂರ್ಣವಾಗಿ ಕೊಳ್ಳೆಹೊಡೆದ. ಮುಸಲ್ಮಾನ ಸಾಹಿತಿ ಫಿರಿಷ್ತಾ ಪ್ರಕಾರ ಅವನು ಸುಲ್ತಾನನಿಗೆ ಕೊಟ್ಟ ಕಾಣಿಕೆ ೩೧೨ ಆನೆ, ೨೦೦೦೦ ಕುದುರೆ, ೯೬೦೦೦ ಮಣ ಬಂಗಾರ ಹಾಗು ಮುತ್ತು, ರತ್ನ, ಪಚ್ಚೆ, ವಜ್ರ-ವೈಢೂರ್ಯಗಳಿಂದ ತುಂಬಿದ ಹತ್ತಾರು ಪೆಟಾರಿಗಳು. ಅಂದಿನ ಲೆಕ್ಕದಲ್ಲಿ ಮದ್ರಾಸಿನ ಮಣವೆಂದರೆ ೨೫ ಪೌಂಡು, ಮುಂಬೈ ಮಣ ೨೮ ಪೌಂಡು, ಹಾಕಿನ್ಸ್ ಒಂದು ಮಣಕ್ಕೆ ೫೫ ಪೌಂಡು ಎಂದರೆ, ಮಿಡ್ಲ್‌ಟನ್ ೩೩ ಪೌಂಡು ಎನ್ನುತ್ತಾನೆ. ಮಿತವಾಗಿ ಮದ್ರಾಸ್ ಮಣವೆಂದುಕೊಂಡರೂ ಈ ಬಂಗಾರ ಸುಮಾರು ೨,೪೦೦,೦೦೦ ಪೌಂಡು ಅಂದರೆ ಸುಮಾರು ಒಂದುನೂರ-ಎಂಟು ಕೋಟಿಗಿಂತ ಹೆಚ್ಚು ಗ್ರಾಂ ಬಂಗಾರ. ಇದರಿಂದ ಎಷ್ಟು ನೆಕ್‍ಲೇಸ್ ಮಾಡಿಸಿಕೊಳ್ಳಬಹುದು ಎಣಿಸಿಕೊಳ್ಳಿ" ಎಂದು ಭಾಸ್ಕರ ಹೇಳಿದಾಗ ಎಲ್ಲರೂ ನಕ್ಕರು.

"ಮಲಿಕ್ ಕಫೂರ್ ಸುಲ್ತಾನನಿಗೆ ಸಲ್ಲಿಸಿದ್ದು ತಾನು ಲೂಟಿ ಮಾಡಿದ ಬಂಗಾರದ ಶೇಕಡ ೫೦%ರಷ್ಟು ಎಂದು ಭಾವಿಸಿದರೂ ಅವನು ಲೂಟಿ ಮಾಡಿದ ಬಂಗಾರದ ಒಟ್ಟು ಮೊತ್ತ ಇವತ್ತಿನ ಲೆಕ್ಕದಲ್ಲಿ ಕನಿಷ್ಠ ಎರಡು-ಲಕ್ಷ-ಕೋಟಿ ರೂಪಾಯಿ ಅಂದರೆ ಐದು ಬಿಲಿಯನ್ ಅಮೇರಿಕನ್ ಡಾಲರ್-ಹಾಕಿನ್ಸ್‌ನ ಮಣ ತೆಗೆದುಕೊಂಡರೆ ಇದು ದ್ವಿಗುಣವಾದೀತು. ಇದಲ್ಲದೆ ಮುತ್ತು-ರತ್ನ ವಜ್ರ-ವೈಢೂರ್ಯಗಳು ತುಂಬಿದ ಹಲವಾರು ಪೆಟಾರಿಗಳು. ಪಯಸ್ ಮತ್ತು ನ್ಯೂನಿಝ್ ಕೋಳಿಮೊಟ್ಟೆಗಾತ್ರದ ವಜ್ರಗಳ ಬಗ್ಗೆ ಬರೆದಿದ್ದಾರೆ. ೩೦-೪೦ ಕ್ಯಾರಟ್ ಭಾರವಿರುವ ವಜ್ರಗಳು ಸಾಮಾನ್ಯವಾಗಿ ಗಣಿಗಳಲ್ಲಿ ದೊರಕುತ್ತಿದ್ದವೆಂದು ಹೇಳಿದ್ದಾರೆ. ವಿಶ್ವವಿಖ್ಯಾತ ಕೋಹಿನೂರ್ ವಜ್ರ ಕೂಡ ಈ ಬೊಕ್ಕಸದಿಂದಲೇ ಬಂದಿರಬಹುದು. ತಾಳೀಕೋಟೆ ಯುಧ್ಧದ ನಂತರ ವಿಜಯನಗರ ನಾಶವಾದಮೇಲೂ ಸಮೀಪವಿರುವ ಚಂದ್ರಗಿರಿಯ ರಾಜನ ಬಳಿ ಮೂರು ದೊಡ್ಡ ಪೆಟಾರಿ ಭರ್ತಿ ವಜ್ರಗಳಿದ್ದವೆಂದು ಮತ್ತೊಬ್ಬ ಪೋರ್ಚುಗೀಸ್, ಮಾನುವಲ್ ಬರ್ರಡಸ್ ಬರೆದಿದ್ದಾನೆ. ಅಷ್ಟಾಗಿ ಇದು ಕೇವಲ ಖರ್ಚಿಗೆ ಹೊರತೆಗೆದಿದ್ದ 'ಪಾಕೆಟ್ ಚೇಂಜ್'. ಹೋಗಲಿ ಕಾಲ ಕ್ರಮೇಣ ಒಟ್ಟು ಶೇಕಡ ೨೫%ರಷ್ಟು ಖಾಲಿಯಾಗಿದೆಯೆಂದುಕೊಂಡರೂ ಆ ನಿಧಿಯ ಒಟ್ಟು ಮೊತ್ತ ಎಷ್ಟಿರಬಹುದು ಎಂದು ಕಲ್ಪಿಸಿಕೊಳ್ಳುವುದೂ ಕಷ್ಟವೇ ಅಲ್ಲ ಅಸಾಧ್ಯ"

ಉಪನ್ಯಾಸ ಮುಗಿದ ನಂತರ ಭಾಸ್ಕರ ತನ್ನ ಹೋಟಲ್‍ಗೆ ಹಿಂತಿರುಗಲು ಹೊರ ಹೋಗುತ್ತಿದ್ದಾಗ ಸುಮಾರು ೩೦-೩೫ ವಯಸ್ಸಿನ ದೇಹದಾರ್ಢ್ಯವುಳ್ಳ ವ್ಯಕ್ತಿಯೊಬ್ಬ ಅವನ ಎದುರಾಗಿ "ಗುಡ್ ಲೆಕ್ಚರ್, ಪ್ರೊಫೆಸರ್. ನಿಮ್ಮನ್ನು ಇನ್ನೂ ಕೆಲವು ಪ್ರಶ್ನೆಗಳು ಕೇಳಬೇಕು-ಇಂದು ಸಮಯವಾಗಲಿಲ್ಲ. ನಿಮ್ಮನ್ನು ಎಲ್ಲಿ ಭೇಟಿ ಮಾಡಬಹುದು?" ಎಂದ.

ಜೇಬಿನಿಂದ ತನ್ನ ಬಿಸಿನೆಸ್-ಕಾರ್ಡ್ ಹೊರತೆಗೆದು ಅವನ ಕೈಗೆ ಕೊಡುತ್ತ "ಇಗೋ-ನನ್ನ ಕಾರ್ಡ್. ನೀವು..?" ಎಂದ ಭಾಸ್ಕರ

"ಓಹ್-ಸಾರಿ! ರಾಜೇಶ್ ನಾಗೇಶನ್. ಹಿಸ್ಟರಿ ನನ್ನ ಹಾಬಿ" ಎನ್ನುತ್ತ ಕೈ ಕುಲುಕಿ ತನ್ನ ಕಾರ್ಡ್ ಭಾಸ್ಕರನ ಕೈಗಿಟ್ಟ.

"ರಾಜೇಶ್-ನಾಗೇಶನ್, ನಾಗೇಶನ್ಸ್ ಆಂಟೀಕಾರ್ಟ್ಸ್, ಎಂ.ಜಿ.ರಸ್ತೆ, ಬೆಂಗಳೂರು" ಓದಿಕೊಂಡ ಭಾಸ್ಕರ.

"ಸೋ...ನಿಮ್ಮನ್ನು ಬಂದು ಕಾಣಲು ಅಪಾಯಿಂಟ್ಮೆಂಟ್ ಮಾಡಿಕೊಳ್ಳಬೇಕೇ?" ರಾಜೇಶ್ ಕೇಳಿದಾಗ ಭಾಸ್ಕರ ಪಕ್ಕ ತಿರುಗಿ "ಉಜ್ವಲ?" ಎಂದ.

ಮುಂದೆ ಬಂದ ಯುವತಿಯನ್ನು ತೋರಿಸಿ "ಉಜ್ವಲಾ-ನನ್ನ ರಿಸರ್ಚ್ ಅಸಿಸ್ಟೆಂಟ್, ಉಜ್ವಲಾ-ರಾಜೇಶ್ ನಾಗೇಶನ್" ಎಂದು ಪರಿಚಯ ಮಾಡಿಸಿದ. "ನಾಗೇಶನ್ ನನ್ನೊಡನೆ ಕನ್ಸಲ್ಟ್ ಮಾಡಲು ಯಾವಾಗ ಸಮಯವಿದೆ ನನ್ನ ಕ್ಯಾಲೆಂಡರ್ ನೋಡಿ ಹೇಳುವೆಯಾ?

ಉಜ್ವಲಾ ತನ್ನ ಬಳಿ ಇದ್ದ ಡೈರಿಯೊಂದನ್ನು ತಿರುಗಿಸಿ "ನಾಳೆ ಮಧ್ಯಾಹ್ನ ಫ್ರೀ ಇದ್ದೀರ, ಪ್ರೊಫೆಸರ್" ಎಂದಳು

"ನಾಳೆ ಮಧ್ಯಾಹ್ನ-ಸೇ ತ್ರೀ-ಓ-ಕ್ಲಾಕ್? ನಾನು ಹೋಟೆಲ್ ಚಾಳುಕ್ಯದಲ್ಲಿ ಇಳಿದುಕೊಂಡಿದ್ದೀನಿ" ಭಾಸ್ಕರ ನಾಗೇಶನ್ ಕಡೆ ತಿರುಗಿ ಹೇಳಿದ

"ಶೂರ್, ಪ್ರೊಫೆಸರ್! ಸೀ ಯು ಟುಮಾರೋ"

*****

"ಸೋ, ಬ್ಯಾಟಲ್-ಆಫ್-ತಾಳೀಕೋಟೆಯ ನಂತರ ಆ ನಿಧಿಗೆ ಏನಾಯಿತು?" ಮರುದಿನ ಮಧ್ಯಾಹ್ನ ಭಾಸ್ಕರನ ಹೋಟಲ್‍ನ ರೆಸ್ಟೊರಾಂಟ್‍ನಲ್ಲಿ ಕುಳಿತು ಕಾಫಿ ಕುಡಿಯುತ್ತ ಮಾತನಾಡುತ್ತಿದ್ದಾಗ ನಾಗೇಶನ್ ಕೇಳಿದ.

"ಸಂಪೂರ್ಣವಾಗಿ ಮಾಯವಾಯಿತು. ಅದನ್ನು ಬಹಮನಿ ಸುಲ್ತಾನರ ಸೈನ್ಯ ದೋಚಿತೆಂದೇ ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ನಾನು ಹೇಳಿದಂತೆ ಹಾಗಾಗಿರಲು ಸಾಧ್ಯವಿಲ್ಲ" ಭಾಸ್ಕರ ಹೇಳಿದ.

"ಏನೂ ಸುಳಿವಿಲ್ಲವೇ? ಯಾರಾದರೂ ಕಕ್ಷಿದಾರರು? ಅನಿಥಿಂಗ್?"

"ಉಹೂಂ. ಆದರೂ...ಆಗಿನ ಮೈಸೂರ ಅರಸ ವಿಜಯನಗರದ ಸಾಮಂತನಾಗಿದ್ದ-ಇಮ್ಮಡಿ ತಿಮ್ಮರಾಜ. ಅವನ ಸೇನಾಧಿಪತಿಯಾಗಿದ್ದ ನರಸಪ್ಪನಾಯಕ ತಾಳೀಕೋಟೆ ಯುದ್ಧಕ್ಕೆ ತಿಮ್ಮರಾಜನ ಪ್ರತಿನಿಧಿಯಾಗಿ ಹೋಗಿದ್ದ. ಯುದ್ಧದಲ್ಲಿ ಗಾಯಗೊಂಡಿದ್ದ ನರಸಪ್ಪ ವಿಜಯನಗರದ ಸೋಲಿನ ನಂತರ ವಿಜಯನಗರದ ವರಾಹ ರಾಜ್ಯ-ಲಾಂಛನದೊಂದಿಗೆ ತಿಮ್ಮರಾಜನಿಗೆ ಸಂದೇಶವನ್ನು ಹೊತ್ತು ಮೈಸೂರಿಗೆ ರವಾನೆಯಾದ. ಮೈಸೂರು ತಲುಪುವ ಹೊತ್ತಿಗೆ ತನ್ನ ಕೊನೆ ಉಸಿರೆಳೆಯುತ್ತಿದ್ದ ನರಸಪ್ಪನಾಯಕ ಸಂದೇಶವನ್ನು ಹೇಳುವ ಮುನ್ನವೇ ಹತನಾದ. ಮೈಸೂರು ರಾಜ್ಯವೇ ವಿಜಯನಗರಕ್ಕೆ ಸ್ವಾಭಾವಿಕ ಉತ್ತರಾಧಿಕಾರಿಯೆಂದು ಲಾಂಛನದ ಜೊತೆ ಆ ನಿಧಿಯ ಗುಟ್ಟು ನರಸಪ್ಪನೊಡನೆ ಹೋಗಿದ್ದಿರಬಹುದೆಂದು ನನ್ನ ರೆಸರ್ಚ್ ತೋರುತ್ತದೆ" ಭಾಸ್ಕರ ಹೇಳಿದ

"ಮೈಸೂರಿನಲ್ಲಿರುವ ವಿಜಯನಗರದ ಆ ಲಾಂಛನದಲ್ಲಿ ಈ ನಿಧಿಯನ್ನು ಕುರಿತು ಏನು ಮಾಹಿತಿ ಇರಬಹುದು? ನಿಧಿ ಎಲ್ಲಿದೆಯೆಂದು ಹೇಳಲು ಒಂದು ಮ್ಯಾಪ್? ಅಥವ ಸ್ಥಳ ವಿವರಿಸಲು ಒಂದು ಪತ್ರ? ಏನಿರಬಹುದು, ಪ್ರೊಫೆಸರ್?"

"ಏನಾದರು ಮಾಹಿತಿ ಇರಬಹುದು ಎನ್ನುವುದೇ ಊಹೆ. ಇದ್ದರೆ ಅದು ಎಂತಹ ಸ್ವರೂಪದಲ್ಲಿರಬಹುದೆನ್ನುವುದಂತು ತೆರೆದ-ಪ್ರಶ್ನೆ. ಬಹುಶಃ ಆ ಲಾಂಛನವನ್ನು ಸೂಕ್ಷ್ಮವಾಗಿ ಪರೀಕ್ಷಿಸಿದರೆ ಸ್ಪಷ್ಟವಾಗಬಹುದು, ಬಟ್ ಅದರ್‌ವೈಸ್, ಇಮ್‌ಪಾಸಿಬಲ್ ಟು ಸೇ" ಎಂದ ಭಾಸ್ಕರ

"ಹೋಗಲಿ ನಿಮ್ಮ ಅನಿಸಿಕೆಯಲ್ಲಿ ಆ ನಿಧಿ ಎಲ್ಲಿರಬಹುದು? ಮೈಸೂರಿನಲ್ಲೇ? ಹಂಪೆಯಲ್ಲೇ? ಅಥವ ಬೇರೆ ಇನೆಲ್ಲೋ?" ನಾಗೇಶನ್ ನಿಧಿಯ ಮಾಹಿತಿಗಾಗಿ ಕೆದಕುತ್ತಿದ್ದ.

"ಅಗೇನ್, ಇಮ್‌ಪಾಸಿಬಲ್ ಟು ಸೇ. ಆ ನಿಧಿ ಕೈಯಿಂದ ಕೈಗೆ ಬದಲಾಯಿಸಿದಾಗ ಅದರ ನೆಲೆಯನ್ನು ಬದಲಾಯಿಸುತ್ತಿದ್ದರೇ, ಇಲ್ಲವೇ ಅದು ಒಂದೇ ಕಡೆ ಭದ್ರವಾಗಿ ನೆಲೆಸಿತ್ತೇ ತಿಳಿಯದು. ಹಳೆಯ ಕಾಲದ ರಾಜಧಾನಿಗಳು-ಬನವಾಸಿ, ಬಾದಾಮಿ, ಮಣ್ಯಖೇತ, ಹಳೇಬೀಡು, ಹಂಪೆ ಕೂಡ-ಸಂಭವನೀಯ ನೆಲೆಗಳು. ಬಟ್ ದೆನ್ ಅಗೇನ್, ಇಲ್ಲೇ ಬೆಂಗಳೂರಿನಲ್ಲೂ ಇರಬಹುದು, ಇಲ್ಲವೇ ಯಾವುದೋ ಕಾಡಿನ ಮಧ್ಯೆ ಇರಬಹುದು" ಭಾಸ್ಕರ ಉದ್ರಿಕ್ತ ಧ್ವನಿಯಲ್ಲಿ ಹೇಳಿದ.

ಕೊಂಚ ಮೌನ ತಾಳಿ ನಂತರ "ಆ ನಿಧಿಯನ್ನು ನೀವು ಹುಡುಕುತ್ತಿದ್ದೀರ, ಪ್ರೊಫೆಸರ್? ಹಿಂದೆ ಪತ್ತೆ ಹಚ್ಚುವ ಪ್ರಯತ್ನ ಮಾಡಿದ್ದೀರ, ಇಲ್ಲವೇ ಮುಂದೆ ಮಾಡಲಿದ್ದೀರ? ನಿಮಗೆ ಅದನ್ನು ಹುಡುಕುವ ಇಚ್ಛೆ ಇದೆಯೇ?" ಕೇಳಿದ ನಾಗೇಶನ್.

"ದೇ..." ಏನೋ ಹೇಳಲು ಹೊರಟು ಸುಮ್ಮನಾದ ಭಾಸ್ಕರ ಮತ್ತೆ ಮುಂದುವರೆಸಿದ "ನರಸಪ್ಪನಾಯಕ ತಂದ ವಿಜಯನಗರದ ರಾಜ್ಯ-ಲಾಂಛನ ಇಂದಿಗೂ ಮೈಸೂರಿನ ಅರಮನೆಯ ಒಂದು ಗುಪ್ತ ಕೋಣೆಯಲ್ಲಿದೆಯೆಂದು ನನಗೆ ತಿಳಿದುಬಂದಿದೆ. ಅದನ್ನು ಪರೀಕ್ಷಿಸಲು ಪ್ಯಾಲೆಸ್ ಟ್ರಸ್ಟಿನವರನ್ನು ಆರು ತಿಂಗಳಿಂದ ಪರ್ಮಿಶನ್ ಕೇಳುತ್ತಿದ್ದೇನೆ-ಆದರೆ ಸಿಗುತ್ತಿಲ್ಲ. ಅದು ಸಿಕ್ಕರೆ ನಿಧಿಯ ಮುಂದಿನ ಕ್ಲೂ ಸಿಗಬಹುದು"

"ಹಮ್‍ಮ್‍ಮ್.." ಎಂದು ಕೊಂಚ ಯೋಚಿಸಿ "ನಿಮಗೊಂದು ಬಿಜಿನೆಸ್ ಪ್ರಪೋಸಲ್ ಹೇಳಲೇ, ಪ್ರೊಫೆಸರ್? ಮೈಸೂರಿನ ಆ ಎಂಬ್ಲಮ್ ಪರೀಕ್ಷಿಸುವ ಅವಕಾಶ ಮಾಡಿಕೊಟ್ಟರೆ ನಿಮ್ಮ ಹುಡುಕಾಟ ಮುಂದುವರೆಸುತ್ತೀರ? ನನ್ನನ್ನೂ ಜೊತೆಗೆ ಸೇರಿಸಿಕೊಳ್ಳುತ್ತೀರ?" ನಾಗೇಶನ್ ಕೇಳಿದ

"ಅದು...ಹೇಗೆ ಸಾಧ್ಯ? ನಾನು ಪ್ರಯತ್ನ ಮಾಡುತ್ತಲೇ ಇದ್ದೀನಿ"

"ನಿಮ್ಮ ದಾರಿ ಹಿಡಿದರೆ ಅದನ್ನು ಜನ್ಮದಲ್ಲಿ ನೀವು ಪರೀಕ್ಷಿಸಲಾಗದು. ಅದನ್ನು ಪರೀಕ್ಷಿಸಲು, ಪಡೆಯಲು ಬೇರೆ ಸಾಧನಗಳೂ ಇವೆ, ಪ್ರೊಫೆಸರ್. ಬೈ ಹುಕ್-ಆರ್-ಕ್ರುಕ್ ಅದನ್ನು ನಿಮ್ಮ ಮುಂದಿಟ್ಟರೆ?" ನಾಗೇಶನ್ ಖಳನಂತೆ ಹಲ್ಲುಕಿರಿದು ಕೇಳಿದ.

"ಅಂದರೆ....? ನೋ! ನಾನು ಗೈರು-ಕಾನೂನಿ ಕೆಲಸ ಮಾಡಲಾರೆ, ಒಪ್ಪಲಾರೆ" ಸದಾಚಾರದ ಕೋಪ ತುಂಬಿದ ಧ್ವನಿಯಲ್ಲಿ ಹೇಳಿದ ಭಾಸ್ಕರ.

"ನಿಮಗೆ ಆ ಲಾಂಛನ ಪರೀಕ್ಷಿಸಿ ನಿಧಿಯನ್ನು ಹುಡುಕುವುದು ಮುಖ್ಯವೋ? ಇಲ್ಲ...? ನನ್ನನ್ನು ನಿಮ್ಮ ಟ್ರೆಶರ್-ಹಂಟ್‍ನಲ್ಲಿ ಪಾರ್ಟ್ನರ್ ಮಾಡಿಕೊಂಡರೆ ನಾನು ಆ ಲಾಂಛನವೊಂದೇ ಅಲ್ಲ ಫೈನಾನ್ಸಿಂಗ್ ಕೂಡ ನೋಡಿಕೊಳ್ಳುತ್ತೇನೆ"

"ಮಿ. ನಾಗೇಶನ್, ನಾನು ಹಣಕ್ಕಾಗಿ ಈ ಖಜಾನೆಯನ್ನು ಹುಡುಕುತ್ತಿಲ್ಲ. ನನ್ನ ಧ್ಯೇಯಗಳೇ ಬೇರೆ. ನಮ್ಮ ಚರ್ಚೆ ಮುಗಿದಿದೆಯೆಂದು ಭಾವಿಸುತ್ತೇನೆ, ಗುಡ್-ಬೈ" ಭಾಸ್ಕರ ನಿಲ್ಲುತ್ತ ಕಿರುಗಣ್ಣು ಮಾಡಿಕೊಂಡು ಕಟುವಾಗಿ ಹೇಳಿದ.

"ಓ.ಕೇ. ಪ್ರೊಫೆಸರ್. ನೀವು ಇನ್‍ಡಿಸ್ಪೆಸಿಬಲ್ ಅಲ್ಲ. ನಾನೇ ಮುಂದಿನ ದಾರಿ ನೋಡಿಕೊಳ್ಳುತ್ತೇನೆ. ಗುಡ್-ಬೈ" ಎನ್ನುತ್ತ ನಾಗೇಶನ್ ಹೊರಟುಹೋದ.

"ಗುಡ್-ರಿಡೆನ್ಸ್" ಎಂದು ಗೊಣಗುತ್ತ "ಉಜ್ವಲಾ? ಕೇಳಿದೆಯಾ..?" ಅಲ್ಲೇ ಇದ್ದ ಉಜ್ವಲಾಳನ್ನು ಕುರಿತು ಹೇಳಿದ ಭಾಸ್ಕರ.

"ಯಸ್, ಪ್ರೊಫೆಸರ್. ನಾಗೇಶನ್ ಕೈಗೆ ಆ ಲಾಂಛನ ಅಥವ ನಿಧಿ ಸಿಕ್ಕರೆ ಒಳ್ಳೆಯದಾಗಲಾರದು" ನಿಧಾನವಾಗಿ ಉಸುರಿದಳು ಉಜ್ವಲಾ.

"ಆ ಲಾಂಛನ ನಾಗೇಶನ್ ಕೈಸೇರುವ ಮುಂಚೆ ನಾವೇ ಅದನ್ನು ಹೇಗಾದರು ಪರೀಕ್ಷಿಸಬೇಕು. ಅದು ಅವನ ಕೈಸೇರಿದರೆ ಅನಾಹುತವಾದೀತು!" ಎಂದ ಭಾಸ್ಕರ.

*****

ತುರ್ತಾಗಿ ಭಾಸ್ಕರ, ಉಜ್ವಲ ಮೈಸೂರಿಗೆ ರವಾನೆಯಾಗಿ, ಅರಮನೆ ರಕ್ಷಣಾ ಅಧಿಕಾರಿಯಾದ ಇನ್ಸ್‌ಪೆಕ್ಟರ್ ಮಹೇಶ್ವರನನ್ನು ಭೇಟಿ ಮಾಡಿದರು.

"ಹಲೋ ಇನ್ಸ್‌ಪೆಕ್ಟರ್. ನಾನು ಪ್ರೊಫೆಸರ್ ಭಾಸ್ಕರ, ಹಂಪೆ ಕನ್ನಡ ಯೂನಿವರ್ಸಿಟಿ, ಹಿಸ್ಟರಿ ಡಿಪಾರ್ಟ್‍ಮೆಂಟ್" ಭಸ್ಕರ ಇನ್ಸ್‌ಪೆಕ್ಟರ್ ಕೈಕುಲುಕುತ್ತ ಹೇಳಿದ. ಇಬ್ಬರೂ ತಮ್ಮ ಬಿಸಿನೆಸ್ ಕಾರ್ಡ್‌ಗಳನ್ನು ಬದಲಾಯಿಸಿಕೊಂಡರು.

"ನಮಸ್ಕಾರ ಪ್ರೊಫೆಸರ್. ನಿಮಗೇನು ಸೇವೆ ಮಾಡಬಲ್ಲೆ?" ಇನ್ಸ್ಪೆಕ್ಟರ್ ವಿಚಾರಿಸಿದ.

"ಸುತ್ತಿ ಬಳಸಿ ಮಾತನಾಡೋದಿಲ್ಲ, ನೇರವಾಗಿ ಹೇಳುತ್ತೇನೆ. ಯಾರೋ ಅರಮನೆಯನ್ನು ದರೋಡೆ ಮಾಡುವವರಿದ್ದಾರೆ" ಭಾಸ್ಕರ ಪೀಠಿಕಿಯಿಲ್ಲದೆ ಹೇಳಿದ.

ಇನ್ಸ್‌ಪೆಕ್ಟರ್ ಮುಖದಲ್ಲಿ ಕಿರುನಗೆ ಕಾಣಿಸುತ್ತಿತ್ತು "ಪ್ರೊಫೆಸರ್, ಅದು ಸಾಧ್ಯವಿಲ್ಲ. ಹಗಲಲ್ಲಿ ಗಾರ್ಡ್‌ಗಳು ಸುತ್ತಲೂ ಇರುತ್ತಾರೆ, ರಾತ್ರಿಯಿಡೀ ಪಟ್ರೋಲ್ ಮಾಡುತ್ತೇವೆ. ಅರಮನೆ ಸುರಕ್ಷಿತವಾಗಿದೆಯೆಂದು ನಿಮಗೆ ಆಶ್ವಾಸನೆ ಕೊಡುತ್ತೇನೆ"

ಭಾಸ್ಕರನ ಮುಖ ಗಂಭೀರವಾಗಿತ್ತು "ನನಗದರಲ್ಲಿ ವಿಶ್ವಾಸವಿಲ್ಲ, ಆದರೆ ಅರಮನೆಯಲ್ಲಿರುವ ಒಂದು ವಸ್ತು ಪರೀಕ್ಷಿಸಲು ಅವಕಾಶ ಮಾಡಿಕೊಟ್ಟರೆ, ದರೋಡೆಯ ಸಾಧ್ಯತೆ ಇದೆಯೇ, ಇಲ್ಲವೇ ಹೇಳಬಲ್ಲೆ"

"ಆ 'ವಸ್ತು'ವಿನಲ್ಲಿ ಏನಿದೆಯೆನ್ನುವುದು ನಿಮ್ಮ ಅನಿಸಿಕೆ, ಪ್ರೊಫೆಸರ್?"

"ನಿಖರವಾಗಿ ಹೇಳಲಾಗುವುದಿಲ್ಲ, ಇನ್ಸ್‌ಪೆಕ್ಟರ್. ಆದರೆ ಇಡೀ ವಿಶ್ವವನ್ನೇ ಅಲುಗಾಡಿಸುವ ಮಾಹಿತಿ ಇರಬಹುದು"

"ವಿಶ್ವವನ್ನಲುಗಾಡಿಸುವ ಮಾಹಿತಿಯುಳ್ಳ ಅನಾಮಧೇಯ ವಸ್ತುವಿನ ಕಾರಣ ಅರಮನೆಯಲ್ಲಿ ದರೋಡೆಯಾಗಲಿದೆ, ಹೌದಾ?" ಇನ್ಸ್‌ಪೆಕ್ಟರ್ ಮುಖದಲ್ಲಿ ಅಪನಂಬಿಕೆಯಿತ್ತು. "ಆದರೆ ನಿಮಗೆ ಆ ವಸ್ತುವನ್ನು ಪರೀಕ್ಷಿಸುವ ಅವಕಾಶ ಕೊಡಲು ನನಗೆ ಅಧಿಕಾರವಿಲ್ಲ. ಅದಕ್ಕೆ ಪ್ಯಾಲೆಸ್ ಟ್ರಸ್ಟೊಂದಿಗೆ..."

"ಥ್ಯಾಂಕ್ಸ್, ಇನ್ಸ್‌ಪೆಕ್ಟರ್. ನಾವಿನ್ನು ಬರುತ್ತೇವೆ, ನಮಸ್ಕಾರ" ಎನ್ನುತ್ತ ಭಾಸ್ಕರ ಎದ್ದು ಹೊರಟ.

*****

ಭಾಸ್ಕರ ಹಾಗು ಉಜ್ವಲಾ ಪ್ರವೇಶ-ಟಿಕೆಟ್ ಖರೀದಿಸಿ ಅರಮನೆಯ ಸಂಚಾರ ಮಾಡುತ್ತಾ ಗೊಂಬೆ-ತೊಟ್ಟಿಯನ್ನು ಹಾಯ್ದು ಆನೆ-ದ್ವಾರದ ಮುಂದೆ ಬಂದು ನಿಂತರು. ಗಂಡುಭೇರುಂಡದ ಚಿಹ್ನೆಯನ್ನು ಹೊಂದಿದ್ದ ಇದು ಅರಮನೆಯ ಹೆಬ್ಬಾಗಿಲು. ಬಾಗಿಲೊಳಗಿದ್ದ ಪ್ರಾಕಾರವನ್ನು ಸುತ್ತಿ ಅಷ್ಟಕೋನಾಕಾರದ ಕಲ್ಯಾಣ ಮಂಟಪಕ್ಕೆ ಹೋದರು. ಕಲ್ಯಾಣ ಮಂಟಪದಿಂದ ಮೆಟ್ಟಿಲುಗಳನ್ನೇರಿ ಆನೆ ದಂತದ ಅಲಂಕಾರವನ್ನು ಕೆತ್ತಿ ಕೂರಿಸಿದ ಬೀಟೆ ಮರದ ಬಾಗಿಲನ್ನು ಹಾಯ್ದು ಅಂಬಾವಿಲಾಸಕ್ಕೆ ಬಂದರು. ನಂತರ ವಿಶಾಲವಾದ ದಿವಾನ್-ಏ-ಆಮ್ ದರ್ಬಾರ್ ದಾಟಿ ಪುನಃ ಮೆಟ್ಟಿಲನ್ನೇರಿ ಆಯುಧಶಾಲೆಯನ್ನು ತಲುಪಿದರು. ಉದ್ದಕ್ಕೂ ಒಂದೇ ಸಮನೆ ವರ್ಣನೆ ಒದರುತ್ತಿದ್ದ ಗೈಡ್ ಒಬ್ಬ ಹೇಳುತ್ತಿದ್ದ "ಈ ಆಯುಧಶಾಲೆ ವಿಶಿಷ್ಟವಾದದ್ದು. ಇಲ್ಲಿ ಹದಿನಾಲ್ಕನೇ ಶತಮಾನದಿಂದ ಉಪಯೋಗಿಸಲ್ಪಟ್ಟ ಶಸ್ತ್ರಾಸ್ತ್ರ-ಕವಚಗಳನ್ನು ಕಾಣಬಹುದು. ಇಗೋ ಇದು ನೋಡಿ ವ್ಯಾಘ್ರಾಂಖ, ಇದು ವಜ್ರಮುಷ್ಠಿ-ಕಂಠೀರವ ನರಸರಾಜ ಒಡೆಯರು ಉಪಯೋಗಿಸಿದ ಕತ್ತಿ. ಒಟ್ಟು ೭೨೫ ಆಕ್ರಮಣ-ಆತ್ಮರಕ್ಷಣೆಯ ಆಯುಧಗಳಿವೆ. ಹಳೆ ಕಾಲದ ಮುದ್ಗರ, ಸುರಾಗಿ, ಜಾಂಬಿಯ, ಭರ್ಜಿಗಳನ್ನೂ ಇಲ್ಲಿ..."

ಭಾಸ್ಕರ ಒಂದು ಬೀಗ ಹಾಕಿದ್ದ ಕೋಣೆಯ ಬಾಗಿಲಿಗೆ ಹೋಗಿ ಚಿಂತಾಮಗ್ನನಾಗಿ ನಿಂತಿದ್ದ. "ದಸರಾ ಮೆರವಣಿಗೆಯಲ್ಲಿ ಬಳಸುವ ಬಂಗಾರದ ರಾಜ-ಸಿಂಹಾಸನ ಈ ಕೋಣೆಯಲ್ಲಿ ಇರುತ್ತದೆ" ಭಾಸ್ಕರ ನಿಂತ ಬಾಗಿನನ್ನು ತೋರಿಸುತ್ತ ಗೈಡ್ ಹೇಳಿದ. "ಮೈಸೂರಿನ ರಾಜ್ಯ-ಲಾಂಛನ, ಇತರ ಪತಾಕೆಗಳನ್ನೂ ಇಲ್ಲಿಯೇ ಇರಿಸಿರುತ್ತಾರೆ. ಮುಂದೆ ದೇವಾಲಯಗಳಿಗೆ ಹೋಗೋಣ". ಜನರೆಲ್ಲರೂ ಅವನ ಹಿಂದೆ ಹೊರಟರು. ಭಾಸ್ಕರ, ಉಜ್ವಲಾ ಹಿಂದುಳಿದರು.

ಮುಚ್ಚಿದ್ದ ಬಾಗಿಲನ್ನು ನೋಡಿ, ನಂತರ ಉಜ್ವಲಾಳನ್ನು ನೋಡಿ ಹೌದೆಂದು ಭಾಸ್ಕರ ಕತ್ತು ಕುಲುಕಿದ. ಉಜ್ವಲಾ ಕಣ್ಣಿನಲ್ಲೇ ತನಗೆ ಅರ್ಥವಾಗಿರುವುದೆಂದು ತೋರಿಸಿದಳು. ಭಾಸ್ಕರ ಬೆರಳುಮಾಡಿ ಆಚೆ ತೋರಿಸಿದಾಗ ಇಬ್ಬರೂ ಅರಮನೆಯಿಂದ ಹೊರಬಿದ್ದರು. ಕೂಡಲೇ ಉಜ್ವಲಾ ತಲೆ ಬಗ್ಗಿಸಿಕೊಂಡು ಭಾಸ್ಕರನ ಕೈ ಹಿಡಿದು ಎಳೆದುಕೊಂಡು ಸರ-ಸರನೆ ಓಡತೊಡಗಿದಳು.

"ಯಾ..ಏ...??" ಭಾಸ್ಕರ ಎನ್ನುವಷ್ಟರಲ್ಲಿ ಅರಮನೆಯ ಪ್ರವೇಶ-ದ್ವಾರದ ಹೊರಗಿದ್ದರು.

"ನಾಗೇಶನ್! ಒಳಗೆ!" ಉಜ್ವಲಾ ಹೇಳಿದಾಗ ಭಾಸ್ಕರನಿಗೆ ಗಾಬರಿಯಾಯಿತು.

"ಹಾಗಾದರೆ ಅವನು ಇವತ್ತೇ...?"

"ಹೌದು ಪ್ರೊಫೆಸರ್..." ಉಜ್ವಲಾ ಹೇಳಿದಳು

"ಹಾಗಾದರೆ ಒಂದೇ ದಾರಿ. ಹೇಗಾದರೂ ಆಯುಧಶಾಲೆಗೆ ಹೋಗಿ ಆ ಕೋಣೆಯ ಬಾಗಿಲಿನ ಬೀಗ ತೆಗೆದು ಒಳಗೆ ನೋಡಬೇಕು" ಭಾಸ್ಕರ ಧೃಡವಾಗಿ ನಿರ್ಧರಿಸಿದ.

*****

ಅಂದು ಭಾನುವಾರವಾಗಿದ್ದರಿಂದ ಸಂಜೆ ೭:೦೦ರಿಂದ ೮:೦೦ಘಂಟೆಯವರೆಗು ಅರಮನೆಯನ್ನು ಇಲೆಕ್ಟ್ರಿಕ್ ದೀಪಗಳಿಂದ ಪ್ರಕಾಶಿಸಲಾಗಿತ್ತು. ಭಾಸ್ಕರ ಹಾಗು ಉಜ್ವಲಾ ಮುಖ್ಯದ್ವಾರವನ್ನು ಪ್ರವೇಶಿಸಿ ಆ ಸುಂದರ ದೃಷ್ಯವನ್ನು ನೋಡುತ್ತ ಅರಮನೆಯ ಅಂಗಳದಲ್ಲಿ ಕುಳಿತರು.

"ಆ ಲಾಂಛನ ಈ ಹೊಸ ಅರಮನೆಗೆ ಹೇಗೆ ಬಂದಿರಬಹುದು? ಇದು ಇತ್ತೀಚೆಗೆ ಕಟ್ಟಿದ ಅರಮನೆಯಲ್ಲವೆ?" ಉಜ್ವಲಾ ಕೇಳಿದಳು.

"ಹೌದು, ಇಲ್ಲಿದ್ದ ಹಳೆಯ ಅರಮನೆ ೧೮೯೭ರಲ್ಲಿ ಸುಟ್ಟು ಭಸ್ಮವಾಯಿತು. ಅದೇ ಸ್ಥಳದಲ್ಲಿ ಈ ಹೊಸ ಅರಮನೆಯನ್ನು ೧೯೧೨ರಲ್ಲಿ ಕಟ್ಟಲಾಯಿತು. ಹಳೆ ಅರಮನೆಯಲ್ಲಿದ್ದ ರಾಜ-ಸಿಂಹಾಸನ, ರಾಜ್ಯ-ಲಾಂಛನ-ಪತಾಕೆಗಳನ್ನು ಇದ್ದಂತೆಯೇ ಹೊಸ ಅರಮನೆಗೆ ಸಾಗಿಸಲಾಯಿತು. ಒಂದು ರೀತಿ ಮೂಢನಂಬಿಕೆಯೆಂದುಕೋ-ಮೊದಲಿದ್ದಂತೆಯೇ ಕಾಪಾಡಿಕೊಂಡು ಬಂದರೆ ಅದೃಷ್ಟದೇವಿ ಜೊತೆಗೇ ಬರುವಳೆಂದು. ಆ ಸಮಯದಲ್ಲಿ ವಿಜಯನಗರದ ವರಾಹ ಲಾಂಛನವೂ ಉಳಿದ ಪತಾಕೆಗಳೊಂದಿಗೆ ಬಂದಿರಲೇಬೇಕು. ಒಡೆಯ ವಂಶದ ಅರಸರು ವರಾಹ ಸ್ವಾಮಿಯ ಭಕ್ತರು. ಹಾಗಾಗಿ ಆ ವರಾಹ ಲಾಂಛನವನ್ನು ಬಿಸಾಡಿರಲಾರರು. ಮೇಲಾಗಿ ಮೈಸೂರಿನ ಪಾರಂಪರಿಕ ಪತಾಕೆಗಳಲ್ಲಿ ಒಂದು ವರಾಹ ಲಾಂಛನವೂ ಇದೆಯೆಂದು ಮೂಲ ಸೂತ್ರಗಳಿಂದ ನನಗೆ ತಿಳಿದು ಬಂದಿದೆ. ಮೈಸೂರಿನ ಲಾಂಛನ ಗಂಡುಭೇರುಂಡ, ಹಾಗಾಗಿ ವರಾಹ ಲಾಂಛನವೆಂದರೆ ನರಸಪ್ಪನಾಯಕ ತಂದ ವಿಜಯನಗರದ ಲಾಂಛನವೇ ಆಗಿರಬೇಕು" ಭಾಸ್ಕರ ವಿವರಿಸಿದ. "ರಾಜ ಸಿಂಹಾಸನ, ಪತಾಕೆಗಳು ಆ ಕೋಣೆಯಲ್ಲಿದ್ದರೆ ನಮಗೆ ಬೇಕಾಗಿರುವ ವಸ್ತುವೂ ಅಲ್ಲೇ ಇರಬೇಕು"

ನೋಡುತ್ತಿದ್ದಂತೆ ಘಂಟೆ ೮:೦೦ಆಯಿತು. ಅಂಗಳದಲ್ಲಿ ಕುಳಿತು ನೋಡುತ್ತಿದ್ದ ಜನ ಒಬ್ಬೊಬ್ಬರಾಗಿ ಹೊರಗೆ ಹೋದರು. ಭಾಸ್ಕರ ಹಾಗು ಉಜ್ವಲಾ ಬಳಿಯಿದ್ದ ಬೆಂಚುಗಳ ಕೆಳಗೆ ಅವಿತು ಕುಳಿತಿದ್ದರು. ೯:೦೦ಘಂಟೆ ಹೊಡೆದ ನಂತರ ಅರಮನೆ ಸೆಕ್ಯೂರಿಟಿ-ಗಾರ್ಡ್ಸ್ ಬಂದು ಅರಮನೆಯ ಅಂಗಳದಲ್ಲಿ ಕಾಟಾಚಾರಕ್ಕೊಮ್ಮೆ ಪಹರೆ ನಡೆಸಿ ಹೊರಟುಹೋದರು. ೧೦:೦೦ಘಂಟೆಗೆ ಪೋಲೀಸ್ ಸಿಬ್ಬಂದಿಗಳು ಬಂದು ಪಹರೆ ಕೊಟ್ಟು ಹೋದರು. ಯಾರೂ ಅವಿತುಕೊಂಡಿದ್ದ ಭಾಸ್ಕರ, ಉಜ್ವಲಾರನ್ನು ಗಮನಿಸಲಿಲ್ಲ. ೧೧:೦೦ಘಂಟೆಗೆ ಎಲ್ಲವೂ ಶಾಂತವಾಗಿತ್ತು. ಭಾಸ್ಕರ ಇನ್ನೂ ಸ್ವಲ್ಪ ಹೊತ್ತು ಅಲುಗಾಡಲಿಲ್ಲ. ಕೊನೆಗೆ ಇಬ್ಬರೂ ಹೊರಗೆ ಬಂದರು. ಭಾಸ್ಕರ "ಯೋಚಿಸದೆ ನಾನು ನಿನ್ನನ್ನು ಈ ಪಿತೂರಿಗೆ ಎಳೆದಿದ್ದೀನಿ. ಆದರೆ ನೋ ಮೋರ್. ನೀನು ಹೊರಗೇ ಇರು, ನಾನು ಒಳಗೆ ಹೋಗಿ ಹುಡುಕುವೆ. ನಾನೇನಾದರೂ ಸಿಕ್ಕಿಹಾಕಿಕೊಂಡರೆ ನೀನು ಅರಮನೆ ನೋಡಲು ಬಂದು ನಿದ್ದೆ ಮಾಡಿಬಿಟ್ಟಿದ್ದೆ ಎಂದು ಹೇಳಿ ತಪ್ಪಿಸಿಕೊ. ಉದ್ದಕ್ಕೂ ಸೆಲ್ ಫೋನ್ ಮೇಲೆ ಕಾಂಟ್ಯಕ್ಟ್‍ನಲ್ಲಿರೋಣ" ಎಂದು ಹೇಳಿ ಅರಮನೆಯೊಳಗೆ ಹೊರಟ.

ಗೊಂಬೆ-ತೊಟ್ಟಿಯನ್ನು ಹಾಯ್ದು ಆನೆ-ದ್ವಾರಕ್ಕೆ ಬಂದು ನಿಂತ. ಮುಖ್ಯದ್ವಾರದ ಪಕ್ಕದಲ್ಲಿದ್ದ ಒಂದು ಸಣ್ಣ ಬಾಗಿಲಿಗೆ ಬೀಗಗಳಿರಲಿಲ್ಲ. ಅದನ್ನು ನಿಧಾನವಾಗಿ ತೆಗೆದು ಅರಮನೆಯೊಳಗೆ ಹೊಕ್ಕ. ಸುತ್ತಲು ನರಪಿಳ್ಳೆಯೂ ಇಲ್ಲದಿರುವುದು ವಿಚಿತ್ರವೆನಿಸಿತು. ಬೆಳಗ್ಗೆ ಹೋದ ದಾರಿಯನ್ನೇ ಹಿಡಿದು ಕಲ್ಯಾಣ ಮಂಟಪ ದಾಟಿ ಮೆಟ್ಟಿಲುಗಳನ್ನೇರಿ ಅಂಬಾವಿಲಾಸ ಹಾಗು ದಿವಾನ್-ಏ-ಆಮ್ ದರ್ಬಾರುಗಳನ್ನು ಹಾಯ್ದು ಪುನಃ ಮೆಟ್ಟಿಲನ್ನೇರಿ ಆಯುಧಶಾಲೆಯನ್ನು ಪ್ರವೇಶಿಸಿ, ಬೀಗ ಹಾಕಿದ್ದ ಕೋಣೆಯ ಮುಂದೆ ಬಂದು ನಿಂತ.

"ಓ.ಕೆ. ಲಾಕ್ಡ್-ರೂಂ ಮುಂದೆ ಬಂದಿದ್ದೇನೆ. ಈಗ ಬೀಗ ತೆಗೆಯುವುದು ಹೇಗೆಂದು ನೋಡಬೇಕು" ಕಿವಿಗೆ ಸಿಕ್ಕಿಸಿಕೊಂಡಿದ್ದ ತನ್ನ ಮೋಬೈಲಿನ ಹ್ಯಾಂಡ್ಸ್-ಫ್ರೀ ಮೈಕ್ರೋಫೋನಿನೊಳಕ್ಕೆ ಹೇಳಿದ.

"ಗಾಟ್ ಇಟ್, ಪ್ರೊಫೆಸರ್" ಹೊರಗಿದ್ದ ಉಜ್ವಲಾಳ ಧ್ವನಿ ಭಾಸ್ಕರನ ಕಿವಿಯಲ್ಲಿ ಮೊಳಗಿತು.

ಭಾಸ್ಕರ ಬೀಗವನ್ನು ಒಡೆಯಲು ಯಾವುದಾದರೂ ಆಯುಧವನ್ನು ಹುಡುಕತೊಡಗಿದ. "ಆಯುಧಶಾಲೆಯಲ್ಲಿ ಒಂದು ಬೀಗ ಒಡೆಯಲು ಆಯುಧಗಳು ಸಿಗುವುದಿಲ್ಲ!" ಎಂದು ಗೊಣಗಿಕೊಂಡ. ಕೆಲ ನಿಮಿಷಗಳು ಮೌನದಲ್ಲೇ ಕಳೆದವು. ಭಾಸ್ಕರ ತೆಳ್ಳನೆಯ ತಂತಿಯೊಂದನ್ನು ಇನ್ನೂ ಹುಡುಕುತ್ತಲೇ ಇದ್ದ.

ಉಜ್ವಲಾಳ ತಾತುರಿಯ ಧ್ವನಿ ಕಿವಿಯಲ್ಲಿ ಬಂತು "ಪ್ರೊಫೆಸರ್, ಯಾರೋ ಬಾಗಿಲ ಒಳಗೆ ಬರುತಿದ್ದಾರೆ. ಪೋಲೀಸರ ಹಾಗೆ ಕಾಣಿಸುತ್ತಿಲ್ಲ. ಬಹುಶಃ ನಾಗೇಶನ್ ಕಡೆಯವರಿರಬಹುದು"

ಅನಿರ್ದಿಷ್ಟ ಶಬ್ದ ಮಾಡುತ್ತ, ಭಾಸ್ಕರ ಸುತ್ತ ನೋಡಿದಾಗ ಅವನ ಕಣ್ಣು ಬಿದ್ದದ್ದು ಮುದ್ಗರವೆಂಬ ಗದೆಯೊಂದರಮೇಲೆ. ಭಾರವಾಗಿದ್ದ ಗದೆಯನ್ನು ಎತ್ತಿಕೊಂಡು ಹೋಗಿ ಆ ಬಾಗಿಲ ಮೇಲೆ ಬಲವಾಗಿ ಪ್ರಹಾರ ಮಾಡಿದ. ಎರಡು ಏಟುಗಳಿಗೆ ಬಾಗಿಲು ಮುರಿಯಿತು.

ಗುಪ್ತ ಕೋಣೆಯಳಹೊಕ್ಕ ಭಾಸ್ಕರನ ದೃಷ್ಟಿ ಮೊದಲು ಬಿದ್ದದ್ದು ಗೋಡೆಗೆ ಒರಗಿಸಿಟ್ಟ ಪತಾಕೆಗಳ ಮೇಲೆ. ಕೋಣೆಯಲ್ಲಿದ್ದ ಏಕೈಕ ವರಾಹ ಲಾಂಛನ ಮೂಲೆಯಲ್ಲಿತು. ಎರಡು ಅಡಿ ಅಡ್ಡಳತೆಯಿದ್ದ ವೃತ್ತಾಕಾರದಲ್ಲಿದ್ದ ಅದರ ಬಲಭಾಗದಲ್ಲೊಂದು ವರಾಹವಿತ್ತು, ವರಾಹದ ತಲೆಯ ಮೇಲೊಂದು ಅರ್ಧ-ಚಂದ್ರ, ಎಡಭಾಗಲ್ಲಿ ಒಂದು ಕತ್ತಿ, ಅದರ ಪಕ್ಕದಲ್ಲೊಂದು ಸಣ್ಣ ಗುಂಡಿ. ಭಾಸ್ಕರ ಲಾಂಛನವನ್ನು ಕೈಗೆತ್ತಿಕೊಂಡು ಅದರ ಮೇಲಿನ ಧೂಳನ್ನು ಒರೆಸುತ್ತಿದ್ದಾಗ ಅವನ ಕೈಬೆರಳು ಲಾಂಛನದಮೇಲಿದ್ದ ಗುಂಡಿಯನ್ನು ಒತ್ತಿತು. ಒಮ್ಮೆಲೆ ಕತ್ತಿ ಜಾರಿ ಕೆಳಕ್ಕೆ ಬಿತ್ತು. ಕತ್ತಿ ಖಾಲಿ ಮಾಡಿದ್ದ ಕಂದರದೊಳಗೆ ರಥವೊಂದರ ಚಿತ್ರ ಕಾಣಿಸಿತು. ದಿಟ್ಟಿಸಿ ನೋಡಿದಾಗ ಇದು ಹಂಪೆಯ ಕಲ್ಲಿನ ರಥದ ಚಿತ್ರವೆಂದು ಅರ್ಥವಾಯಿತು.

"ಪ್ರೊಫೆಸರ್, ಪಹರೆ ಕೊಡುತ್ತಿದ್ದ ಗಾರ್ಡ್‍ಗಳು ಎಚ್ಚೆತ್ತುಕೊಂಡಿದ್ದಾರೆ, ಅವರೂ ಅರಮನೆಯೊಳಕ್ಕೆ ನುಗ್ಗುತ್ತಿದ್ದಾರೆ" ಪುನಃ ಆತಂಕದಿಂದ ಕೂಡಿದ ಉಜ್ವಲಾಳ ಧ್ವನಿ ಭಾಸ್ಕರನ ಕಿವಿಯಲ್ಲಿ ಕೂಗಿತು. ಅದೇ ಸಮಯಕ್ಕೆ ಸರಿಯಾಗಿ ನಾಲ್ಕೈದು ಜನರು ಓಡುತ್ತ ಸಮೀಪಿಸುತ್ತಿದ್ದ ಶಬ್ದವೂ ಕೇಳಿಸಿತು. ನೆಲಕ್ಕೆ ಬಿದ್ದಿದ್ದ ಕತ್ತಿಯನ್ನೂ ಎತ್ತಿಕೊಂಡು ತನ್ನ ಕೋಟಿನ ಜೇಬಿನಲ್ಲಿರಿಸಿಕೊಂಡು, ಭಾಸ್ಕರ ಅಲ್ಲಿನಿಂದ ಓಡ ತೊಡಗಿದ. ಕೆಳಗೆ ಕಲ್ಯಾಣ ಮಂಟಪದಲ್ಲಿ ಗಾರ್ಡ್‍ಗಳು ನಾಗೇಶನ್‌ನ ಗೂಂಡಾಗಳೊಡನೆ ವ್ಯಸ್ಥರಾಗಿದ್ದರು. ಭಾಸ್ಕರ ಆನೆ-ದ್ವಾರವನ್ನು ದಾಟಿ ಓಡುತ್ತಿದ್ದಾಗ ಇನ್ಸ್‌ಪೆಕ್ಟರ್ ಮಹೇಶ್ವರ ಎದುರಿನಿಂದ ಬಂದ.

"ಪ್ರೊಫೆಸರ್..?!"

ಭಾಸ್ಕರ ನಿಷ್ಕ್ರಿಯನಾಗಿ ನಿಂತ. ಇನ್ಸ್‌ಪೆಕ್ಟರ್ ಒಳಗಿನಿಂದ ಬರುತ್ತಿದ್ದ ಕಾಳಗದ ಶಬ್ದವನ್ನು ತಪಾಸಣೆ ಮಾಡುವುದೋ, ಭಾಸ್ಕರನನ್ನು ಹಿಡಿಯುವುದೋ ನಿರ್ಧರಿಸಲಾಗದೆ ಹಿಂದುಮುಂದೆ ನೋಡುತ್ತ ನಿಂತ. ಒಳಗಿನಿಂದ ಗುಂಡು ಹಾರಿಸಿದ ಶಬ್ದ ಬಂದಿತು. ಬರಿಗೈ ಭಾಸ್ಕರನ ಮೇಲೆ ಒಳಗಿನ ಯುದ್ಧ ಗೆದ್ದಿತು. ಇನ್ಸ್ಪೆಕ್ಟರ್ ಏನು ನಡೆಯುತ್ತಿದೆ ನೋಡಲು ಒಳಗೆ ಹೋದ. ಅವಕಾಶವನ್ನು ಉಪಯೋಗಿಸಿಕೊಂಡು ಭಾಸ್ಕರ ಉಜ್ವಲಾಳ ಜೊತೆಗೂಡಿ ಇಬ್ಬರೂ ಅರಮನೆಯ ಆವರಣವನ್ನು ಬಿಟ್ಟು ಪರಾರಿಯಾದರು.

*****

ಭಾಸ್ಕರ ಮತ್ತು ಉಜ್ವಲಾ ಹೋಟಲ್‌ಗೆ ಹಿಂತಿರುಗುವ ಹೊತ್ತಿಗೆ ಸುಮಾರು ೩:೦೦ಘಂಟೆಯಾಗಿತ್ತು. ತಮ್ಮ ಸಾಮಾನು ಎತ್ತಿಕೊಂಡು ಹೋಟಲ್ ಖಾಲಿ ಮಾಡಿದಾಗ ೫:೦೦ಘಂಟೆ ಹೊಡೆದಿತ್ತು. ಹೋಟಲ್ ಕೋಣೆಯಿಂದಲೇ ಫೋನ್ ಮಾಡಿ ಭಾಸ್ಕರ ಟ್ಯಾಕ್ಸಿ ಗೊತ್ತು ಮಾಡಿಕೊಂಡಿದ್ದ. ಟ್ಯಾಕ್ಸಿ ಹತ್ತಿ ಇಬ್ಬರೂ ಪ್ರಯಾಣ ಆರಂಭ ಮಾಡಿದರು.

ಸುಮಾರು ಹೊತ್ತಿನ ಮೌನದ ಬಳಿಕ ಉಜ್ವಲಾಳ ತಾಳ್ಮೆ ಮೀರಿತ್ತು. "ಎಲ್ಲಿಗೆ ಹೊರಟಿದ್ದೇವೆ, ಪ್ರೊಫೆಸರ್? ಅರಮನೆಯಿಂದ ಬಂದಾಗಿನಿಂದ ಒಂದೂ ಮಾತನಾಡಿಲ್ಲ ನೀವು"

"ಸಾರಿ! ಯೋಚನೆ ಮಾಡುತ್ತಿದ್ದೆ. ಈ ಚಿತ್ರಬಂಧದ ಅನೇಕ ತುಣುಕುಗಳನ್ನು ಜೋಡಿಸಿ ನೋಡುತ್ತಿದ್ದೆ. ನಾವೀಗ ಮನೆಗೆ ಹಿಂತಿರುಗುತ್ತಿದ್ದೇವೆ" ಭಾಸ್ಕರ ದೂರದಲ್ಲೆಲ್ಲೋ ದೃಷ್ಟಿ ತೇಲಿಸಿ ಮೆಲ್ಲಗೆ ಮಾತನಾಡುತ್ತಿದ್ದ.

"ಮನೆಗೆ? ಅಂದರೆ..?"

"ವಾಪಸ್ ಹಂಪೆಗೆ. ನಾನು ಯೋಚಿಸುತ್ತಿರುವುದು ನಿಜವೇ ಆಗಿದ್ದರೆ, ಈ ಚಿತ್ರದ ಉಳಿದ ಭಾಗ ಹಂಪೆಯಲ್ಲೇ ಇದೆ"

"ಅರಮನೆಯಲ್ಲಿ ಏನಾಯಿತು? ಅದು ತಿಳಿಯದೆ ನಿಮ್ಮ ಈ ಚಿತ್ರ ನನಗೆ ಕಾಣಿಸುತ್ತಲೇ ಇಲ್ಲ"

"ಓಹ್! ಅರಮನೆಯ ಆ ಕೋಣೆಯಲ್ಲಿ ಸ್ವಲ್ಪ ಹುಡುಕಿದ ನಂತರ ಒಂದು ವರಾಹ ಎಂಬ್ಲಮ್ ಸಿಕ್ಕಿತು. ಅಲಿದ್ದದ್ದು ಒಂದೇ ಅಂತಹ ಲಾಂಛನ. ಅದರ ಆಕಾರ ನೋಡಿದರೆ ೧೪-೧೫ನೇ ಶತಮಾನದಲ್ಲಿ ಮಾಡಿದ್ದೆಂದು ತೋರುತ್ತಿತ್ತು. ಹಾಗಾಗಿ ನರಸಪ್ಪನಾಯಕ ತಂದ ಲಾಂಛನ ಅದೇ ಆಗಿರಬೇಕು. ಜಸ್ಟ್ ಬೈ ಪ್ಲೈನ್ ಲಕ್-ನಾನು ಧೂಳು ಒರೆಸುತ್ತಿದ್ದಾಗ ನನ್ನ ಕೈ ಲಾಂಛನದ ಮೇಲಿದ್ದ ಒಂದು ಗುಂಡಿಯನ್ನು ತಾಕಿತು. ಆಗ ಲಾಂಛನದಿಂದ ಕತ್ತಿಯೊಂದು ಕಳಚಿ ಕೆಳಗೆ ಬಿತ್ತು. ಆ ಕತ್ತಿಯ ಹಿಂದೆ ಕಲ್ಲಿನ ರಥದ ಒಂದು ಚಿತ್ರವಿತ್ತು. ಆಗಿನ ಕಾಲದ ರೂಢಿಯಾನುಸಾರವಾಗಿ ಅದರ ಅರ್ಥ ಕಲ್ಲಿನ ರಥವೇ ಬೀಗ, ಈ ಕತ್ತಿಯೇ ಅದರ ಬೀಗದಕೈ ಎಂದು" ಎನ್ನುತ್ತ ತಾನು ಅರಮನೆಯಿಂದ ತಂದ ಕತ್ತಿಯನ್ನು ಕರ್ಚೀಫಿನಲ್ಲಿ ಸುತ್ತಿದಂತೆ ತನ್ನ ಕೋಟ್ ಜೇಬಿನಿಂದ ಹೊರತೆಗೆದ.

"ವಾವ್!" ಉಜ್ವಲಾ ಕತ್ತಿಯನ್ನು ಕೈಗೆತ್ತಿಕೊಂಡು ನಾಜೂಕಾಗಿ ಪರೀಕ್ಷಿಸಿದಳು.

"ಈ ಬೇಗದಕೈಯಿನಿಂದ ಆ ಬೀಗವನ್ನು ಹೇಗೆ ತೆಗೆಯುವುದು ಅಲ್ಲಿ ಹೋಗಿಯೇ ನೋಡಬೇಕು. ಅದಕ್ಕೆ ಅಲ್ಲಿಗೆ ಹೊರಟಿದ್ದೇವೆ" ಭಾಸ್ಕರ ಮುಗಿಸಿದ.

"ಉಜ್ವಲಾ, ನೀನು ನನ್ನ ಜೊತೆ ಬರುವ ಅಗತ್ಯವಿಲ್ಲ. ಪರಿಸ್ಥಿತಿ ಬಹಳ ಅಪಾಯಕಾರಿಯಾಗುತ್ತಿದೆ" ಭಾಸ್ಕರ ತನ್ನ ಕಳವಳ ಹೇಳಿಕೊಂಡ.

"ಪ್ರೊಫೆಸರ್, ಐ ವುಡ್ ನಾಟ್ ಮಿಸ್ ಇಟ್ ಫಾರ್ ಎನಿಥಿಂಗ್. ಈ ದಾರಿ ಹಿಡಿದು ಹೊರಟಿದ್ದೀವಿ. ಎಲ್ಲಿ ಮುಗಿಯುತ್ತದೆಯೋ ನೋಡಿಯೇ ಬಿಡೋಣ"

*****

ಮಧ್ಯಾಹ್ನ ೧:೦೦ಘಂಟೆಗೇ ಹಂಪೆಯನ್ನು ತಲುಪಿದರೂ, ಪ್ರವಾಸಿಗಳಿರುವ ಸಮಯದಲ್ಲಿ ಏನೂ ಮಾಡುವಂತಿರಲಿಲ್ಲ. ಭಾಸ್ಕರ ಹಾಗು ಉಜ್ವಲಾ ಸೂರ್ಯ ಬಾನಿನಿಂದ ಇಳಿದ ಮೇಲೆ ವಿಜಯವಿಠ್ಠಲನ ದೇವಾಲಯದ ಆವರಣಕ್ಕೆ ಹೋಗಿ ಪ್ರಾಕಾರದಲ್ಲಿ ಕಲ್ಲಿನ ರಥವನ್ನು ನೋಡುತ್ತ ಕುಳಿತರು.

ಹಂಪೆಯ ಕಲ್ಲಿನ ರಥದ ವೈಭವ ಹೇಳಿಯೇ ತೀರದು! ಸುತ್ತಲೂ ಹಚ್ಚಿದ್ದ ಇಲೆಕ್ಟ್ರಿಕ್ ದೀಪಗಳು ರಥವನ್ನು ಬೆಳಗುತ್ತಿದ್ದವು. ದೇವಾಲಯದ ರಥದ ಕಲ್ಲಿನ ಅಚಲ ಸ್ವರೂಪ, ಸುಮಾರು ೨೨ ಅಡಿ ಎತ್ತರವಿತ್ತು. ಕೆಳಗಿನ ಭಾಗದಲ್ಲಿ ಕಲ್ಲಿನ ಇರಚಿಗೆ ಸಿಕ್ಕಿಸಿದ್ದ ನಾಲ್ಕು ಸುಂದರ ಕೆತ್ತನೆಗಳುಳ್ಳ ಕಲ್ಲಿನ ಚಕ್ರಗಳು. ಮಧ್ಯ ಭಾಗದಲ್ಲಿ ಗರುಡನ ಗುಡಿ. ಅದರ ಮೇಲೆ ಛಾವಣಿ. ರಥವನ್ನು ಎಳೆಯುತ್ತ ಸ್ತಬ್ಧವಾದಂತೆ ನಿಂತ ಕಲ್ಲಿನ ಆನೆಗಳು. ಮೇಲಿನಿಂದ ಕೆಳಗಿನವರೆಗು ಸೂಕ್ಷ್ಮ ಕೆತ್ತನೆಗಳು. ಕತ್ತಿ-ಬೀಗದಕೈಗೆ ಬೀಗವನ್ನು ಅಡಗಿಸಲು ಅತಿಯೋಗ್ಯ ಸ್ಮಾರಕ.

ರಾತ್ರಿ ೧೦:೦೦ಘಂಟೆಯ ಹೊತ್ತಿಗೆ ಕಲ್ಲಿನ ರಥದ ಸುತ್ತಲು ಇದ್ದ ದೇಪಗಳನ್ನು ಆರಿಸಲಾಗಿತ್ತು. ವಿಜಯವಿಠ್ಠಲ ದೇವಾಲಯ ನರಪಿಳ್ಳೆಯೂ ಇಲ್ಲದ ನಿರ್ಜನ ಪ್ರದೇಶವಾಗಿತ್ತು. "ಲೆಟ್ಸ್ ಗೋ" ಎನ್ನುತ್ತ ಉಜ್ವಲಾ ಎದ್ದಾಗ ತನ್ನ ಲೋಕದಲ್ಲಿಯೇ ಮುಳುಗಿ ಹೋಗಿದ್ದ ಭಾಸ್ಕರ ಎಚ್ಚೆತ್ತುಕೊಂಡ.

ಇಬ್ಬರೂ ಶಕ್ತಿಶಾಲಿ ಟಾರ್ಚ್‍ಗಳನ್ನು ತಂದಿದ್ದರು. "ರೈಟ್!" ಎನ್ನುತ್ತ ಭಾಸ್ಕರ ಎದ್ದು ತನ್ನ ಟಾರ್ಚ್ ಹತ್ತಿಸಿದ. ಇಬ್ಬರೂ ಕಲ್ಲಿನ ರಥದ ಬಳಿ ಹೋದರು. "ನಾವು ಹುಡುಕುತ್ತಿರುವುದು ಆ ಕತ್ತಿಯನ್ನು ಕೂರಿಸಲಾಗುವಂತಹ ಗುಳಿಯನ್ನು. ಅಡ್ಡಕ್ಕಿರಬಹುದು, ಉದ್ದಕ್ಕಿರಬಹುದು ಇಲ್ಲವೇ ತಿವಿಯುವಂತಹ ತೂತವಿರಬಹುದು. ಜಾಗರೂಕವಾಗಿ ಪ್ರತಿಯೊಂದು ಇಂಚನ್ನೂ ಪರೀಕ್ಷೆ ಮಾಡಿನೋಡು. ಯಾವ ಸಣ್ಣ ರಂಧ್ರವನ್ನೂ ಬಿಡಬೇಡ. ನೀನು ಕೆಳಗಿನ ಭಾಗವನ್ನು ನೋಡು, ನಾನು ಮೇಲಿನ ಭಾಗವನ್ನು ನೋಡುತ್ತೇನೆ" ಭಾಸ್ಕರ ಆಜ್ಞೆ ಮಾಡಿ ರಥದ ಮೇಲುಪಾಯವನ್ನು ಹತ್ತಿದ.

ಇಬ್ಬರೂ ಹುಡುಕತೊಡಗಿದರು. ಟಾರ್ಚ್ ಜೊತೆಗೆ ತಿವಿದು ನೋಡಲು ಸಣ್ಣ ಸ್ಕ್ರೂ-ಡ್ರೈವರ್, ಕೆರೆಯಲು ಬ್ರಶ್‍ಗಳು, ಕುಟ್ಟಲು ಪುಟಾಣಿ ಸುತ್ತಿಗೆಗಳು ಹಿಡಿದು ಬಂದಿದ್ದರು. ಕೆಲನಿಮಿಷಗಳು ಕುಟ್ಟುವ, ಉಜ್ಜುವ, ಸಪ್ಪಳ ಬಿಟ್ಟರೆ ಬೇರೇನೂ ಶಬ್ದ ಬರುತ್ತಿರಲಿಲ್ಲ. ನಂತರ ಉಜ್ವಲಾ ಕೂಗಿದಳು "ಇದನ್ನು ನೋಡಿ, ಪ್ರೊಫೆಸರ್. ಇದೇನಾದರೂ ಇರಬಹುದೇ?"

ಭಾಸ್ಕರ ಕೆಳಗಿಳಿದು ಬಂದ. ಕಲ್ಲಿನಲ್ಲಿ ಬಿರುಕು ಬಿಟ್ಟಂತೆ ಸಣ್ಣ ರಂಧ್ರವೊಂದು ಕಾಣಿಸುತ್ತಿತ್ತು. ಭಾಸ್ಕರ ತನ್ನ ಸ್ಕ್ರೂ-ಡ್ರೈವರ್ ಅದರೊಳಗೆ ತಿವಿದ. ಅದು ಎರಡು-ಮೂರು ಇಂಚ್ ಒಳಗೆ ಹೋಗಿ ನಿಂತಿತು. ತಲೆಯಾಡಿಸುತ್ತ ಕತ್ತಿಯನ್ನು ತೆಗೆದು ಅದರೊಳಗೆ ಹಾಕಲು ಯತ್ನಿಸಿದ. ಕತ್ತಿ ತುದಿಯಲ್ಲಿಯೇ ಕಚ್ಚಿಕೊಂಡು ಒಳಗೆ ಹೋಗಲೇ ಇಲ್ಲ. "ಓಹ್, ವೆಲ್" ಎಂದುಕೊಂಡು ಪುನಃ ಮೇಲೆ ಹತ್ತಿದ. ಉಜ್ವಲಾ ಕೆಳಗೆ ಹುಡುಕಾಟ ಮುಂದುವರೆಸಿದಳು.

ಇದೇ ರೀತಿ ಎರಡು-ಮೂರು-ನಾಲ್ಕು ಘಂಟೆಗಳು ಕಳೆದವು. ಆಗಾಗ ಬೀಗದಕೈ ಸಿಕ್ಕಿಸಬಹುದಾದಂತಹ ರಂಧ್ರಗಳು ಸಿಗುತ್ತಿದ್ದವು ಆದರೆ ಯಾವುದೂ ಸಫಲವಾಗಲಿಲ್ಲ. ಕೊನೆಗೆ ಕಂಗೆಟ್ಟು ಬೇಸರದಿಂದ ಕೆಲಸ ನಿಲ್ಲಿಸಿದರು.

"ಬಹುಶಃ ನಾನು ಅರ್ಥಮಾಡಿಕೊಂಡಿದ್ದೇ ತಪ್ಪು-ಅ ಕತ್ತಿಗೂ, ಈ ರಥಕ್ಕೂ ಯಾವ ಸಂಬಂಧವೂ ಇಲ್ಲದಿರಬಹುದು. ಅಷ್ಟಾಗಿ ಇದೆಲ್ಲ ಬರೀ ಊಹೆಗಳ ಮೇಲೆ ಕಟ್ಟಿದ ಕಟ್ಟಡ! ನಿಧಿ ಇದ್ದರೆ, ಅದರ ಕ್ಲೂ ನರಸಪ್ಪನಾಯಕ ತೆಗೆದುಕೊಂಡು ಹೋಗಿದ್ದರೆ, ಆ ಸುಳಿವು ನನಗೆ ಸಿಕ್ಕ ಲಾಂಛನವೇ ಆಗಿದ್ದರೆ, ಅದರಿಂದ ಬಿದ್ದ ಕತ್ತಿ ಬೀಗ ದಕೈ ಆಗಿದ್ದರೆ, ಕಲ್ಲಿನ ರಥವೇ ಬೀಗವಾಗಿದ್ದರೆ... ಛೆ, ಛೆ...ಯಾರಾದರೂ ಕೇಳಿಸಿಕೊಂಡರೆ ನಕ್ಕಾರು" ಎದೆಗುಂದಿದ ಭಾಸ್ಕರ ಹೇಳಿದ.

ಉಜ್ವಲಾ ಮಾತನಾಡಲಿಲ್ಲ, ಅವನನ್ನು ಹುರಿದುಂಬಿಸಲೂ ಇಲ್ಲ. ಸುಸ್ತಾಗಿ ರಥವನ್ನು ಎಳೆಯುತ್ತಿದ್ದ ಆನೆಯ ಮೇಲೆ ಒರಗಿ ಕುಳಿತಳು. ಅವಳನ್ನು ನೋಡಿದ ಭಾಸ್ಕರ ಒಮ್ಮೆಲೆ ಚೇತರಿಸಿಕೊಂಡ.

"ಅರೆರೆ...ಅಷ್ಟು ಸರಳವಾಗಿರಬಹುದೇ? ಉಹೂಂ...ಆದರೂ..."

"ಪ್ರೊಫೆಸರ್, ಏನು ಮಾತನಾಡುತ್ತಿದ್ದೀರಿ?"

"ಆ ಆನೆ! ಮೊದಲು ಈ ರಥವನ್ನು ಕುದುರೆಗಳು ಎಳೆಯುತ್ತಿದ್ದವಂತೆ-ಆ ಆನೆಗೆಳ ಬದಲಿಗೆ ಕಲ್ಲಿನ ಕುದುರೆಗಳಿದ್ದವು. ನಂತರ ಆ ಕುದುರೆಗಳನ್ನು ಬದಲಾಯಿಸಿ ಅದೇ ಸ್ಥಳದಲ್ಲಿ ಆನೆಗಳನ್ನು ಕೆತ್ತಲಾಯಿತು. ಈ ಬೀಗದಕೈ ಕಿಂಡಿ ಅಡಗಿಸಲೆಂದೇ ಕುದುರೆಯನ್ನು ಬದಲಾಯಿಸಿ ಆನೆಯನ್ನು ಇರಿಸಿರಬಹುದೇ?" ಎನ್ನುತ್ತಾ ಭಾಸ್ಕರ ಆನೆಯೊಂದರ ಮುಂದೆ ಮಂಡಿಯೂರಿ ಅದನ್ನು ಪರಿಶೀಲಿಸಲಾರಂಭಿಸಿದ. ಮೊದಲ ಆನೆಯಲ್ಲಿ ಏನೂ ಕಾಣಿಸದೆ ಎರಡನೆಯದಕ್ಕೆ ಸರಿದ. ಅದನ್ನು ವಿಸ್ತಾರವಾಗಿ ಪರಿಶೀಲಿಸಿದ ನಂತರ ಪುನರಾಲೋಚನೆಮಾಡಿ ಮೊದಲನೆಯದಕ್ಕೆ ಮರಳಿ, ಅದರ ಬಾಯೊಳಕ್ಕೆ ಸ್ಕ್ರೂ-ಡ್ರೈವರ್ ತೂರಿಸಿದ.

"ಆಹಾ!" ಎನ್ನುತ್ತ ಜೇಬಿನಿಂದ ಕತ್ತಿಯನ್ನು ತೆಗೆದು ಆನೆಯ ಬಾಯೊಳಕ್ಕೆ ತೂರಿಸಿದ. ಕತ್ತಿ ಹಿಡಿ ತಡೆಯುವವರೆಗು ಒಳಗೆ ಹೋಯಿತು.

ಗುಡುಗಿನಂತಹ ಶಬ್ದ ಬಂತು. ನೋಡುತ್ತಿದ್ದಂತೆಯೇ ಅಚಲ ಕಲ್ಲಿನ ರಥ ಮುಂದೆ ಸಾಗಲಾರಂಭಿಸಿತು. ಸುಮಾರು ೧೦-ಅಡಿ ಮುಂದೆ ಸರಿದು ನಿಂತಿತು. ಭಾಸ್ಕರ ಮತ್ತು ಉಜ್ವಲಾ ರಥವು ಖಾಲಿ ಮಾಡಿದ ಸ್ಥಳಕ್ಕೆ ತಮ್ಮ ಟಾರ್ಚುಗಳನ್ನು ಬೆಳಗಿಸಿದರು. ಹುಳ-ಹುಪ್ಪೆಗಳು ಓಡಿಹೋದ ನಂತರ ಆ ಸ್ಥಳದಲ್ಲಿ ಒಂದು ಆಕಳಿಸುವ ಕಿಂಡಿ ಕಾಣಿಸತೊಡಗಿತ್ತು. ಕಿಂಡಿಯ ಸುತ್ತ ಜೇಡರ ಬಲೆ ಕಟ್ಟಿತ್ತು. ಮೆಟ್ಟಿಲುಗಳು ಕಿಂಡಿಯಿಂದ ಕೆಳಗಿಳಿದು ಕತ್ತಲಿನಲ್ಲಿ ಮಾಯವಾಗುತ್ತಿದ್ದವು. ಕಿಂಡಿಯೊಳಕ್ಕೆ ಟಾರ್‍ಚ್ ಬೆಳಗಿಸಿದರೂ ಆ ಬೆಳಕು ಹೆಚ್ಚು ದೂರ ಹೋಗಲಿಲ್ಲ. ಮಾತು ಹೊರಡದೆ ದವಡೆ ಇಳಿಬಿಟ್ಟು ಇಬ್ಬರೂ ಕಿಂಡಿಯನ್ನೇ ನೋಡುತ್ತ ನಿಂತರು.

"ಥ್ಯಾಂಕ್ಸ್, ಪ್ರೊಫೆಸರ್. ನನಗೆ ನಿಮ್ಮ ಮೇಲೆ ಸಂಪೂರ್ಣ ಭರವಸೆ ಇತ್ತು" ಪರಿಚಿತ ಧ್ವನಿ ಕೇಳಿಸಿತು. ತಿರುಗಿ ನೋಡಿದಾಗ ಕೈಯಲ್ಲಿ ರಿವಾಲ್ವರ್ ಹಿಡಿದು ನಾಗೇಶನ್ ಅವರಿದ್ದೆಡೆಗೆ ನಡೆದು ಬರುತ್ತಿದ್ದ. ಅವನೊಡನೆ ಮೂವರು ಗೂಂಡಾಗಳು ಬಂದೂಕುಗಳನ್ನು ಹಿಡಿದು ಬರುತ್ತಿದ್ದರು.

ಭಾಸ್ಕರ, ಉಜ್ವಲಾ ಎರಡೇ ನಿಮಿಷಗಳಲ್ಲಿ ಎರಡನೆ ಬಾರಿ ಬಾಯ್ತೆರೆದು ಅಚ್ಚರಿಯಿಂದ ನೋಡುತ್ತ ನಿಂತರು. ನಾಗೇಶನ್ ಹಗುರವಾಗಿ "ಓಹ್! ಅಷ್ಟು ಆಶ್ಚರ್ಯ ಪಡಬೇಡಿ, ಪ್ರೊಫೆಸರ್. ನೀವು ಬೆಂಗಳೂರು ಬಿಟ್ಟಾಗಿನಿಂದ ನಮ್ಮವರು ನಿಮ್ಮನ್ನು ಹಿಂಬಾಲಿಸುತ್ತಲೇ ಇದ್ದಾರೆ. ನಾನು ನಿಮಗೆ ಅನ್ಯಾಯ ಮಾಡಿಲ್ಲ. ಪಾರ್ಟ್ನರ್ ಮಾಡಿಕೊಳ್ಳಿಯೆಂದು ಮೊದಲಿಗೇ ಕೇಳಲಿಲ್ಲವೇ? ಈಗ ಇಡೀ ನಿಧಿ ನನ್ನದೇ. ಆದರೆ ನಿಮಗೂ ಒಮ್ಮೆ ಅದನ್ನು ನೋಡುವ ಅವಕಾಶ ಕೊಡುತ್ತೇನೆ. ನಡೆಯಿರಿ ಹೋಗೋಣ" ಎನ್ನುತ್ತ ತನ್ನ ರಿವಾಲ್ವರ್‌ನಿಂದ ಕಿಂಡಿಯ ಕಡೆ ಸನ್ನೆ ಮಾಡಿದ.

ಎಲ್ಲರೂ ನೆಲದಲ್ಲಿದ್ದ ಕಿಂಡಿಯನ್ನು ಸುತ್ತುವರಿದು ನಿಂತರು. "ಆ ಕತ್ತಲು, ಭಯಾನಕ ಗುಂಡಿಯೊಳಕ್ಕೆ ಯಾರು ಮೊದಲು ಹೋಗ್ತೀರ?" ಒಬ್ಬ ಗೂಂಡ ಉಸುರಿದ.

ನಾಗೇಶನ್ ಅವನನ್ನು ದುರ್ಗುಟ್ಟಿ "ಮಾರ, ಭದ್ರ, ನನ್ನ ಜೊತೆ. ಖಾನ್, ನೀನಿಲ್ಲೇ ಇರು. ನಾನಿಲ್ಲದೆ ಯಾರಾದರೂ ಆಚೆ ಬಂದರೆ...ಏನು ಮಾಡಬೇಕು ನಿನಗೆ ಗೊತ್ತೇ ಇದೆ. ನಡೆಯಿರಿ" ಎಂದ.

ಭಾಸ್ಕರ ಟಾರ್ಚ್ ಹಿಡಿದು ಮೆಲ್ಲನೆ ಕಿಂಡಿಯೊಳಗಿನ ಮೆಟ್ಟಿಲುಗಳನ್ನು ಇಳಿಯ ತೊಡಗಿದ. ಅವನ ಹಿಂದೆ ಒಬ್ಬೊಬ್ಬರಾಗಿ ಉಳಿದವರೂ ಹೊರಟರು-ಭಾಸ್ಕರನ ಹಿಂದೆ ನಾಗೇಶನ್, ಅವನ ಹಿಂದೆ ಉಜ್ವಲಾ, ನಂತರ ಮಾರ, ಭದ್ರ. ಸುಮಾರು ೨೫-ಮೆಟ್ಟಲುಗಳು ಇಳಿದ ನಂತರ ಒಂದು ಇಕ್ಕಟ್ಟಾದ ಸುರಂಗಕ್ಕೆ ಬಂದರು. ಭಾಸ್ಕರ ದಾರಿ ತೋರಿಸುತ್ತಿದ್ದ, ಉಳಿದವರು ಸಾಲಾಗಿ ಒಬ್ಬರ ಹಿಂದೆ ಒಬ್ಬರು ನಿಧಾನವಾಗಿ ನಡೆಯ ತೊಡಗಿದರು. ಸ್ವಲ್ಪ ದೂರ ಹೋದ ನಂತರ ಒಂದು ಸಣ್ಣ ಕೋಣೆಗೆ ಬಂದರು. ಸಮಯ ನೋಡಿ ಉಜ್ವಲಾ ಭಾಸ್ಕರನ ಪಕ್ಕಕ್ಕೆ ಹೋಗಿ ನಿಂತಳು.

ಭಾಸ್ಕರ, ಉಜ್ವಲಾರ ಟಾರ್‍ಚ್‍ಗಳು ಹಲವು ಘಂಟೆಗಳ ಕಾಲ ಬೆಳಗಿದ್ದರಿಂದ ಅವುಗಳೊಳಗಿದ್ದ ಬ್ಯಾಟರಿಗಳು ಸಾಯುತ್ತಿದ್ದವು. ಮಬ್ಬಾದ ಬೆಳಕಲ್ಲಿ ಕೋಣೆಯಲ್ಲಿ ತೂಗಿಹಾಕಿದ್ದ ಪಂಜು ಕೈಗೆತ್ತಿಕೊಳ್ಳುತ್ತ, ಭಾಸ್ಕರ ಕೇಳಿದ "ಬೆಂಕಿಕಡ್ಡಿ ಇದೆಯೇ?"

ನಾಗೇಶನ್ ತನ್ನ ಜೇಬಿನಿಂದ ಲೈಟರ್ ಒಂದನ್ನು ಹೊರತೆಗೆದು, ಚಲಾಯಿಸಿ ಭಾಸ್ಕರನ ಕೈಯಲ್ಲಿದ್ದ ಪಂಜನ್ನು ಹೊತ್ತಿಸಿದ. ಬೆಳಕು ಸ್ವಲ್ಪ ಹೆಚ್ಚಾಯಿತು.

"ವಾವ್" ಉಜ್ವಲಾ ಉದ್ಗಾರ ತೆಗೆದಳು.

ತಳ ಕಾಣಿಸದ ಬಾವಿಯೊಂದರ ತುದಿಯಲ್ಲಿ ಕಟ್ಟಿದ್ದ ಜಗಲಿಯಮೇಲೆ ನಿಂತಿದ್ದರು. ಬಾವಿಯ ಅಡ್ಡಳತೆ ಸುಮಾರು ೪೦-ಅಡಿಯಾಗಿತ್ತು. ಬಾವಿಯ ಗೋಡೆಗೆ ಅಂಟಿದಂತೆ ಇಕ್ಕಟ್ಟಾದ ಚಕ್ರಾಕಾರ ಮೆಟ್ಟಿಲುಗಳು ಕೆಳಕ್ಕೆ ಹೋಗುತ್ತಿದ್ದವು. ರಕ್ಷಣೆಗಾಗಿ ಮೆಟ್ಟಿಲಿಗೆ ಮರದ ಸಾರುವೆಯನ್ನು ಕಟ್ಟಲಾಗಿತ್ತು.

"ಆಗಿನ ಕಾಲದಲ್ಲಿ ಇಷ್ಟೆಲ್ಲ ಹೇಗೆ ಕಟ್ಟಿರಲು ಸಾಧ್ಯ?" ಬೆರಗಾಗಿ ನಾಗೇಶನ್ ಕೇಳಿದ.

"ಮೇಲಿನ ದೇವಾಲಯಗಳನ್ನು ಹೇಗೆ ಕಟ್ಟಿದರೋ ಹಾಗೆ" ಭಾಸ್ಕರ ಉತ್ತರಿಸಿದ.

"ಅದೇನು?" ಮೇಲಿನಿಂದ ತೂಗಿಹಾಕಿದ್ದ ೮-ಅಡಿ ಅಗಲವಾದ ವಸ್ತುವೊಂದನ್ನು ತೋರಿಸುತ್ತ ಕೇಳಿದ ಭದ್ರ.

"ಅದು ದೀಪ ಗುಚ್ಛ" ಎನ್ನುತ್ತ ಭಾಸ್ಕರ ಬಗ್ಗಿ ಅದನ್ನೂ ಹೊತ್ತಿಸಿದ. ಬಾವಿಯಲ್ಲಿ ಸಾಕಷ್ಟು ಬೆಳಕಾಯಿತು, ಆದರೆ ತಳವಿನ್ನೂ ಕಾಣಿಸುತ್ತಿರಲಿಲ್ಲ.

"ನಡೆಯಿರಿ, ಇನ್ನೇನು ತಡ" ನಾಗೇಶನ್ ಹೇಳಿದ.

ಮಾರ ಮುಂದೆ ಹೊರಟ, ಆದರೆ ಉಜ್ವಲಾ ಹಿಂಜರಿದಳು. "ಐದು-ನೂರು ವರ್ಷಗಳಿಂದ ಗೆದ್ದಲು ಹತ್ತಿದ ಆ ಮರದ ಸಾರುವೆಯನ್ನು ನಂಬಿಕೊಂಡು ನಾನು ಬರೋದಿಲ್ಲ"

ನಾಗೇಶನ್ ತನ್ನ ರಿವಾಲ್ವರ್ ಅವಳ ಕಡೆ ತಿರುಗಿಸಿದಾಗ ಭಾಸ್ಕರ ನಿಷ್ಕೃಷ್ಟವಾಗಿ ಹೇಳಿದ "ಉಜ್ವಲಾ, ನಡಿ ಹೋಗೋಣ"

ಪುನಃ ನಿಧಾನವಾಗಿ ಮೆಟ್ಟಿಲುಗಳನ್ನು ಇಳಿಯುತ್ತ ಒಬ್ಬರ ಹಿಂದೆ ಒಬ್ಬರು ಹೊರಟರು. ಒಂದು ಸ್ಥಳದಲ್ಲಿ ಒಂದು ಮೆಟ್ಟಿಲು ಮಾಯವಾಗಿತ್ತು. ಮಾರ ಕೆಳಗಿನ ಮೆಟ್ಟಿಲಿಗೆ ನೆಗೆಯಲು ಮರದ ಸಾರುವೆಯ ಆಸರೆ ಪಡೆಯಲೆಂದು ಅದರೆ ಮೇಲೆ ಒರಗಿ ಭಾರ ಬಿಟ್ಟ. ಗೆದ್ದಲು ಹತ್ತಿದ ಸಾರುವೆ ಮುರಿದು ಮಾರನ ಸಮೇತ ಬಾವಿಯೊಳಗೆ ಬೀಳಲಾರಂಭಿಸಿತು. ಮುಂದಿನ ೧೦-ಸೆಕೆಂಡ್‍ಗಳು ಹತ್ತು ವರ್ಷಗಳಂತೆ ಕಳೆದವು, ಮಾರ ಕಣ್ಮರೆಯಾದರೂ ಅವನ ಕೂಗು ಕೇಳಿಸುತ್ತಲೇ ಇತ್ತು. ನಿಧಾನವಾಗಿ ಅದೂ ಮೌನವಾಯಿತು. ಭಾಸ್ಕರ, ಉಜ್ವಲಾ ಭೀತಿಗ್ರಸ್ಥರಾಗಿ ನೋಡುತ್ತಿದ್ದರು. ನಾಗೇಶನ್ ಕೆಲ ಕ್ಷಣಗಳನಂತರ ಎಚ್ಚೆತ್ತು ಆ ಮೆಟ್ಟಿಲನ್ನು ಇಳಿದು ಮುಂದೆ ಹೋಗಲಾರಂಭಿಸಿದ.

"ನಾಗೇಶನ್, ಬೇಡ. ಬಹಳ ಅಪಾಯಕಾರಿ"

"ನಿಮ್ಮ ಪ್ರಾಣ ಮಾರನ ಪ್ರಾಣಕ್ಕಿಂತ ಅಮೂಲ್ಯವೆಂದುಕೊಂಡಿದ್ದೀರ? ಲೆಟ್ಸ್ ಗೋ"

ಭಾಸ್ಕರ, ಉಜ್ವಲಾ ದಂಗಾಗಿ ಅವನ ಹಿಂದೆ ಹೊರಟರು.

ಸುಮಾರು ೨೦-ನಿಮಿಷ ಇದೇ ರೀತಿ ಮೆಟ್ಟಿಲುಗಳನ್ನು ಇಳಿದು ಹೋದ ನಂತರ ಪುನಃ ಮತ್ತೊಂದು ಜಗಲಿಗೆ ಬಂದು ನಿಂತರು. ಮೆಟ್ಟಿಲುಗಳೂ ಅಲ್ಲಿಗೇ ನಿಂತು ಹೋಗಿದ್ದವು. ಬಾವಿಯ ಗೋಡೆಗೆ ಅಂಟಿದಂತೆ ಒಂದು ವಿಶಾಲ ಲೋಹದ ಬಾಗಿಲು ಅವರನ್ನು ಅಡ್ಡಗಟ್ಟಿತ್ತು.

"ಓ.ಕೇ. ಪ್ರೊಫೆಸರ್. ತೆಗೆಯಿರಿ ಬಾಗಿಲನ್ನು" ನಾಗೇಶನ್ ಹೇಳಿದ.

ಭಾಸ್ಕರ ಬಾಗಿಲ ಚಿಲುಕವನ್ನು ಹುಡುಕ ತೊಡಗಿದ. ಐದು ನಿಮಿಷಗಳ ನಂತರ ಯಾವುದೂ ಕಾಣದೆ, "ಇದನ್ನು ತೆಗೆಯುವ ರಹಸ್ಯ ನನಗೆ ಗೊತ್ತಿಲ್ಲ" ಎಂದ.

"ನನ್ನ ಜೊತೆ ಆಟವಾಡಬೇಡಿ, ಪ್ರೊಫೆಸರ್" ಎನ್ನುತ್ತ ನಾಗೇಶನ್ ಪ್ರೊಫೆಸರ್ ತಲೆಗೆ ರಿವಾಲ್ವರ್ ಇಟ್ಟ. ಭಾಸ್ಕರ ಕಣ್ಣು ಮುಚ್ಚಿಕೊಂಡ. ಕೆಲ ಕ್ಷಣಗಳ ಮೌನದ ನಂತರ "ಶಿಟ್! ನಿಮ್ಮನ್ನು ಶೂಟ್ ಮಾಡಿದರೆ ಬಾಗಿಲನ್ನು ತೆಗೆಯುವವರು ಯಾರೂ ಇರುವುದಿಲ್ಲ. ಅದೇ ಈಕೆಯನ್ನು..." ಎನ್ನುತ್ತ ಉಜ್ವಲಾಳ ಕಡೆ ರಿವಾಲ್ವರ್ ತಿರುಗಿಸಿದ.

ಉಜ್ವಲಾಳ ಕಣ್ಣುಗಳಲ್ಲಿ ಭೀತಿ ತುಳುಕುತ್ತಿತ್ತು. ಅವಳನ್ನು ನೋಡಿ ಭಾಸ್ಕರ "ಈಸೀ, ಈಸೀ" ಎಂದು ಪುನಃ ಬಾಗಿಲ ಕಡೆ ತಿರುಗಿದ. ಬಾಗಿಲ ಚೌಕಟ್ಟಿನಲ್ಲಿ ಅಡಗಿದ್ದ ಗುಂಡಿಯೊಂದನ್ನು ಒತ್ತಿದಾಗ ಒಳಗಿನಿಂದ ಲೋಹವನ್ನು ಬಡಿದ ಶಬ್ದ ಬಂತು. ನಿಧಾನವಾಗಿ ಆ ಬಾಗಿಲುಗಳನ್ನು ತಳ್ಳಿದ. ಬಾಗಿಲ ಆಚೆ ಒಂದು ಮಧ್ಯಮಗಾತ್ರದ ಕೋಣೆಯಿತ್ತು. ಮಧ್ಯದಲ್ಲಿ ಒಂದೇ ಒಂದು ಪುಟ್ಟ ಕಲ್ಲಿನ ಆನೆ ಬಿಟ್ಟರೆ ಕೋಣೆಯಲ್ಲಿ ಬೇರೇನೂ ಇರಲಿಲ್ಲ.

"ಎಲ್ಲಿದೆ ನಿಧಿ?" ನಾಗೇಶನ್ ಕೇಳಿದ.

"ಇದೇ. ಇಷ್ಟೇ ನಿಧಿ"

"ಇದಕ್ಕೆ ಇಷ್ಟು ದೂರ ಬಂದೆವಾ?"

ಭಾಸ್ಕರ ಮಾತನಾಡಲಿಲ್ಲ. ಉಜ್ವಲಾ ಬಡಬಡಾಯಿಸ ತೊಡಗಿದಳು "ಏನಾದರೂ ಇರಲೇಬೇಕು, ಪ್ರೊಫೆಸರ್! ಮತ್ತೊಂದು ಕ್ಲೂ, ಅಥವಾ..."

"ಇಷ್ಟೇ, ಉಜ್ವಲಾ. ಇದೇ ಕೊನೆ, ಇನ್ನೇನೂ ಕ್ಲೂ ಇಲ್ಲ, ನಿಧಿ ಇನ್ನಿಲ್ಲ" ಭಾಸ್ಕರ ಸಹನೆ ಮೀರಿ ಹೇಳಿದ.

"ನನ್ನ ಜೊತೆ ಮತ್ತೆ ಆಟವಾಡುತ್ತಿದ್ದೀರ, ಪ್ರೊಫೆಸರ್?" ನಾಗೇಶನ್ ರೀವಾಲ್ವರ್ ಭಾಸ್ಕರನ ಕಡೆ ತೋರಿಸುತ್ತ, ಕೋಣೆಯಿಂದ ಹಿಂಜರಿಯಲಾರಂಭಿಸಿದ. ಭದ್ರ ಅವನ ಪಕ್ಕದಲ್ಲೇ ಹಿಂಜರಿಯುತ್ತಿದ್ದ. ಇಬ್ಬರೂ ಲೋಹದ ಬಾಗಿಲಾಚೆ ಹೋದಮೇಲೆ "ಭದ್ರ, ಬಾಗಿಲನ್ನು ಮುಚ್ಚು" ಎಂದ ನಾಗೇಶನ್.

"ನಮ್ಮನ್ನು ಇಲ್ಲಿ ಸಿಕ್ಕಿಸಿ ಹೋಗಬೇಡ. ಬಾಗಿಲನ್ನು ಒಳಗಿನಿಂದ ತೆಗೆಯಲಾಗೋದಿಲ್ಲ" ಎಂದಳು ಉಜ್ವಲಾ .

"ನಿಲ್ಲು, ನೀನು ಹೀಗೆ ಮಾಡೋ ಹಾಗಿಲ್ಲ" ಎಂದ ಭಾಸ್ಕರ.

"ಹಾಗೇ ಮಾಡುತ್ತೇನೆ-ಪ್ರೊಫೆಸರ್, ಮುಂದಿನ ಕ್ಲೂ ಹೇಳದಿದ್ದರೆ..."

"ನೀವುಗಳು ಹೋಗಿ, ನಮಗೂ...." ಉಜ್ವಲಾ ಮಾತನಾಡಲು ಹೊರಟಳು.

"ಮತ್ತೆ ಮಾತನಾಡಬೇಡ" ಅಕೆಯ ಕಡೆ ರಿವಾಲ್ವರ್ ತಿರುಗಿಸುತ್ತ ಹೇಳಿದ ನಾಗೇಶನ್. "ಪ್ರೊಫೆಸರ್?"

"ಆನೆ..." ಭಾಸ್ಕರ ಹೇಳ ಹೊರಟ.

"ಪ್ರೊಫೆಸರ್!" ಕಠಿಣ ಧ್ವನಿಯಲ್ಲಿ ಹೇಳಿದಳು ಉಜ್ವಲಾ. "ಹೇಳಬೇಡಿ".

"ಆ ಆನೆಯೇ ಮುಂದಿನ ಕ್ಲೂ. ಅದರ ಅರ್ಥ ನಿಧಿ ಆನೆ-ಲಾಯದಲ್ಲಿದೆಯೆಂದು" ಭಾಸ್ಕರ ಮುಂದುವರೆಸಿದ.

"ಥ್ಯಾಂಕ್ಸ್, ಪ್ರೊಫೆಸರ್. ಬಾಗಿಲು ಮುಚ್ಚು, ಭದ್ರ" ಎನ್ನುತ್ತ ನಾಗೇಶನ್ ತಿರುಗಿದ.

"ನಿಲ್ಲು! ನಮ್ಮನ್ನು ಇಲ್ಲಿ ಕೂಡಿಹಾಕಬೇಡ" ಉಜ್ವಲಾ ಕೂಗಿದಳು.

"ಯಾಕೆ?" ಮುಗುಳ್ನಗುತ್ತ ಕೇಳಿದ ನಾಗೇಶನ್

"ಪ್ರೊಫೆಸರ್ ಸುಳ್ಳು ಹೇಳಿದ್ದರೆ? ಅಥವ ಅಲ್ಲಿ ಮತ್ತೊಂದು ಕ್ಲೂ ಇದ್ದರೆ?"

"ಆಗ ನಿಮ್ಮನ್ನು ಎಲ್ಲಿ ಹಿಡಿಯಬೇಕೆಂದು ಗೊತ್ತು. ಗುಡ್-ಬೈ, ಪ್ರೊಫೆಸರ್" ಎನ್ನುತ್ತ ನಾಗೇಶನ್ ಮೆಟ್ಟಿಲನ್ನೇರ ತೊಡಗಿದ. ಭದ್ರ ಬಾಗಿಲನ್ನು ಮುಚ್ಚಿದ.

"ತೆಗಿ ಬಾಗಿಲು" ಉಜ್ವಲಾ ಅರಚಿದಳು. "ಪ್ರೊಫೆಸರ್, ನಾವಿನ್ನು ಇಲ್ಲೇ..." ಉದ್ವೇಗದಿಂದ ಕೂಗಾಡ ತೊಡಗಿದಳು.

"ಶಾಂತವಾಗು, ಉಜ್ವಲಾ. ಏನೂ ಆಗೋದಿಲ್ಲ. ಇಲ್ಲಿಂದ ಹೊರಗೆ ಹೋಗುತ್ತೇವೆ" ಭಾಸ್ಕರ ಸಾಂತ್ವನ ಹೇಳಿದ. "ನಾಗೇಶನ್‌ಗೆ ಕ್ಲೂ ಬೇಕಿತ್ತು ಕ್ಲೂ ಕೊಟ್ಟೆಯಷ್ಟೆ"

"ಸುಳ್ಳು ಕ್ಲೂ! ಅದು ಸುಳ್ಳೆಂದು ಗೊತ್ತಾಗಿ ನಾಗೇಶನ್ ಇಲ್ಲಿಗೆ ಹಿಂತಿರುಗಿದರೆ ನಾವಿನ್ನೂ ಇಲ್ಲೇ ಇರುತ್ತೇವೆ, ಆಗ ನಮ್ಮನ್ನು ಶೂಟ್ ಮಾಡುತ್ತಾನೆ" ಇನ್ನೂ ಉಜ್ವಲಾಳ ಆತಂಕ ಕಡಿಮೆಯಾಗಿರಲಿಲ್ಲ.

"ಇಲ್ಲ ಮರಿ. ನಾವು ಅವನ ಕೈಗೆ ಸಿಗೋದಿಲ್ಲ" ಭಾಸ್ಕರ ಕೋಣೆಯ ಸುತ್ತ ಓಡಾಡತೊಡಗಿದ್ದ. "ಇಲ್ಲಿಂದ ಹೊರಹೋಗಲು ಇನ್ನೊಂದು ದಾರಿ ಇದೆ"

"ಎಲ್ಲಿ?"

"ನಿಧಿ ಇರುವ ಕೋಣೆಯಿಂದ" ಎನ್ನುತ್ತ ಕೋಣೆಯ ಮಧ್ಯದಲ್ಲಿದ್ದ ಆನೆಯನ್ನು ತಿರುಗಿಸಿದ.

'ಭುಸ್'ಎಂದು ಗೋಡೆಯಾಚೆಯಿಂದ ಹೊಯ್ಗಾಳಿ ಹೊಡೆಯಿತು. ಗೋಡೆಯ ಒಂದು ಭಾಗ ಸರಿದುನಿಂತು, ಅದರಾಚೆ ಮತ್ತೊಂದು ಕೋಣೆ ಕಾಣಿಸುತ್ತಿತ್ತು.

ಭಾಸ್ಕರ ಪಂಜನ್ನು ಹಿಡಿದು ಆಚೆಯಿದ್ದ ಕೋಣೆಗೆ ದಾಟಿದ. ಉಜ್ವಲಾ ಅವನ ಹಿಂದೆಯೇ ಹೋದಳು. ಕೋಣೆಯಲ್ಲಿ ಕಾಣಿಸಿದ್ದು ಬರೀ ಮುರಿದ ಪೆಟಾರಿಗಳು, ತುಣುಕು ಹಗ್ಗಗಳು, ಒಡೆದ ಮಡಿಕೆಗಳು ಮತ್ತಿತರ ಅವಶೇಶಗಳು ಮಾತ್ರ.

ಭಾಸ್ಕರ ಸಂಪೂರ್ಣವಾಗಿ ಕುಗ್ಗಿ ಹೋದ. "ಇಲ್ಲ! ಖಾಲಿಯಾಗಿದೆ! ಯಾರೋ ನಮ್ಮ ಮೊದಲೇ ಇದನ್ನು ಕಂಡುಹಿಡಿದು ಖಾಲಿ ಮಾಡಿರಬೇಕು! ಛೆ! ನಿಧಿಯೂ ಇಲ್ಲ ಮಣ್ಣೂ ಇಲ್ಲ! ಎಲ್ಲ ನನ್ನ ಭ್ರಮೆ! ಒಳ್ಳೆ ಹುಚ್ಚನ ಸಾಹವಾಸ ಮಾಡಿದ್ದೀಯ, ಉಜ್ವಲಾ!"

"ಇಲ್ಲ ಪ್ರೊಫೆಸರ್! ಖಂಡಿತ ಇಲ್ಲ. ಈ ಕೋಣೆ ನೋಡಿ! ಇದರ ಅರ್ಥ ನಿಧಿ ಇದೆಯೆಂದು. ಇಲ್ಲಿಯವರೆಗು ಕ್ಲೂಗಳನ್ನು ಪತ್ತೆ ಮಾಡಿಕೊಂಡು, ಆ ನಿಧಿಯನ್ನು ಅಟ್ಟಿಸಿಕೊಂಡು ಬಂದಿದ್ದೇವೆ ಎಂದು. ಇಲ್ಲಿಲ್ಲದಿದ್ದರೆ ನಿಧಿ ಬೇರೆಲ್ಲೋ ಇರಬೇಕು. ಮತ್ತೆ ಹುಡುಕೋಣ" ಉಜ್ವಲಾ ಅವನಿಗೆ ಉತ್ತೇಜನ ನೀಡಿದಳು. ಸ್ವಲ್ಪ ಮೌನದ ನಂತರ "ಮತ್ತೊಂದು ದಾರಿ ಇದೆಯೆಂದಿದ್ದರಲ್ಲ, ಎಲ್ಲಿದೆ?" ವಿಚಾರಿಸಿದಳು.

"ಅದೇ ನನಗೂ ಅರ್ಥವಾಗುತ್ತಿಲ್ಲ! ಈ ಹೊಂಡ ತೆಗೆದ ಕೂಡಲೆ, ಇದನ್ನು ಕಟ್ಟಿದವರು ಹಿಂದಿನಿಂದ ಮತ್ತೊಂದು ಸುರಂಗ ಕೊರೆದಿರಬೇಕು-ಗಾಳಿಯಾಡಿಸಲು, ಜೊತೆಗೆ ನೆಲ-ಕುಸಿತವಾದರೆ ತಪ್ಪಿಸಿಕೊಳ್ಳಲು. ಆಗಲೇ ಆತ್ಮವಿಶ್ವಾಸ ಮೂಡಿ ಸುತ್ತಿಗೆಯಿಂದ ಗೋಡೆಯನ್ನು ಕುಟ್ಟುತ್ತ ಕೋಣೆಯ ಸುತ್ತ ಓಡಾಡಲಾರಂಭಿಸಿದ್ದ ಭಾಸ್ಕರ. ಗೋಡೆಯಲ್ಲಿ ಉಬ್ಬಿದ್ದ ಗುಬುಟೊಂದನ್ನು ಒತ್ತಿದಾಗ ನೆಲವೇ ಆಕಳಿಸಿ ಬಾಯಿ ಬಿಟ್ಟಂತೆ ಕಿಂಡಿಯೊಂದು ತೆರೆಯಿತು. ಅಗಲವಾಗಿದ್ದ ಮೆಟ್ಟಿಲುಗಳು ಕೆಳಗಿಳಿದು ಹೋಗುತ್ತಿದ್ದವು. ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡು ಭಾಸ್ಕರ, ಉಜ್ವಲಾ ಕೆಳಗಿಳಿಯಲು ಆರಂಭಿಸಿದರು. ಹಲವು ಮೆಟ್ಟಿಲು ಇಳಿದ ನಂತರ ನೆಲ ಮಟ್ಟವಾಗಿ ಒಂದು ಮೂಗಸಾಲೆಗೆ ಬಂದು ನಿಂತರು.

"ವಾವ್!"

"ಓಹ್!"

ಉಜ್ವಲಾ ಮತ್ತು ಭಾಸ್ಕರ ವಿಗ್ರಹಗಳು, ಪೆಟಾರಿಗಳು ಮತ್ತು ಗಡಿಗೆಗಳಿಂದ ತುಂಬಿದ್ದ ಕೋಣೆಯಲ್ಲಿ ನಿಂತಿದ್ದರು. ಮೂಗಸಾಲೆಯಿಂದ ಇನ್ನೂ ಕೆಳಗಿಳಿಯಲು ಕಲ್ಲಿನ ಮೆಟ್ಟಿಲುಗಳಿದ್ದವು. ಪಾತಿಯೊಂದು ಮೆಟ್ಟಿಲ ಜೊತೆಯೇ ಹೋಗುತ್ತಿತ್ತು. ಭಾಸ್ಕರ ಪಾತಿಯಲ್ಲಿ ಕೈಹಾಕಿ ಅದರೊಳಗಿದ್ದ ಪುಡಿಯನ್ನು ಮುಟ್ಟಿ ನೋಡಿ ಅದಕ್ಕೆ ತನ್ನ ಕೈಯಲ್ಲಿದ್ದ ಪಂಜಿನ ಬೆಂಕಿಯನ್ನು ತಾಗಿಸಿದ. ಪಾತಿಯುದ್ದಕ್ಕೂ ಬೆಂಕಿ ಹತ್ತಿಕೊಳ್ಳುತ್ತ, ಬೆಳಕು ಚೆಲ್ಲುತ್ತ ಹೋಯಿತು. ಕಣ್ಣಿಗೆ ಎಟಕುವಷ್ಟು ದೂರಕ್ಕೂ ಇನ್ನೂ ಹೆಚ್ಚಿನ ಬಂಗಾರ, ಬೆಳ್ಳಿ ಹಾಗು ಕಲ್ಲಿನ ವಿಗ್ರಹಗಳು, ಸಾವಿರಾರು ಚಿನ್ನದ ಆಭರಣಗಳು, ವಜ್ರ-ವೈಢೂರ್ಯಗಳು ತುಂಬಿದ್ದ ಪೆಟಾರಿಗಳು, ಇನ್ನೂ ಹೆಚ್ಚು ಚಿನ್ನದ ನಾಣ್ಯಗಳು ತುಂಬಿದ್ದ ಹೂಜಿಗಳು, ಸಾವಿರಾರು ತಾಳೆಗರಿಯ ಹಸ್ತ-ಪ್ರತಿಗಳು, ಇನ್ನೂ ಹೆಚ್ಚು ಹೇಳಲಾಗದ ನಾನಾರೀತಿಯ ಅತ್ಯಮೂಲ್ಯ ವಸ್ತುಗಳು ಪಾತಿಯಲ್ಲಿ ಉರಿಯುತ್ತಿದ್ದ ಬೆಂಕಿಯಲ್ಲಿ ಕಂಗೊಳಿಸುತ್ತಿದ್ದವು.

ಭಾಸ್ಕರ, ಉಜ್ವಲಾ, ಬಹಳ ಹೊತ್ತು ಮಾತನಾಡಲಾರದೆ ಈ ದೃಷ್ಯವನ್ನು ನೋಡುತ್ತ ನಿಂತರು. ಕೊನೆಗೊಮ್ಮೆ ಮೌನ ಮುರಿದಾಗ ಉಜ್ವಲಾಳ ಅಳುವಿನ ಶಬ್ದ ಕೇಳಿಬಂತು. ಅವಳೆಡೆ ನಡೆಯುತ್ತ ಭಾಸ್ಕರ ಪಿಸುಮಾತಿನಲ್ಲಿ ಕೇಳಿದ "ಉಜ್ವಲಾ, ಆರ್ ಯು ಓ.ಕೆ? ಹುಷಾರಾಗಿದ್ದೀಯ, ಮರಿ?"

ಬೆರಳು ತೋರಿಸುತ್ತ ಉಜ್ವಲಾ "ಅಲ್ಲಿ ನೋಡಿ! ಮೇಲೆ ಹೋಗಲು ಮೆಟ್ಟಿಲು!" ಎಂದಳು.

*****

"ಓ.ಕೆ. ಪ್ರೊಫೆಸರ್. ನನಗೇನು ಮಾಡಬಲ್ಲಿರಿ ನೀವು?" ಇನ್ಸ್‌ಪೆಕ್ಟರ್ ಮಹೇಶ್ವರ ಕೇಳುತ್ತಿದ್ದ.

ಉಜ್ವಲಾ ಹಾಗು ಭಾಸ್ಕರ ನಿಧಿಯ ಕೋಣೆಯಲ್ಲಿದ್ದ ಮೆಟ್ಟಿಲುಗಳಿಂದ ತಪ್ಪಿಸಿಕೊಂಡು, ಹೊರಬಂದಿದ್ದರು. ಅರಮನೆಯ ಕಳವಿನ ವಿಚಾರವಾಗಿ ನಾಗೇಶನ್ ಕಡೆಯವರನ್ನು ಹಿಂಬಾಲಿಸುತ್ತ ಹಂಪೆಗೆ ಬಂದಿದ್ದ ಇನ್ಸ್‌ಪೆಕ್ಟರ್ ಮಹೇಶ್ವರ ಹಂಪೆಯ ಪೋಲೀಸರೊಂದಿಗೆ ಕೂಡಿ ತನಿಖೆ ನಡೆಸುತ್ತಿದ್ದ. ಹಾಗಾಗಿ, ಭಾಸ್ಕರ ಹಂಪೆಯ ಪೋಲೀಸರನ್ನು ಸಂಪರ್ಕಿಸಿದಾಗ ಮಹೇಶ್ವರನ ಎದುರಾಗಿದ್ದರು.

"ಒಂದು ಹತ್ತು..ನೂರು ಕೋಟಿ ಲಂಚ?"

"ತಮಾಷೆ ಮಾಡುತ್ತಿದ್ದೀರ, ಪ್ರೊಫೆಸರ್? ನಿಮ್ಮ ನಿಧಿ ಬಗ್ಗೆ ನನಗೆ ಗೊತ್ತಾಗಿದೆ"

"ನೀವು ಅದರ ಮೇಲೆ ನಿಂತಿದ್ದೀರ, ಇನ್ಸ್‌ಪೆಕ್ಟರ್. ನಿಮ್ಮ ಕಾಲಿನ ಸುಮಾರು ನೂರು ಅಡಿ ಕೆಳಗಿದೆ. ಆ ನಿಧಿ ಯಾರೊಬ್ಬರ ಕೈಗೂ ಸಿಗಬಾರದು. ಅದಕ್ಕೇ ಅದನ್ನು ಪ್ರಾಚೀನ ಕಾಲದಿಂದಲೂ ಯಾರ ಕಣ್ಣಿಗೂ ಕಾಣದಂತೆ ಇರಿಸುತ್ತಿದ್ದರು. ಇದಕ್ಕೆ ಒಂದೇ ದಾರಿ"

"ಜನರಿಗೆ ಹಂಚುವುದು" ಇನ್ಸ್‌ಪೆಕ್ಟರ್ ಅಸಾಧಾರಣ ಜಾಣ್ಮೆಯಿಂದ ನುಡಿದ.

"ದೇಶಾದ್ಯಂತ ಮ್ಯೂಸಿಯಮ್‌ಗಳು, ಧರ್ಮ-ಕ್ಷೇತ್ರಗಳು, ವಿಶ್ವವಿದ್ಯಾಲಯಗಳಿಗೆ ಹಂಚಬೇಕು. ಬರೀ ಸಂಪತ್ತೊಂದೇ ಅಲ್ಲ ಅಲ್ಲಿ ನೂರಾರು-ಸಾವಿರಾರು ವರ್ಷಗಳ ಇತಿಹಾಸವೂ ಅಡಗಿದೆ"

"ಮತ್ತೇನು?"

"ಈ ನಿಧಿ ಹುಡುಕಿದ್ದಕ್ಕೆ ನಾನೊಬ್ಬನೇ ಅಲ್ಲ, ಉಜ್ವಲಾಳಿಗೂ ಮನ್ನಣೆ ಸಿಗಬೇಕು. ಓಹ್! ಆ ಅರಮನೆ ವಿಚಾರ-ಉಜ್ವಲಾಗು ಅದಕ್ಕು ಸಂಬಂಧವಿಲ್ಲ. ಅವಳ ಹೆಸರು ಆ ವಿಚಾರದಲ್ಲಿ ಎಲ್ಲೂ ಬರಬಾರದು"

"ಆಹಾ?"

"ನಾನೂ ಆ ಅರಮನೆ ವಿಚಾರದಲ್ಲಿ ಜೈಲಿಗೆ ಹೋಗದಿರಲು ಇಷ್ಟ ಪಡುತ್ತೇನೆ"

"ಯಾರಾದರೂ ಒಬ್ಬರು ಹೋಗಲೇಬೇಕಲ್ಲಾ?"

"ಹಂ...ಹಾಗಿದ್ದರೆ ಆನೆ-ಅಸ್ತಬಲದ ಕಡೆ ನಿಮ್ಮ ಸೈನ್ಯ ತಿರುಗಿಸಿದರೆ ಅಲ್ಲಿ ನಿಧಿ ಹುಡುಕುತ್ತಿರುವ ಗೂಂಡಾಗಳನ್ನು ಹಿಡಿದು ಜೈಲಿಗೆ ಹಾಕಬಹುದು" ಭಾಸ್ಕರ ಬಿಟ್ಟುಕೊಟ್ಟ.

*****

ಆರು ತಿಂಗಳು ಉರುಳಿದವು. ಒಂದು ದಿನ ವಿಶ್ವವಿದ್ಯಾಲಯದಲ್ಲಿ ಭಾಸ್ಕರ ತನ್ನ ಆಫೀಸಿನಲ್ಲಿ ಕುಳಿತಿದ್ದಾಗ ಅವನ ಮೇಜಿನಮೇಲೆ ಉಜ್ವಲಾ ಒಂದು ಪುಸ್ತಕವನ್ನು ತಂದಿಟ್ಟಳು. "ಸರ್, ಇದು ನನ್ನ ಪಿ.ಎಚ್.ಡಿ ಡಿಸರ್ಟೇಶನ್"

ಭಾಸ್ಕರ ಅದನ್ನು ಕೈಗೆತ್ತಿಕೊಂಡು ಅದರ ಶೀರ್ಷಿಕೆ ಓದಿದ: "ರಾಷ್ಟ್ರನಿಧಿ"

*****

Monday, January 15, 2007

ದ ದಶಾವತಾರ ಕೋಡ್



ದ ದಶಾವತಾರ ಕೋಡ್ (a la The da Vinci Code)2007 KKNC ಕಥಾಸ್ಪರ್ಧೆಯಲ್ಲಿ ಈ ಕತೆಗೆ ಮೊದಲ ಬಹುಮಾನ ಬಂದಿದೆ.
2007 KKNC ಸ್ವರ್ಣಸೇತು ಪುಸ್ತಕದಲ್ಲಿ ಈ ಕತೆ ಮೂಡಿ ಬಂದಿದೆ.

The Dashavatara Code
Language: Kannada

Category: Suspense-Thriller, Mystery

Abstract: This is a story based in part on Dan Brown's best seller The da Vinci Code.

Keywords: da vinci code, dashavatara, kannada, buddha, halayudha, balarama, fiction, thriller, buddhism, suspense


Disclaimer: This story has no resemblance to any person or organization past or present, nor does it make claims to historical accuracy , although many facts do indeed have a historical basis. This is a work of fiction, of course, based loosely on the bestseller/blockbuster The da Vinci Code. The plot, characters and situations have been modified beyond recognition.


ಪ್ರೊಫೆಸರ್ ನಾಗಾನಂದನಿಗೆ ಏನೂ ತೋಚುವಂತಿರಲಿಲ್ಲ. ಪಕ್ಕದಲ್ಲೊಬ್ಬ ವಿಚಿತ್ರ ಪೋಷಾಕು ಧರಿಸಿ, ತಲೆಗೆ ರಿವಾಲ್ವರ್ ಹಿಡಿದು ನಿಂತಿದ್ದರೆ ಯಾರಿಗೆ ತಾನೆ ಏನಾದರೂ ತೋಚೀಯಾತು?


ನಾಗಾನಂದ ಚೆನ್ನೈ ವಿಶ್ವವಿದ್ಯಾಲಯದಲ್ಲಿ ಧರ್ಮ-ಇತಿಹಾಸ ವಿಭಾಗದಲ್ಲೊಬ್ಬ ಪ್ರೊಫೆಸರ್. ಸ್ವಲ್ಪವೇ ಹೊತ್ತಿನ ಮುಂಚೆ ಎಂದಿನಂತೆ ಕಾಲೇಜಿನಿಂದ ಹಿಂತಿರುಗಿ ಕಾಫಿ ಕುಡಿಯುತ್ತ ಕುಳಿತಿದ್ದಾಗ ಬಾಗಿಲ ಘಂಟೆ ಬಾರಿಸಿತು. ತೆರೆದು ನೋಡಿದರೆ ರಕ್ತ-ಕೆಂಪು ವರ್ಣದ ಫಾದ್ರಿ ನಿಲುವಂಗಿಯಂತಹ ವಸ್ತ್ರ ಧರಿಸಿದ್ದ ವ್ಯಕ್ತಿ. ಬೆರಳಲ್ಲಿ ಕಮಲಹೂವಿನಾಕಾರದ ವಿಚಿತ್ರ ಉಂಗುರ. ಮಿಡಿಯುವುದರೊಳಗೆ ಆ ವ್ಯಕ್ತಿ ರಿವಾಲ್ವರ್ ತೋರಿಸಿ ಮನೆಯೊಳಗೆ ನುಗ್ಗಿದ್ದ.


ನಾಗಾನಂದ ಅವಿವಾಹಿತ -ಮನೆಯಲ್ಲಿ ಒಬ್ಬನೇ, ಹಾಗಾಗಿ ಯಾರೂ ಅವನ ಸಹಾಯಕ್ಕೆ ಇರಲಿಲ್ಲ. ಈಗ ಆ ಭಿಕ್ಕು "ನೀನು ಒಗ್ಗೂಡಿಸಿದ ಪುರಾವೆಗಳು ಯಾವುವು ಹೇಳು, ಪ್ರೊಫೆಸರ್; ಇಲ್ಲವಾದರೆ.." ಎಂದು ಬೆದರಿಸಿದ. ಆ ಭಿಕ್ಕುವಿನ ವೇಷ-ಭೂಷಣ ಕಂಡ ನಾಗಾನಂದನಿಗೆ ಆತ ಕೇಳುತ್ತಿರುವುದೇನೆಂದು ಬಿಡಿಸಿ ಹೇಳುವ ಅವಶ್ಯಕೆತೆ ಇರಲಿಲ್ಲ.


"ನೀವುಗಳು ಹೇಳಿದಂತೆ ಕೇಳಿಕೊಂಡು ಬಿದ್ದಿದ್ದೇನಲ್ಲ. ನಿಮಗಿನ್ನೇನು ತೊಂದರೆ? ಆ ಪುರಾವೆಗಳನ್ನಿಟ್ಟುಕೊಂಡು ಏನು ಮಾಡುತ್ತೀರ? ನನ್ನನ್ನು ಬಿಟ್ಟುಬಿಡಿಯೆಂದು ಪರಿಪರಿಯಾಗಿ ಬೇಡಿಕೊಂಡರೂ ಬೆನ್ನು ಹತ್ತಿದ ಬೇತಾಳದಂತೆ ನನ್ನನ್ನೇಕೆ ಕಾಡುತ್ತಿರುತ್ತೀರಿ?" ನಾಗಾನಂದನ ಧ್ವನಿಯಲ್ಲಿ ಅವನ ಕೋಪ, ಕಾರ್ಪಣ್ಯ ಬಿಂಬಿಸುತ್ತಿದ್ದವು.


"ನಿನ್ನ ಪುರಾವೆಗಳ ಮೂಲಗಳನ್ನೇ ನಾಶ ಮಾಡಿದರೆ ಉಸಿರೂ ಇರುವುದಿಲ್ಲ, ಕೊಳಲೂ ನುಡಿಸಲಾಗುವುದಿಲ್ಲ" ಹಂಗಿಸುವ ಧ್ವನಿಯಲ್ಲಿ ಭಿಕ್ಕು ಹೇಳಿದ. "ನಮ್ಮ ನಿಲುಕು ಎಷ್ಟರ ಮಟ್ಟಿಗಿದೆ ನಿನಗೆ ಗೊತ್ತೇ ಇದೆ, ಪ್ರೊಫೆಸರ್. ನೀನು ಪ್ರೂಫ್‌ಗಳು ಯಾವುವೆಂದು ಹೇಳಿದರೆ ಸಾಕು"


ನಾಗಾನಂದನಿಗೆ ತನ್ನ ಬಳಿ ಇದ್ದ ಮಾಹಿತಿ ಆ ಭಿಕ್ಕುವಿನ ಕಡೆಯವರಿಗೆ ನೇತುಹಾಕಿದ್ದ ಕತ್ತಿಯಂತೆ ಎಂದು ತಿಳಿದಿತ್ತು. ಆ ಮಾಹಿತಿ ಈ ಭಿಕ್ಕುವಿನ ಕೈಸೇರಿ ಮೂಲಗಳ ನಾಶನವಾದರೆ, ತನಗೆ ಉಳಿಗಾಲವಿಲ್ಲವೆಂಬುದೂ ಅರಿವಾಯಿತು. ಮನದಲ್ಲೇ ಧೃಡ ನಿರ್ಧಾರಕ್ಕೆ ಬಂದು ನಡುಗುವ ಮರ್ಮರ ಧ್ವನಿಯಲ್ಲಿ "ಹೂಂ, ಸರಿ, ಅಲ್ಲಿ ನನ್ನ ಕಂಪ್ಯೂಟರ್ ಟೇಬಲ್ ನಲ್ಲಿರುವ ಡ್ರಾನಲ್ಲಿ ಪಟ್ಟಿ ಇದೆ" ಎಂದ. ಡ್ರಾ ಒಳಗಿದ್ದದ್ದು ನಾಗಾನಂದನ ತಲಗೆ ತಾನು ಭಿಕ್ಕುವಿನ ವಿರುದ್ಧ ಉಪಯೋಗಿಸಲು ಯೋಗ್ಯವೆಂದು ಹೊಳೆದ ಏಕೈಕ ಆಯುಧ -ತನ್ನ ಪಿಸ್ತೂಲು.


"ನಿಧಾನವಾಗಿ ತೆಗೆದು ನನ್ನ ಕೈಗೆ ಕೊಡು. ಏನಾದರು ಹೆಚ್ಚು-ಕಡಿಮೆ ಪ್ರಯತ್ನಿಸಿದರೆ..." ಭಿಕ್ಕು ಬೆದರಿಕೆ ಹಾಕಿದಾಗ ನಾಗಾನಂದ ಟೇಬಲ್ ಕಡೆಗೆ ನಿಧಾನವಾಗಿ ಚಲಿಸ ತೊಡಗಿದ.


ನಾಗಾನಂದ ಡ್ರಾ ಒಳಗಿದ್ದ ಬಂದೂಕು ಹೊರತೆಗೆದು ಭಿಕ್ಕುವಿನಮೇಲೆ ಮರುಪ್ರಹಾರ ನಡೆಸುವ ಪ್ರಯತ್ನ ಮಾಡಿದಾಗ ಅಚ್ಚರಿಗೊಂಡ ಭಿಕ್ಕುವಿನ ಕೈಯಲ್ಲಿದ್ದ ರಿವಾಲ್ವರ್‌ನಿಂದ ಗುಂಡು ಚಲಿಸಿತು. ಗುಂಡು ನೇರವಾಗಿ ನಾಗಾನಂದನ ಎದೆ ತಾಕಿದಾಗ ಕೆಂಪಗೆ ಕಾಯಿಸಿದ ಕಬ್ಬಿಣದ ಸಲಾಕೆಯಿಂದಿರಿದಂತಾಗಿ ನಾಗಾನಂದ ನೆಲಕ್ಕುರುಳಿದ. ಹತನಾಗಿ ಬಿದ್ದ ತನ್ನ ಬಲಿಪಶುವನ್ನು ಕಂಡ ಭಿಕ್ಕು ಸಂದಿಗ್ಧನಾಗಿ ಅಲ್ಲಿನಿಂದ ಪರಾರಿಯಾದ.


ಕೆಲ ನಿಮಿಷಗಳ ನಂತರ ನಾಗಾನಂದನಿಗೆ ಪುನಃ ಎಚ್ಚರವಾಯಿತು. 'ನಾನಿನ್ನೂ ಬದುಕಿದ್ದೇನೆಯೇ?' ಎಂದು ಯೋಚಿಸುತ್ತ, ಏದುಸಿರು ಏಳೆಯುತ್ತ ಮೇಲೆದ್ದ. ಆದರೆ ಅವನಿಗೆ ತಾನಿನ್ನು ಉಳಿಯುವುದಿಲ್ಲವೆಂಬುದು ಖಚಿತವಾಗಿತ್ತು. ಬಹಳಷ್ಟು ಕೆಲಸ ಬಾಕಿಯಿತ್ತು. ಮೊದಲಿಗೆ ಕಂಪ್ಯೂಟರ್ ಮುಂದೆ ಕುಳಿತು ಕೇಬೋರ್ಡಿನ ಮೇಲೆ ಏನೋ ಟೈಪ್ ಮಾಡಿದ. ನಂತರ ಹೊರಗಿನ ಕೋಣೆಗೆ ಹೋಗಿ ತನ್ನ ಮೇಜಿನ ಮೇಲಿದ್ದ ಪ್ಯಾಡಿನ ಮೇಲೆ ಬರೆಯಲಾರಂಭಿಸಿದ.



*****



"ಕಿಳಗಿಳಗಿಳಗಿಳ" ದಿನಕರನ ಮೋಬೈಲ್ ಕರೆ ಕೊಟ್ಟಿತು.


ದಿನಕರ ಅಮೇರಿಕಾದಲ್ಲಿ ವಾಸವಾಗಿದ್ದವ. ಮೂರು ದಿನಗಳ ಹಿಂದೆ ಭಾರತಕ್ಕೆ ಬಂದಿದ್ದ. ಇಂದು ಬೆಳಗ್ಗೆ ಚೆನ್ನೈಗೆ ಬಂದು ಅಮೇರಿಕನ್ ಎಂಬಸಿಯಲ್ಲಿ ತನ್ನ ಕೆಲಸ ಮುಗಿಸಿಕೊಂಡಿದ್ದ. ಸ್ವಲ್ಪವೇ ಹೊತ್ತಿನಲ್ಲಿ ತನ್ನ ಹಳೆಯ ಸ್ನೇಹಿತ ನಾಗಾನಂದನ ಮನೆಗೆ ಹೋಗುವುದಿತ್ತು. ನಾಗಾನಂದನನ್ನು ಕಂಡು ಹಲವಾರು ವರ್ಷಗಳಾಗಿದ್ದವು. ಸಧ್ಯಕ್ಕೆ ರೆಸ್ಟೋರಾಂಟ್‌ನಲ್ಲಿ ತಿಂಡಿ ಮುಗಿಸಿ ಕಾಫಿ ಕುಡಿಯುತ್ತ ಕುಳಿತಿದ್ದ. ಫೋನ್ ಮೇಲೆ ಕಾಲರ್ ಐ.ಡಿ ನೋಡಿ ನಾಗಾನಂದನ ಮನೆ ಎಂದರಿವಾಯಿತು.


"ಹಲೋ..." ಫೋನ್ ಕೈಗೆತ್ತಿಕೊಂಡು ಮಾತನಾಡಿದ.


"ಮಿ. ದಿನಕರ್?" ನಾಗಾನಂದನ ಧ್ವನಿಯಲ್ಲ ಯಾರೋ ಬೇರೆ.


"ಹೌದು. ಯಾರು ಮಾತನಾಡುತ್ತಿರುವುದು?"


"ನಾನು ಇನ್ಸ್‌ಪೆಕ್ಟರ್ ಬ್ರಹ್ಮಾವರ್. ಪ್ರೊಫೆಸರ್ ನಾಗಾನಂದ್ ಮನೆಯಿಂದ. ನೀವು ಇಂದು ಪ್ರೊಫೆಸರ್ ಜೊತೆ ಭೇಟಿ ಮಾಡುವುದಿತ್ತಲ್ಲವೇ?"


"ಹೌದು. ಆ..."


"ತಕ್ಷಣ ಹೊರಟು ನಾಗಾನಂದ್ ಮನೆಗೆ ಬನ್ನಿ" ದಿನಕರನಿಗೆ ಮಾತನಾಡಲು ಅವಕಾಶ ಕೊಡದೆ ಫೋನಿನಿಂದ ಧ್ವನಿ ಬಂತು.


"ನೀ.." ಎನ್ನುವಷ್ಟರಲ್ಲಿ ಫೋನ್ ಲೈನ್ ಕತ್ತರಿಸಿ ಹೋಗಿತ್ತು. ಫೋನ್ ನಾಗಾನಂದನ ಮನೆಯಿಂದಲೇ ಬಂದಿತ್ತೆಂದು ಕಾಲರ್ ಐ.ಡಿ. ಇಂದ ಖಾತ್ರಿಯಾಗಿತ್ತು. ಹೇಗಿದ್ದರೂ ಹೋಗಲೇ ಬೇಕೆಂದು ಯೋಚಿಸಿ, ದಿನಕರ ಆಟೋರಿಕ್ಷಾ ಹಿಡಿದು ನಾಗಾನಂದನ ಮನೆಗೆ ಬಂದಿಳಿದ.


ಬಾಗಿಲಲ್ಲೇ ಇನ್ಸ್‌ಪೆಕ್ಟರ್ ಬ್ರಹ್ಮಾವರ್ ಕಾಯುತ್ತಿದ್ದ. ಗೇಟಿನಲ್ಲಿ ಕಾನ್ಸ್‌ಟೇಬಲ್ ಒಬ್ಬ ಕಾವಲು ನಿಂತಿದ್ದ. "ಮಿ. ದಿನಕರ್, ಪ್ರೊ. ನಾಗಾನಂದ್ ಮೃತರಾಗಿದ್ದಾರೆ" ಪೀಠಿಕೆ ಇಲ್ಲದೆ ಹೇಳಿದ. "ಒಳಗೆ ಬನ್ನಿ".


ತನ್ನ ಮಿತ್ರ ಇನ್ನಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳುವುದರಲ್ಲಿ ಬ್ರಹ್ಮಾವರ್ ಜೊತೆ ಹೊರಗಿನ ಕೋಣೆಯಿಂದ ಹಾಯ್ದು ಒಳಗಿನ ಕೋಣೆಗೆ ತಲುಪಿದ್ದ. ಅಲ್ಲಿ ಒಂದು ವಿಚಿತ್ರ ದೃಷ್ಯ ಕಾದಿತ್ತು. ಕೋಣೆಯೊಳಗೊಂದು ಮರದ ನೇಗಿಲಿತ್ತು. ನೇಗಿಲಿಗೆ ಎರಡು ಬೆಳ್ಟ್‌ಗಳಿಂದ ಭಿಗಿಯಾಗಿ ಕಟ್ಟಿಕೊಂಡು ನೇಗಿಲು ಹೊತ್ತ ರೈತನಂತೆ ನೆಟ್ಟಗೆ ನಿಂತ ಶವ. ಕಣ್ಣುಗಳು ತೆರೆದೇ ಇದ್ದವು. ದಿನಕರ ಶವವನ್ನು ನಾಗಾನಂದನೇ ಎಂದು ಗುರುತಿಸಿದ.


"ಇದು ಕೊಲೆಗಾರನ ಕೆಲಸವಲ್ಲ" ಇನ್ಸ್‌ಪೆಕ್ಟರ್ ಹೇಳತೊಡಗಿದ. "ಬಾಗಿಲು ಒಳಗಿನಿಂದ ಬೀಗ ಹಾಕಿತ್ತು. ಗುಂಡು ಹಾರಿಸಿದ್ದು ಹೊರಗಿನ ಕೋಣೆಯಲ್ಲಿ -ಗೋಡೆಯ ಮೇಲೆ ರಕ್ತ ಚೆಲ್ಲಿರುವುದು ನೋಡಿದರೆ ತಿಳಿಯುತ್ತದೆ. ಗುಂಡು ತಿಂದ ನಂತರ ಇಲ್ಲಿ ಒಳಗೆ ಬಂದು ಕಂಪ್ಯೂಟರ್ ಮೇಲೆ ಕೆಲಸ ಮಾಡಿದ್ದಾರೆ -ಕೀಬೋರ್ಡ್ ಮೇಲೆ ರಕ್ತದ ಬೆರಳಚ್ಚುಗಳಿವೆ. ಹೊರಗಿನ ಕೋಣೆಯಲ್ಲಿ ತಮ್ಮೆ ಕೊನೆ ಸಂದೇಶವನ್ನೂ ತಮ್ಮ ಕೈಬರಹದಲ್ಲೇ ಬರೆದಿದ್ದಾರೆ -ಆ ಹಾಳೆ ಹಾಗು ಪೆನ್ ಮೇಲೂ ರಕ್ತದ ಬೆರಳಚ್ಚುಗಳಿವೆ. ನಂತರ ಬಂದು ಈರೀತಿ ನೇಗಿಲಿಗೆ ತಮ್ಮನ್ನೇ ತಾವು ಕಟ್ಟಿಕೊಂಡಿದ್ದಾರೆ. ನೀವು ನಾಗಾನಂದರನ್ನು ಭೇಟಿ ಮಾಡಲು ಬರುವವರಿದ್ದಿರಿ ಎಂದು ಅವರ ಡೈರಿಯಿಂದ ತಿಳಿಯಿತು, ಅಲ್ಲೇ ನಿಮ್ಮ ಫೋನ್ ನಂಬರ್ ಹಾಗು ಅಡ್ರಸ್ ಸಿಕ್ಕಿದ್ದು" ದಿನಕರನಿಗೆ ಯೋಚಿಸುವ ಸಮಯ ಕೊಡದೆ ಹೇಳಿದ ಬ್ರಹ್ಮಾವರ್. "ಇದರ ಅರ್ಥ ಏನೆಂದು ತಿಳಿದಿದೆಯೇ?" ಎಂದು ಮುಂದುವರಿಸಿದ.


ಗರ್ಭಿತ ಮೌನ ಆವರಿಸಿತು. ಭ್ರಾಂತಿಯಿಂದ ತಲೆಯಾಡಿಸುತ್ತ ದಿನಕರ ಇನ್ಸ್‌ಪೆಕ್ಟರ್ ಕಡೆ ನೋಡಿದ.


ಇನ್ಸ್‌ಪೆಕ್ಟರ್ ಹೊರಗಿನ ಕೋಣೆಗೆ ಹೋಗುತ್ತ "ದಿಸ್ ವೇ. ನಾಗಾನಂದರ ಕೊನೆ ಸಂದೇಶ ನೋಡುವಿರಂತೆ" ಎಂದ


ಭ್ರಮಿಷ್ಟನಂತೆ ಮಾತಾನಾಡದೆ ದಿನಕರ ಇನ್ಸ್‌ಪೆಕ್ಟರ್ ಹಿಂದೆ ನಡೆದ. ಟೇಬಲ್ ಮೇಲೆ ಒಂದು ಸ್ಕ್ರಾಚ್‌ಪ್ಯಾಡ್ ಇತ್ತು. ಪ್ಯಾಡಿನ ಮೇಲುಭಾಗ ಪುಸ್ತಕವೊಂದರಿಂದ ಮುಚ್ಚಿತ್ತು. ರಕ್ತದ ಕಲೆಗಳ ಮಧ್ಯೆ ದಿನಕರ ಓದಿದ:


BXL.234.102W

ಅರಮನೆಯಲ್ಲಿ ಶಾರದೆಯ ಪೀಠ

ಪೀಠದಲ್ಲಿ ಜ್ಞಾನ-ಬೊಕ್ಕಸ

ಬೊಕ್ಕಸದಲ್ಲಿ ದಹನ ವಾಣಿ


204.WB.X002

ಭದ್ರಕಾಳಿಯ ತವರೂರು

ತವರೂರಿನಲ್ಲಿ ವರ್ತಮಾನ-ಕೇಂದ್ರ

ಕೇಂದ್ರದಲ್ಲಿ ವೃಷಭನ ವೃತ್ತಾಂತ


ತಬ್ಬಿಬ್ಬಾದ ಮುಖಭಾವ ತೋರುತ್ತ ಪ್ಯಾಡ್ ಮೇಲಿದ್ದ ಪುಸ್ತಕ ಸರಿಸಲು ಕೈಚಾಚಿದ.


"ನೋ ಮಿ. ದಿನಕರ್. ಕ್ರೈಂ ಸೀನ್‌ನಲ್ಲಿ ಏನೂ ಬದಲಾಯಿಸುವಹಾಗಿಲ್ಲ" ಬ್ರಹ್ಮಾವರ್ ಹೇಳಿದ. "ಸಾಯುತ್ತಿರುವ ಮನುಷ್ಯ ಯಾವ ವಿಚಾರ ಕುರಿತು ಬರೆಯುತ್ತಿದ್ದಿರಬಹುದು?"


"ನಾ...ಊ... ತನ್ನ ಕೊಲೆಗಾರನ ಹೆಸರು ಹೇಳುವ ಪ್ರಯತ್ನ ಮಾಡುತ್ತಿರಬಹುದು... ಇಲ್ಲವೇ..." ತಡವರಿಸಿದ ದಿನಕರ.


"ಎಕ್ಸಾಕ್ಟ್‌ಲಿ, ಮಿ. ದಿನಕರ್, ಎಕ್ಸಾಕ್ಟ್‌ಲಿ. ಈಗ ಪ್ಯಾಡ್ ಮೇಲಿರುವ ಪುಸ್ತಕವನ್ನು ತೆಗೆಯುವೆ ನೋಡಿ" ಎಂದು ಪ್ಯಾಡಿನ ಮೇಲುಭಾಗವನ್ನು ಮುಚ್ಚಿದ್ದ ಪುಸ್ತಕವನ್ನು ಇನ್ಸ್‌ಪೆಕ್ಟರ್ ಕೈಗೆತ್ತಿಕೊಂಡ.


ದಿನಕರನ ಹೊಟ್ಟೆ ಪಾತಾಳಕ್ಕಿಳಿಯಿತು. ನಾಗಾನಂದ ಬರೆದಿದ್ದ ಮೊದಲ ಸಾಲಿನಲ್ಲಿ ದಿನಕರನ ಹೆಸರಿತ್ತು. ಇದರ ಅರ್ಥ ದಿನಕರನ ಮನಸ್ಸಿಗೆ ಒಸರಿಸುವ ಮುಂಚೆ ಬ್ರಹ್ಮಾವರ್ "ಮಿ. ದಿನಕರ್, ಪ್ರೊಫೆಸರ್ ನಾಗಾನಂದ್‌ಅವರ ಕೊಲೆ ಆಪಾದನೆ ಮೇಲೆ ನಿಮ್ಮನ್ನು ಅರೆಸ್ಟ್ ಮಾಡುತ್ತಿದ್ದೇನೆ. ಓಡುವ ಪ್ರಯತ್ನ ಮಾಡಬೇಡಿ, ಹ್ಯಾಂಡ್‌ಕಫ್ ತರುತ್ತೇನೆ" ಎನ್ನುತ್ತ ಒಳಗಿನ ಕೋಣೆಗೆ ಹೋದ.


ಆ ಕ್ಷಣಕ್ಕೆ ಸರಿಯಾಗಿ ತರುಣಿಯೊಬ್ಬಳು "ನಾನು ಚೆನ್ನೈ-ಹೆರಾಳ್ಡ್ ರಿಪೋರ್ಟರ್. ಏನೋ ಇನ್ಸಿಡೆಂಟ್ ನಡೆದಿದೆಯೆಂದು ನಮಗೆ ಫೋನ್ ಬಂದಿತ್ತು. ಈ ಅಡ್ರಸ್ ಕೊಡಲಾಗಿತ್ತು. ನೋಡಿ ಹೋಗೋಣವೆಂದು ಬಂದೆ" ಎನ್ನುತ್ತ ಬಾಗಿಲನ್ನು ಹಾಯ್ದು ಹೊರಗಿನ ಕೋಣೆಗೆ ಬಂದಳು. ಕತ್ತಿಗೆ ತನ್ನ ಫೋಟೋ ಹೊಂದಿದ್ದ ಚೆನ್ನೈ-ಹೆರಾಳ್ಡ್‌ನ ಬ್ಯಾಡ್ಜ್ ಒಂದನ್ನು ನೇತುಹಾಕಿಕೊಂಡಿದ್ದಳು. ಅದು ಅವಳ ಹೆಸರು ಪೂಜಾ ಎಂದು ಸಾರುತ್ತಿತ್ತು. ಕೈಬೆರಳಲ್ಲಿ ಬೀಗದ-ಕೈಯೊಂದನ್ನು ಸಿಕ್ಕಿಸಿಕೊಂಡಿದ್ದಳು.


ಟೇಬಲ್ ಕಡೆ ಹೊರಟಿದ್ದ ಬ್ರಹ್ಮಾವರ್ ತಿರುಗಿ ನೋಡಿದ. ಅವನ ಮುಖದಲ್ಲಿ ಸಿಟ್ಟು ಖನಗುತ್ತಿತ್ತು. ಮುಖ ಗಂಟು ಹಾಕಿ "ನೀನ್... ನೀವು ಒಳಗೆ ಹೇಗೆ ಬಂದಿರಿ. ಹೊರಗಿದ್ದ ಕಾನ್ಸ್‌ಟೇಬಲ್ ನಿಮ್ಮನ್ನು ತಡೆಯಲಿಲ್ಲವೇ?" ಎಂದು ರೇಗಿದ.


"ಕಾನ್ಸ್‌ಟೇಬಲ್? ಮೂಲೆ ಪೆಟ್ಟಿಗೆ ಅಂಗಡಿಯಲ್ಲಿ ಯಾರೋ ಒಬ್ಬ ಬೀಡಿ ಸೇದುತ್ತಿದ್ದ, ಅವನೇ ಇರಬೇಕು -ತಡೆಯಲಿಲ್ಲ" ಹಗುರವಾಗಿ ಹೇಳಿದಳು. ಅವಳು ಇನ್ಸ್‌ಪೆಕ್ಟರ್ ಕಡೆ ತಿರುಗಿದ್ದರಿಂದ ದಿನಕರನಿಗೆ ಬೆನ್ನು ಕೊಟ್ಟು ನಿಂತಿದ್ದಳು.


ಬ್ರಹ್ಮಾವರ್ ಪುನಃ ಟೇಬಲ್ ಕಡೆ ತಿರುಗಿ ಹೊರಟಾಗ ದಿನಕರ ಆತುರದಲ್ಲಿ ತನಗೆ ತೋರಿದ ಏಕೈಕ ಮಾರ್ಗವನ್ನಪ್ಪಿದ. ಥಟ್ಟನೆ ಓಡಿ ಎರಡು ಕೋಣೆಗಳ ಮಧ್ಯೆ ಇದ್ದ ಬಾಗಿಲನ್ನು ಜೋರಾಗಿ ಬಡಿದು ಬೋಲ್ಟ್ ಹಾಕಿದ. ಪೂಜಾ ತಿರುಗುವಷ್ಟರಲ್ಲಿ ಎರಡು ಬೆರಳನ್ನು ಅವಳ ಬೆನ್ನಿಗೆ ತಿವಿದು "ನನ್ನ ಕೈಯಲ್ಲಿ ಗನ್ ಇದೆ. ನಡಿ ಹೋಗುವ. ನಿನ್ನ ಬಳಿ ಏನೋ ವೆಹಿಕಲ್ ಇದೆ ಅಲ್ಲವೇ?" ಎನ್ನುತ್ತ ನಾಗಾನಂದನ ಅಂತಿಮ ಸಂದೇಶವಿದ್ದ ಹಾಳೆ ಹರಿದು ಜೇಬಿನಲ್ಲಿರಿಸಿಕೊಂಡ.


ಆಕೆ 'ಹೂಂ' ಎಂದು ತಲೆಯಾಡಿಸಿದಳು. "ಹಿಂದೆ ತಿರುಗಬೇಡ. ನಾನು ಹೇಳಿದಂತೆ ಕೇಳಿದರೆ ನಿನಗೇನು ತೊಂದರೆಯಾಗುವುದಿಲ್ಲ" ಎಂದ. ಇಷ್ಟು ಹೊತ್ತಿಗೆ ಇನ್ಸ್‌ಪೆಕ್ಟರ್ ಬಾಗಿಲು ಬಡಿಯಲಾರಂಭಿಸಿದ್ದ. ಮನೆಯ ಹೊರಬಿದ್ದು ಪೂಜಾಳ ಟೂವೀಲರ್ ಹತ್ತಿ ಹಿಂದೆ ಸವಾರಿ ಮಾಡುತ್ತ ದಿನಕರ ಕೊಲೆಯ ರಂಗದಿಂದ ಪರಾರಿಯಾದ.


ಹಿಂದೆ ಕೂತು ಸ್ವಗತವೆಂಬಂತೆ ಮಾತನಾಡುತ್ತ ತಾನು ಬಿದ್ದಿದ್ದ ಹಳ್ಳದ ಆಳವನ್ನು ಅಳೆಯಲಾರಂಭಿಸುತ್ತಿದ್ದ ದಿನಕರನ ಮಾತುಗಳು ವಾಹನ ಚಲಿಸುತ್ತಿದ್ದ ಪೂಜಾಳ ಕಿವಿಗೂ ಬಿದ್ದವು. ಕೆಲವೇ ಕ್ಷಣಗಳಲ್ಲಿ ಅವಳಿಗೆ ಪರಿಸ್ಥಿತಿಯ ಅರಿವಾಯಿತು. ತನ್ನ ಸ್ವಂತ ಲೋಕದಲ್ಲಿ ಕಳೆದು ಹೋಗಿದ್ದ ದಿನಕರನನ್ನು ಹಿಂದೆ ತಿರುಗಿ ನೋಡಿದಾಗ ಆತನ ಕೈಯಲ್ಲಿ ಗನ್ ಇಲ್ಲವೆಂಬುದು ಅರ್ಥವಾಯಿತು. ವಾಹನ ನಿಲ್ಲಿಸಿ, ಕೆಳಗಿಳಿದು ಧೈರ್ಯವಾಗಿ ದಿನಕರನನ್ನೆದುರಿಸಿ ನಿಂತಳು.


"ಗನ್..." ಕೈ ನೋಡಿಕೊಳ್ಳುತ್ತ ದಿನಕರ ಗೊಣಗಿದ.


"ನಿಮ್ಮ ಬಳಿ ಇಲ್ಲವೆಂದು ತಿಳಿದಿದೆ. ನೀವು ಕೊಲೆಗಾರರಲ್ಲವೆಂಬುದೂ ನನಗೆ ಅರಿವಾಗಿದೆ. ಆದರೆ ಪೋಲೀಸರು ಇದನ್ನು ಬೇರೆ ರೀತಿ ನೋಡುತ್ತಾರೆ. ನೀವೊಬ್ಬರೇ ಅಲ್ಲ ನಿಮ್ಮನ್ನು ಪರಾರಿ ಮಾಡಿದ ನಾನೂ ಕೂಡ ಮರ್ಡರ್ ಸಸ್ಪೆಕ್ಟ್" ಪರಿಸ್ಥಿತಿಯಲ್ಲಿ 'ಎಕ್ಸ್‌ಕ್ಲೂಸಿವ್ ಸ್ಟೋರಿ'ಒಂದನ್ನು ಕಾಣುತ್ತಿದ್ದ ರಿಪೋರ್ಟರ್ ಪೂಜಾ ಬುರುಡೆ ಬಿಟ್ಟಳು. "ಬೈ ದ ವೇ, ನೀವು?"


"ಓಹ್! ದಿನಕರ ಶಾಸ್ತ್ರಿ. ಡಾಕ್ಟರ್ ದಿನಕರ ಶಾಸ್ತ್ರಿ" ಎನ್ನುತ್ತ ಆಕೆಯ ಕೈ ಕುಲುಕಿದ.


ದಿನಕರ ಹೊಸ ಮಾಹಿತಿಯನ್ನು ತಲೆಯಲ್ಲಿ ಮೆಲುಕು ಹಾಕುವುದರೊಳಗೆ ಪುನಃ "ಮುಂದೆ? ಏನು ಮಾಡುವುದು?"


"ಗೊತ್ತಿಲ್ಲ! ಜೊತೆಗೆ ನನ್ನ ಹೆಸರು ಅಲ್ಲಿ ಏಕಿತ್ತು ಎನ್ನುವುದೂ ಅರ್ಥವಾಗುತ್ತಿಲ್ಲ. ಯೋಚಿಸಲೊಂದು ತಾಣ ಬೇಕು. ನನಗೆ ಈ ಊರಿನಲ್ಲಿ ನಾಗಾನಂದ ಒಬ್ಬನೇ ಪರಿಚಿತ. ಇಲ್ಲ ತಾಳು -ಜೀತ್ -ನಮ್ಮ ಜೊತೆ ಓದುತ್ತಿದ್ದ ಜೀತೇಂದ್ರ ಕೂಡ ಇಲ್ಲಿಯೇ ಇದ್ದಾನೆ. ನಾಗಾನಂದ ಹಾಗು ಜೀತ್ ಒಟ್ಟಿಗೆ ಕೆಲಸ ಮಾಡಿದ್ದರು. ಅವನ ಮನೆಯೇ ಸುರಕ್ಷಿತ ಸ್ಥಳ. ಜೊತೆಗೆ ನಾಗಾನಂದನ ವಿಚಾರ ಅವನಿಗೇನಾದರೂ ಗೊತ್ತಿರಬಹುದು"


"ನಡೆಯಿರಿ ಹಾಗಿದರೆ. ಅಡ್ರಸ್ ಹೇಳುವಿರಾ?" ಟೂವೀಲರ್ ಪುನಃ ಹತ್ತುತ್ತ ಕೇಳಿದಳು ಪೂಜಾ



*****



"ಹಂ‌ಂ... ನಾಗಾನಂದ್, ನಾನು ಜೊತೆಗೆ ಕೆಲಸ ಮಾಡುವುದು ಬಿಟ್ಟು ಹಲವು ವರ್ಷಗಳಾಗಿದ್ದವು. ಇತ್ತೀಚೆಗೆ ಹೆಚ್ಚು ಸಂಧಿಸಿಯೂ ಇರಲಿಲ್ಲ. ಆದರೆ ಈರೀತಿ ಅವನ ಕೊಲೆಯಾಗಿದೆಯೆಂದು ಕೇಳಿ ಬೇಸರವಾಗುತ್ತಿದೆ" ಜೀತ್ ಹೇಳಿದ. ದಿನಕರ ಹಾಗು ಪೂಜಾ ಜೀತ್ ಮನೆಗೆ ಬಂದಿದ್ದರು. ಜೀತ್‌ಗೆ ದಿನಕರ ತಕ್ಷಣ ಗುರುತು ಸಿಗದಿದ್ದರೂ ಹೆಸರು ಹೇಳಿದ ನಂತರ ಸ್ವಾಗತಿಸಿದ್ದ. ಡಿವೋರ್ಸ್ ಮಾಡಿಕೊಂಡಿದ್ದ ಜೀತ್ ಮನೆಯಲ್ಲಿ ಒಬ್ಬನೇ ಇದ್ದ. ಕಾಫಿ ಕುಡಿಯುತ್ತ ನಡೆದ ಸಂಗತಿಯನ್ನು -ನಾಗಾನಂದನ ಸಂದೇಶ, ತನ್ನ ಮೇಲಿನ ಆರೋಪಗಳನ್ನು ಬಿಟ್ಟು -ದಿನಕರ ವಿವರಿಸಿದ್ದ. ಇಷ್ಟು ಹೊತ್ತಿಗೆ ಘಂಟೆ ರಾತ್ರಿ ಹನ್ನೊಂದಾಗಿತ್ತು.


ಪೂಜಾ ಕೇಳಿದಳು "ನೇಗಿಲು! ಅದೇನು ವಿಚಿತ್ರ? ಏನಿದ್ದಿರಬಹುದು ಅದರ ಹಿಂದೆ?"


"ಓಹ್! ಹಲಾಯುಧ" ಜೀತ್ ಆರಾಮವಾಗಿ ಹೇಳಿದ


ಪೂಜಾಳ ಮೂಖ ಖಾಲಿಯಾಗಿತ್ತು. ದಿನಕರನ ಮುಖದಲ್ಲಿ ಸಂದೇಹ. "ಏನೂ? ನಿನಗೆ ಗೊತ್ತಿಲ್ಲವೇ? ದಿನಕರ್ ನಿನಗಂತೂ ಗೊತ್ತಿರಬೇಕು" ಎನ್ನುತ್ತ ಜೀತ್ ಎದ್ದ. ಪೂಜಾಳ ಕಡೆ ಬೆರಳು ಮಾಡಿ "ಬಾ ಇಲ್ಲಿ" ಎನ್ನುತ್ತ ಮನೆಯೊಳಗೆ ಹೋದ.


ಎರಡು ಅಡಿ ಎತ್ತರ ಹಾಗು ಸುಮಾರು ಹತ್ತು ಅಡಿ ಅಗಲವಾದ ದಶಾವತಾರ ವಿಗ್ರಹ ಸರಣಿ ಶೋಕೇಸಿನೊಳಗಿತ್ತು. "ಅದನ್ನು ನೋಡದೆ ದಶಾವತಾರಗಳು ಯಾವುವು ಹೇಳು ನೋಡೋಣ" ಜೀತ್ ಪೂಜಾಳಿಗೆ ಹೇಳಿದ.


"ಮತ್ಸ್ಯ, ಕೂರ್ಮ, ವರಾಹ, ರಾಮ, ಕೃಷ್ಣ, ಬುದ್ಧ, ಆಮೇಲೆ...ಹೂಂ ನಾರಸಿಂಹ... ಕಲ್ಕಿ.." ಎಂದು ತಡವರಿಸಿದಳು ಪೂಜ.


"ಈಗ ತಿರುಗಿ ನೋಡಿ ಹೇಳು"


"ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ, ವಾಮನ, ಪರಷುರಾಮ" ಮುಂದಿನ ಅವತಾರ ಕಂಡು ಪೂಜಾ ಜೀತ್ ಕಡೆ ತಿರುಗಿದಳು.


"ಹಲಾಯುಧ, ಹೂಂ ಮುಂದೆ" ಜೀತ್ ಸೇರಿಸಿದ


"ರಾಮ, ಕೃಷ್ಣ, ಕಲ್ಕಿ" ಮುಗಿಸಿದಳು ಪೂಜಾ. "ಅರೆ! ಬುದ್ಧ ಇಲ್ಲವೇ ಇಲ್ಲ...?"


"ಕರಕ್ಟ್! ಬುದ್ಧ ಇಲ್ಲ. ಹಲಾಯುಧ, ಜೊತೆಗೆ ಸ್ಥಳಗಳು ಸ್ವಲ್ಪ ಹೆಚ್ಚು ಕಡಿಮೆ"


"ಹಲಾಯುಧ? ಅಂದರೆ ಬಲರಾಮ?" ಸಂಪೂರ್ಣ ಗೊಂದಲದಲ್ಲಿ ಕೇಳಿದಳು ಪೂಜಾ


"ಮಣ್ಣಂಗಟ್ಟಿ. ಎಲ್ಲ ಬುದ್ಧನನ್ನು ಸೇರಿಸಲು ಮಾಡಿದ ತರಲೆ" ಜೀತ್ ಸಿಟ್ಟಿನಿಂದ ಹೇಳಿದ.


"ಆದರೆ, ಆದರೆ..."


"ಬುದ್ಧನಿಗೆ ಹಿಂದೂ ಧರ್ಮಕ್ಕೆ ಯಾವ ಸಂಬಂಧವೂ ಈಲ್ಲ. ಯೋಚಿಸು -ಎಲ್ಲ ಅವತಾರಗಳಿಗೆ ಒಂದು ಗುರಿ, ಧ್ಯೇಯ ಇದೆ. ಮತ್ಸ್ಯ ಪ್ರಳಯದಲ್ಲಿ ಸಪ್ತ-ಋಷಿಗಳಿಗೆ ದಾರಿ ತೋರಿಸಿ, ಕೂರ್ಮ ಸಮುದ್ರ ಮಥನದಲ್ಲಿ ಮಂದಾರಪರ್ವತವನ್ನು ಎತ್ತಿ ಹಿಡಿದು, ವರಾಹ ಹಿರಣ್ಯಾಕ್ಷನನ್ನು ಕೊಂದು, ಭೂದೇವಿಯನ್ನು ರಕ್ಷಿಸಿ, ನರಸಿಂಹನು ಹಿರಣ್ಯಕಷಿಪುವನ್ನು ಕೊಂದು, ಪ್ರಹ್ಲಾದನನ್ನು ರಕ್ಷಿಸಿ, ಪರಷುರಾಮ ಧರ್ಮಭ್ರಷ್ಟರಾದ ಕ್ಷತ್ರಿಯರನ್ನು ಸಂಹರಿಸಿ, ರಾಮನು ತಾಟಕಿ, ರಾವಣಾಸುರ-ಕುಂಭಕರ್ಣರನ್ನು ವಧಿಸಿ, ಕೃಷ್ಣನು ಕಂಸನನ್ನು ಕೊಂದು, ಗೀತೆಯನ್ನು ಬೋಧಿಸಿ, ಕುರುಕ್ಷೇತ್ರದಲ್ಲಿ ಧರ್ಮವನ್ನು ಎತ್ತಿ ಹಿಡಿದು ಹೀಗೆ ಎಲ್ಲಾ ಅವತಾರಗಳು ಗುರಿಗಳನ್ನು ಸಾಧಿಸಿವೆ. ಬುದ್ಧ ಸಾಧಿಸಿರುವುದೇನನ್ನು?"


"ಬೌದ್ಧ ಧರ್ಮ ಸ್ಥಾಪನೆ ಮಾ..."


"ಹೂಂ ಬೌದ್ಧ ಧರ್ಮ! ವೇದದ ಮಹತ್ತನ್ನೇ ಪರಿತ್ಯಜಿಸಿದ ಬೌದ್ಧ ಧರ್ಮ ಎಂದಿಗೂ ಹಿಂದೂ ದೇವತೆಯ ಸ್ಥಾಪನೆಯಾಗಿರಲಾರದು. ಬುದ್ಧ ಹಿಂದೂ ದೇವತೆಯೇ ಆಗಿದ್ದರೆ ಆದಿ ಶಂಕರಾಚಾರ್ಯ, ಕುಮಾರಿಲಭಟ್ಟರಂತಹ ಮಹಾನ್ ಪುಣ್ಯಪುರುಷರು ಏಕೆ ಬೌದ್ಧ ಧರ್ಮವನ್ನು ನಿರ್ಮೂಲ ಮಾಡಲು ಶ್ರಮಿಸಿದ್ದಾರೆ? ಶಂಕರಾಚಾರ್ಯರು ಬೌದ್ಧ ಪಂಡಿತರನ್ನು ತರ್ಕದಲ್ಲಿ ಸೋಲಿಸಿದ ನಂತರ ಅವರ ಅತ್ಯಂತ ಶ್ರೇಷ್ಠ ಮಹಾಬೋಧಿ ದೇವಸ್ಥಾನ ಶಂಕರ ಮಠದ ಆಧೀನದಲ್ಲಿತ್ತು. ಅಲ್ಲೊಂದು ಈಶ್ವರನ ಲಿಂಗವೂ ಸ್ಥಾಪನೆಯಾಗಿದೆ ಗೊತ್ತೇ?"


"ದಾನವರನ್ನು, ಅಧರ್ಮಿಗಳನ್ನು ಅಡ್ಡಹಾದಿಗೆಳೆಯಲು ಹಿಂದೂ ಧರ್ಮದಿಂದ ಪ್ರಾಪ್ತವಾಗುವ ಪುಣ್ಯದಿಂದ ವಂಚಿಸಲು ಸುಳ್ಳು ಧರ್ಮ ಬೋಧನೆ..." ಮಧ್ಯೆ ದಿನಕರ ಸೇರಿಸಿದ.


"ಯಾಹ್ ರೈಟ್! ಬೌದ್ಧ ಧರ್ಮದ ಖ್ಯಾತ ಪಂಡಿತರಾರು? ನಾಗಾರ್ಜುನ, ದಿಗನಾಗ, ಧರ್ಮಕೀರ್ತಿ, ಅಸಂಗ, ವಸುಬಂದು ಇವರೆಲ್ಲ ಹುಟ್ಟು ಬ್ರಾಹ್ಮಣರೇ. ಇವರೆಲ್ಲ ದಾನವರೆನ್ನುತ್ತೀಯಾ? ಹೋಗಲಿ ಬುದ್ಧಿಸಂ ಇಂಡಿಯಾಲಿ ಸುಮಾರು ೮-೯ನೇ ಶತಮಾನದಲ್ಲಿ ಮಾಯವಾಯ್ತು. ಎಲ್ಲರೂ ಪುನಃ ಹಿಂದೂಗಳಾಗಿ ರೀಕನ್ವರ್ಟ್ ಆದರು. ಏನಾಯಿತು ನಿನ್ನ ದಾನವ, ಸುಳ್ಳು ಧರ್ಮ?"


"ಇನ್ನೂ ಇದೆ ಕೇಳಿ. ಪುರಾಣಗಳ ಪ್ರಕಾರ ಹತ್ತು ಅವತಾರಗಳಲ್ಲಿ ನಾಲ್ಕು ಕೃತ ಯುಗದಲ್ಲಿ, ಮೂರು ತ್ರೇತಾಯುಗದಲ್ಲಿ, ಎರಡು ದ್ವಾಪರ ಯುಗದಲ್ಲಿ ಹಾಗು ಒಂದು ಕಲಿಯುಗದಲ್ಲಿ ಮೂಡಬೇಕು. ಬುದ್ಧನ ಕಾಲ ಯಾವುದು?"


"ಎರಡುವರೆ-ಸಾವಿರ ವರ್ಷ, ಸುಮಾರು ೫೦೦ ಬಿ.ಸಿ." ಸಂಭಾಷಣೆ ಎತ್ತ ಹೋಗುತ್ತಿದೆಯೆಂದರಿತು ಪಿಸುಗುಟ್ಟಿದ ದಿನಕರ.


"ಹೂಂ. ಮಹಾಭರತದಲ್ಲಿ ಬರುವ ಇರ್ರೆಫ್ಯೂಟೆಬಲ್ ಆಸ್ಟ್ರೋನಾಮಿಕಲ್ ಎವಿಡೆನ್ಸ್ ಪ್ರಕಾರ ಮಹಾಭಾರತ ಯುದ್ಧವಾಗಿದ್ದು ೩೧೩೮ ಬಿ.ಸಿ, ಕೃಷ್ಣನ ಅಂತ್ಯವಾಗಿ ಕಲಿಯುಗ ಆರಂಭವಾಗಿದ್ದು ೩೧೦೨ ಬಿ.ಸಿ. ಎಂದು ಹಲವಾರು ಸ್ಕಾಲರ್ಸ್ ನಿರ್ಧರಿಸಿದ್ದಾರೆ. ಐಹೊಳೆ ಶಾಸನವೂ ಇದೇ ಹೇಳುತ್ತದೆ. ಕೆಲವರು ಬುದ್ಧನ ಕಾಲವನ್ನು ಸುಮಾರು ೧೮೦೦ ಬಿ.ಸಿ. ವರೆಗು ಎಳೆಯುತ್ತಾರೆ. ಆದರೂ, ಕ್ಲಿಯರ್ಲಿ, ಇದು ಕಲಿಯುಗದಲ್ಲಿ ಬಂದಿದೆ. ಅರ್ಥಾತ್, ೯ನೇ ಅವತಾರ ಬುದ್ಧನಲ್ಲ"


"ಹಾಗಿದ್ದರೆ ಹಳೇ ಕಾಲದ ದೇವಸ್ಥಾನಗಳು..." ಪೂಜಾ ನಿತ್ರಾಣ ಧ್ವನಿಯಲ್ಲಿ


"ಹಿಂದೂ ಧರ್ಮದಲ್ಲಿ ಆ ರೀತಿ ದೇವಾಲಯಗಳನ್ನು ಕಟ್ಟುವ ಸಂಪ್ರದಾಯವಿರಲಿಲ್ಲ. ಕರ್ಮಕಾಂಡ ಹಿಂದೂ ಧರ್ಮದ ಡೆಫಿನಿಶನ್ ಆಗಿತ್ತು. ದಶಾವತಾರ ಕೆತ್ತನೆ ಇರುವ ಅತೀ ಹಳೆ ಹಿಂದೂ ದೇವಸ್ಥಾನ ೯-೧೦ನೇ ಶತಮಾನದ್ದು. ಅಷ್ಟು ಹೊತ್ತಿಗೆ ಎಡವಟ್ಟಾಗಿಹೋಗಿತ್ತು"


"ಅಂದರೆ..."


"ಹುಟ್ಟುತ್ತಿದ್ದ ಬೌದ್ಧ ಧರ್ಮಕ್ಕೆ ಸ್ವಪರಿಚಯವಿರಲಿಲ್ಲ. ಹಿಂದೂ ದಂತಕತೆ-ಪುರಾಣಗಳಲ್ಲಿ ವಿಷ್ಣುವನ್ನು ತಗೆದು ಬುದ್ಧನನ್ನು ಹಾಕಿ ಅವುಗಳನ್ನು ತಮ್ಮದಾಗಿಸಿಕೊಂಡರು. ಸ್ತೂಪಾಗಳನ್ನು ಕಟ್ಟುವಾಗ ಈ ಕತೆಗಳನ್ನು ಆ ಸ್ತೂಪಾಗಳ ಮೇಲೆ ಕೆತ್ತಿಸಿದರು. ನಂತರ ಉಂಟಾದ ಕನ್‌ಫ್ಯೂಶನ್‌ನಲ್ಲಿ ಅದೇ ಸ್ಥಪತಿಗಳು ಹಿಂದೂ ದೇವಸ್ಥಾನಗಳನ್ನು ಕೆತ್ತುವಾಗ ಬುದ್ಧನನ್ನು ಅಲ್ಲಲ್ಲಿ ಕೆತ್ತಿರಬೇಕು. ಅಲ್ಲಿಂದ ಶುರುವಾಯಿತು ಎಲ್ಲಾ ತರಲೆ. ಅಂಥದ್ದರಲ್ಲೂ ಬಹಳಷ್ಟು ಕಡೆ ಹಲಾಯುಧನನ್ನು ಕೆತ್ತಲಾಗಿದೆ -ಹೆಚ್ಚಾಗಿ ದಕ್ಷಿಣದಲ್ಲಿ" ವಿವರಿಸಿದ ಜೀತ್.


ಇಬ್ಬರ ಶಂಕಾಮುಖಭಾವ ನೋಡಿ "ಲುಕ್, ಚೀನೀ-ಪ್ರಯಾಣಿಕರಾದ ಫಾ ಹಿಯಾನ್, ವೆನ್ ಸಾಂಗ್ ಇವರುಗಳು ಬುದ್ಧನ ಅವತಾರದ ಸ್ಟ್ಯಾಟಸ್ ಬಗ್ಗೆ ಯಾವ ಪುರಾವೆಗಳೂ ಬಿಟ್ಟಿಲ್ಲ. ಅದರಲ್ಲೂ ವೆನ್ ಸಾಂಗ್ -ಮಹಾನ್ ಅಹಂಕಾರಿ -ಬುದ್ಧ ಹಾಗು ಬೌದ್ಧ ಧರ್ಮದ ಒಂದೊಂದು ಸಣ್ಣ ಸಣ್ಣ ವಿಚಾರಗಳನ್ನೂ ಸವಿಸ್ತಾರವಾಗಿ ಬರೆದಿದ್ದಾನೆ. ಆದರೆ ಬುದ್ಧನ ಅವತಾರದ ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ. ಇದು ನನ್ನ ಪ್ರಕಾರ ಕನ್‌ಕ್ಲೂಸಿವ್ ಪ್ರೂಫ್"


"ನಾಗಾನಂದ ನನ್ನ ಹೆಸರು ಬರೆದು ಒಂದು ಸಂದೇಶ ಬಿಟ್ಟು ಹೋಗಿದ್ದಾನೆ" ದಿನಕರನಿಗೆ ಅರಿವೆ ಗೋಚರವಾಗುತ್ತ ನಾಗಾನಂದನ ಚೀಟಿಯನ್ನು ತೆಗೆದು ಮೊದಲ ತ್ರಿಪದಿ ಓದಿದ.


ಜೀತ್ ಹಿಂದಕ್ಕೊರಗಿ ಆಲೋಚಿಸ ತೊಡಗಿದ. ಅಷ್ಟರಲ್ಲಿ ಫೋನ್ ಮೊಳಗಿತು.


"ಬಂದೆ ಒಂದು ನಿಮಿಷ" ಫೋನ್ ಕೈಗೆತ್ತಿಕೊಂಡು "ಹಲೋ..." ಎನ್ನುತ್ತ ಜೀತ್ ಒಳಗೆ ಹೋದ.


ಕೆಲ ನಿಮಿಷಗಳ ನಂತರ ಇನ್ನೂ ಫೋನ್ ಕೈಯ್ಯಲ್ಲೇ ಹಿಡಿದು ಹೊರಬಂದಾಗ ಪೂಜಾ ಕೇಳಿದಳು.


"ಸರಿ ಹಾಗಿದ್ದರೆ ಬುದ್ಧ ಅವತಾರವಾದರೆ ಫೈಲ್ಯುರ್, ಪ್ರಾಬಬ್ಲಿ ಅವತಾರವೇ ಅಲ್ಲವೆಂದು ತಿಳೀತು. ಹಾಗಾದರೆ ಹಲಾಯುಧ?"


"ದೇರ್ ಯು ಗೋ" ಜೀತ್ ಧ್ವನಿ ಹಗುರವಾಗಿತ್ತು. "ಹಲಾಯುಧ ಈಸ್ ದ ಸೆವೆನ್‌ತ್ ಅವತಾರ. ಪರಷುರಾಮ ಮತ್ತು ಕೃಷ್ಣರ ಮಧ್ಯೆ. ಹಲಾಯುಧನ ಕತೆಗಳು ಬೇಕಾದರೆ ಬಲರಾಮನ ಕತೆಗಳನ್ನು ನೋಡಬೇಕು. ಬಲರಾಮನ ರೈವತ-ರೇವತಿಯರ ಕತೆ, ಭೂಮಿಯಲ್ಲಿ ಬರ ಬಂದಾಗ ಹಲಪ್ರಹಾರದಿಂದ ಯಮುನೆಯ ದಿಕ್ಕು ಬದಲಾಯಿಸಿದ ಕತೆ ಇವೆಲ್ಲವೂ ಬಲರಾಮನಿಗೆ ಸ್ವಲ್ಪ ಔಟ್-ಆಫ್-ಪ್ಲೇಸ್ ಆಗಿ ಕಾಣುತ್ತವೆ. ಇವೆಲ್ಲ ಪ್ರಾಬಬ್ಲಿ ಈ ಹಲಾಯುಧನ ಕತೆಗಳಾಗಿದ್ದಿರಬೇಕು. ನಂತರ ಬುದ್ಧ ಸೀನ್‌ಗೆ ಬಂದಾಗ ಹಲಾಯುಧನನ್ನು ಕತ್ತರಿಸಿ, ಬುದ್ಧನನ್ನು ಕೊನೆಗೆ ಸೇರಿಸಿ, ಹಲಾಯುಧನ ಕತೆಗಳನ್ನು ಬಲರಾಮನಿಗೆ ಸೇರಿಸಿರಬೇಕು. ಇದಕ್ಕೇ ಪ್ರೂಪ್ ಹುಡುಕುತ್ತಿದ್ದ ನಮ್ಮ ನಾಗನಂದ್. ಅದನ್ನೇ ಅರ್ಥ ಮಾಡಿಸಲು ಹಲವನ್ನು ಹಿಡಿದಿದ್ದಿರಬೇಕು"


"ಇನ್ನೂ ಒಂದು ಆರ್ಗ್ಯೂಮೆಂಟ್ ಇದೆ. ದಶಾವತಾರದಲ್ಲಿ ಅನೇಕರು ಡಾರ್ವಿನ್‌ನ ಥಿಯರಿ ಆಫ್ ಎವಲ್ಯೂಶನ್ ಕಂಡಿದ್ದಾರೆ. ಮತ್ಸ್ಯ -ಲೈಫ್ ಒರಿಗಿನೇಟೆಡ್ ಇನ್ ದ ಓಶನ್, ನಂತರ ಕೂರ್ಮ -ಕೋಲ್ಡ್ ಬ್ಲಡೆಡ್, ಆಮ್‌ಫೀಬಿಯಸ್, ವರಾಹ -ಮ್ಯಾಮಲ್ ಆದರೂ ಕೊಳಚೆ ಪ್ರದೇಶದಲ್ಲಿರುತ್ತದೆ, ನರಸಿಂಹ -ಅರ್ಧ ಮಾನವ ಅರ್ಧ ಪ್ರಾಣಿ, ವಾಮನ -ಕುಬ್ಜ ಮನುಷ್ಯ: ಪ್ರಿ-ಹಿಸ್ಟೋರಿಕ್ ಮ್ಯಾನ್, ಪರಶುರಾಮ -ಕೊಡಲಿ ಹಿಡಿದ ಹಂಟರ್-ಗ್ಯಾದರರ್, ಈಗ ತೊಂದರೆ ಶುರು. ರಾಮ, ಕೃಷ್ಣ, ಬುದ್ಧ, ಕಲ್ಕಿ ತೊಗೊಂಡರೆ ರಾಮ -ರಾಜ್ಯ, ರಾಷ್ಟ್ರಗಳಾಗಿ ಜನ ಒಗ್ಗೂಡಿದ ಸಂಕೇತ, ಕೃಷ್ಣ -ನಿರತಿಶಯ ಮಾನವ, ಪರ್ಫೆಕ್ಟ್ ಬೀಯಿಂಗ್, ಬುದ್ಧ -ಜ್ಞಾನೋದಯವಾದ ಮಾನವ, ಕಲ್ಕಿ -ಬೇಕಾದರೆ ವಿನಾಶವೆನ್ನು ಇಲ್ಲವೇ ಸೂಪರ್ಮ್ಯಾನ್ ಅನ್ನು. ಆದರೆ ಇಲ್ಲಿ ಸ್ವಲ್ಪ ಸರಿಯಿಲ್ಲ: ನಿರತಿಶಯ ಮಾನವನಾದ ಮೇಲೆ ಜ್ಞಾನೋದಯವೇ? ವಿಚಿತ್ರವೆನಿಸುವುದಿಲ್ಲವೇ? ಇದರ ಬದಲು ಪರಶುರಾಮನ ನಂತರ ಹಲಾಯುಧನನ್ನು ಹಾಕಿದರೆ? ಹಲಾಯುಧ -ಜನರು ನೆಲೆಸಿ ವ್ಯವಸಾಯ ಶುರು ಮಾಡಿದ ಸಂಕೇತ, ನಂತರ ರಾಮ -ನೇಶನ್ ಬಿಲ್ಡಿಂಗ್, ಕೃಷ್ಣ -ಪರ್ಫೆಕ್ಟ್ ಬೀಯಿಂಗ್, ಕಲಿಕಿ -ಸೂಪರ್ ಮ್ಯಾನ್. ಈಗ ನೋಡು ಲಿಂಕು ಸರಿಯಾಗಿದೆ"


"ನೀವು ಹೇಳುತ್ತಿರುವುದರಲ್ಲೂ ಸ್ವಲ್ಪ ಅರ್ಥವಿದೆ" ಒಪ್ಪಿಕೊಂಡಳು ಪೂಜಾ.


"ನಾನು ಹೇಳುತ್ತಿರುವುದರಲ್ಲೇ ಅರ್ಥವಿರೋದು, ಮಗೂ, ನೀನು ತಿಳಿದುಕೊಂಡಿರುವುದರಲ್ಲಿ ಅರ್ಥವಿಲ್ಲ" ಜೀತ್ ಮುಗಿಸಿದ. "ದಿನಕರ್, ನಾಗಾನಂದ್ ಹತ್ತು ವರ್ಷಗಳಿಂದ ಈ ದಶಾವತಾರದ ವಿಷಯದಲ್ಲೇ ಕೆಲಸ ಮಾಡುತ್ತಿದ್ದ. ಪುರಾಣಗಳು ಹೇಗೆ ಬದಲಾದವು, ಬುದ್ಧ ಹೇಗೆ ಅವತಾರನಾದ, ಏಕೆ ಬುದ್ಧ ತಪ್ಪು, ಹಲಾಯುಧ ಸರಿ ಎಂದು ಸಿದ್ಧಪಡಿಸಲು ಪ್ರೂಫ್ ಒಗ್ಗೂಡಿಸುತ್ತಿದ್ದ. ಅವನಿಗೆ ಯಾರಮೇಲೂ ಹೆಚ್ಚು ನಂಬಿಕೆಯಿರಲಿಲ್ಲ. ತನ್ನ ಕೆಲಸದಲ್ಲಿ ಸೀಕ್ರೆಸಿ ಮೈನ್‌ಟೈನ್ ಮಾಡುತ್ತಿದ್ದ. ಅದಕ್ಕೇ ಕೇವಲ ನಿನಗರ್ಥವಾಗುವಂತೆ ತನ್ನ ರಿಸರ್ಚ್ ಬಗ್ಗೆ ಏನಾದರೂ ಕ್ಲೂ ಬಿಟ್ಟಿರಬೇಕು. ಎಲ್ಲಿ ಮತ್ತೊಮ್ಮೆ ಓದು"


ದಿನಕರ ಪುನಃ ಓದಿದ


"ಶಾರದೆಯ ಪೀಠ -ಅದಂತೂ ಶ್ರೂಂಗೇರಿಯೇ ಇರಬೇಕು. ಅಲ್ಲಿ ದಹನವಾಣಿಯೇ?"


"ಓಹ್! ಮೊದಲಿಗೆ ಏನೋ ಸಂಖ್ಯೆಗಳಿವೆ -BXL.234.102W"


"ಲೈಬ್ರರಿ" ಪೂಜಾ ಹೇಳಿದಳು


"ಆಂ?.."


"ಅದು ಲೈಬ್ರರಿ ಪುಸ್ತಕದ ಕಾಲ್-ನಂಬರ್. ನ..." ಅರ್ಧದಲ್ಲೇ ಪೂಜಾಳ ಧ್ವನಿ ಕತ್ತರಿಸಿ ಹೋಯಿತು. ರಕ್ತ-ಕೆಂಪು ನಿಲುವಂಗಿ ಧರಿಸಿದ್ದ ವ್ಯಕ್ತಿ ಪೂಜಾಳ ಕತ್ತಿಗೆ ಚಾಕುವೊಂದನ್ನು ಹಿಡಿದು ನಿಂತಿದ್ದ.


"ಆ ಚೀಟಿ ನನಗೆ ಕೊಟ್ಟುಬಿಡಿ. ಇಲ್ಲದಿದ್ದರೇ ಇವಳ ಕತ್ತು..."


"ಇಲ್ಲಿದೆ ಚೀಟಿ" ದಿನಕರ ಜೇಬಿನಲ್ಲಿಟ್ಟುಕೊಂಡಿದ್ದ ಚೀಟಿಯನ್ನು ನಿಧಾನವಾಗಿ ತೆಗೆದು ಕೈಯಲ್ಲಿ ಹಿಡಿದು ಕೈನೀಡಿ ಭಿಕ್ಕುವಿನ ಕಡೆ ಹೊರಟ. ಆ ಕ್ಷಣದಲ್ಲಿ ಚೂಪಾದ ಹೀಲ್ಸ್ ಉಳ್ಳ ಶೂ ಧರಿಸಿದ್ದ ಪೂಜಾ ಹಿಮ್ಮಡಿಯಿಂದ ಭಿಕ್ಕುವಿನ ಕಾಲನ್ನು ಬಲವಾಗಿ ತುಳಿದಳು. ಜೊತೆಗೇ ತನ್ನ ಮೊಣಕೈಯಿಂದ ಅವನ ಪಕ್ಕೆಗೆ ಗುದ್ದಿದಳು. ನೋವಿನಿಂದ ಕೆಳಬಗ್ಗಿದ್ದ ಭಿಕ್ಕುವನ್ನು ಜೀತ್ ಬಲವಾಗಿ ಚೆಚ್ಚಿದ. ಜ್ಞಾನ ತಪ್ಪಿ ಭಿಕ್ಕು ಕೆಳಗೆಬಿದ್ದ. ತಕ್ಷಣ ಜೀತ್, ದಿನಕರ ಇಬ್ಬರೂ ಸೇರಿ ಅವನನ್ನು ಕಟ್ಟಿ ಹಾಕಿದರು.


"ಆವತಂಶಕ!" ಜೀತ್ ಉದ್ಗಾರ ತೆಗೆದ


"ಹ್ಞಾ..?"


"ಈತ. ಆವತಂಶಕ ಸಂಘದವ. ಇವನ ಕೆಂಪು ಗೌನು, ಬೆರಳಲ್ಲಿರುವ ಲೋಟಸ್-ಸ್ಟ್ಯಾಂಪ್ ಉಂಗುರ ನೋಡು"


ಪೂಜಾ, ದಿನಕರ ಕಕ್ಕಾಬಿಕ್ಕಿ ಒಬ್ಬರನ್ನೊಬ್ಬರು ನೋಡಿದರು.


"ಆವತಂಶಕ ಎಂದರೆ ಒಂದು ಊಂ... ಹಿಂದೂನೂ ಅಲ್ಲ, ಬುದ್ಧಿಸ್ಟೂ ಅಲ್ಲ -ಎರಡರ ಮಧ್ಯದ ಒಂದು ನೆಬ್ಯುಲಸ್ ಆರ್ಗನೈಸೇಶನ್. ಅತ್ತ ಪರದೇಶಗಳಿಂದ ಬರುವ ಬುದ್ಧಿಸ್ಟ್ ಗ್ರಾಂಟ್‌ಗಳನ್ನೂ ಹೊಡೆಯುತ್ತಾರೆ, ಇತ್ತ ಬೌದ್ಧಾವತಾರ ಅದು ಇದು ಹೇಳುಕೊಂಡು ಹಿಂದೂಗಳ ದುಡ್ಡೂ ಹೊಡೆಯುತ್ತಾರೆ. ಒಟ್ಟಿನಲ್ಲಿ ಕಳೆದ ಐದೇ ವರ್ಷಗಳಲ್ಲಿ ಅವರ ಬ್ಯಾಂಕ್ ಬ್ಯಾಲೆನ್ಸ್ ಗಗನಕ್ಕೇರಿದೆ. ಇವರ ಫಾಲೋಅರ್ಸ್ ಎಲ್ಲೆಲ್ಲೂ ಇದ್ದಾರೆ. ಬಿಸಿನೆಸ್‌ಮೆನ್, ಬ್ಯಾಂಕರ್ಸ್, ಲಾಯರ್ಸ್, ಪಾಲಿಟಿಶ್ಯನ್ಸ್, ಹೀಗೆ. ಸಮಾಜದಲ್ಲಿ ತುಂಬಾ ಇನ್‌ಫ್ಲೂನ್ಸ್ ಇಟ್ಟಿದ್ದಾರೆ. ಎಷ್ಟರ ಮಟ್ಟಿಗೆಂದರೆ ೧೯೯೯ರಲ್ಲಿ ಕಾಂಚಿ-ಕಾಮಕೋಟಿ ಜಗದ್ಗುರು ಜಯೇಂದ್ರ ಸರಸ್ವತಿ ಹಾಗು ಮಹಾಬೋಧಿ ವಿಪಾಸನಾಚಾರ್ಯ ಸತ್ಯನಾರಾಯಣ ಗೊಯಂಕಾಜಿ ನಡುವೆ ಮಾತು-ಕತೆ ನಡೆದು ಇಬ್ಬರೂ ಸೇರಿ 'ಬೌದ್ಧಾವತಾರ ಒಂದು ಮಿಸ್‌ಕಾನ್ಸೆಪ್ಷನ್; ಇದು ನಿಜವಲ್ಲ, ಇದನ್ನು ಮುಂದುವರೆಸಬಾರದು' ಎಂದು ಒಂದು ಪ್ರೆಸ್ ರಿಲೀಸ್ ಕೊಟ್ಟರು. ಆಮೇಲೆ ಜಯೇಂದ್ರ ಸರಸ್ವತಿಗೆ ಏನಾಯಿತು ಎಲ್ಲಾರಿಗೂ ತಿಳಿದಿದೆ. ಕೇಸ್ ಆಫೀಸರ್ ಈ ಆವತಂಶಕ ಸಂಘದವನೆಂದು ನಂತರ ತಿಳಿದುಬಂತು. ಬಹಳ ಡೇಂಜರ್ ಜನ ಇವರು" ಜೀತ್ ವಿವರಿಸಿದ.


"ಹೂಂ -ಕಾಂಚಿ ಜಗದ್ಗುರು ಮರ್ಡರ್ ಕೇಸ್‌ನಲ್ಲಿ ಸಿಕ್ಕಿಬಿದ್ದರು -ನಾನೇ ಆ ಸ್ಟೋರಿ ಕವರ್ ಮಾಡಿದ್ದೆ. ಆದರೆ, ಈತ? ಇಲ್ಲಿ ಏಕೆ? ಪ್ರೊಫೆಸರ್ ನಾಗಾನಂದ್ ಸಂದೇಶಕ್ಕೂ ಇವನಿಗೂ ಏನು ಸಂಬಂಧ? ಅದನ್ನೇಕೆ ಕೇಳುತ್ತಿದ್ದ?" ಪೂಜಾ ಪ್ರಶ್ನಿಸಿದಳು.


"ನಾಗಾನಂದನ ರಿಸರ್ಚ್ ಬೌದ್ಧಾವತಾರ ಸುಳ್ಳೆಂದು ಕಡಾಖಂಡಿತವಾಗಿ ಸ್ಥಾಪಿಸಿದರೆ, ಆವತಂಶಕ ತೊಂದರೆಗೆ ಬಿದ್ದೀತು. ಅವರಿಗೆ ಬರುವ ಕೋಟ್ಯಾಂತರ ರೂಪಾಯಿ ಚಂದಾ-ಧಾರೆ ಒಣಗಿ ಹೋದೀತು. ಚೀಟಿಯನ್ನು ಕಸಿದು ಮೂಲಗಳನ್ನೇ ನಾಶ ಮಾಡಲು ಬಂದಿರಬೇಕು" ಜೀತ್ ಊಹಿಸಿದ.


"ಆದರೆ ಅವರಿಗೆ ಇಂತಹ ಸಂದೇಶವಿದೆ, ಅದೂ ಡಾ. ದಿನಕರ್ ಬಳಿ ಇದೆಯೆಂದು ತಿಳಿಯುವುದು ಹೇಗೆ ಸಾಧ್ಯ?"


"ಬ್ರಹ್ಮಾವರ್..." ದಿನಕರ ಉಸುರಿದ. ಜೀತ್, ಪೂಜಾ ಅವನಕಡೆ ತಿರುಗಿದರು.


"ಬ್ರಹ್ಮಾವರ್?"


"ನಾಗಾನಂದನ ಕೊಲೆ ಇನ್ವೆಸ್ಟಿಗೇಟ್ ಮಾಡಲು ಬಂದಿದ್ದ ಪೋಲೀಸ್ ಆಫೀಸರ್ -ನನ್ನನ್ನು ಕೊಲೆ ಆಪಾದನೆ ಮೇಲೆ ಅರೆಸ್ಟ ಮಾಡಲು ಹೊರಟಿದ್ದವ -ಅವನ ಬೆರಳಲ್ಲೂ ಇದೇ ರೀತಿ ಕಮಲದುಂಗುರವಿತ್ತು" ದಿನಕರ ವಿವರಿಸಿದ.


"ನಿನ್ನನ್ನು ಅರೆಸ್ಟ್...? ನಾಗಾನಂದನ ಕೊಲೆ ಆಪಾದನೆ ಮೇಲೆ?" ಕೋಪ, ಆಶ್ಚರ್ಯಗಳಿಂದ ಕೂಡಿದ ಜೀತ್ ಧ್ವನಿ.


"ನಾ..." ಮಾತನಾಡಲು ಹೊರಟ ದಿನಕರ ಬಾಯಿ ಮುಚ್ಚಿದ.


"ನಿಮ್ಮ ಸಹವಾಸವೇ ಬೇಡ. ಮರ್ಡರ್ ಸಸ್ಪೆಕ್ಟ್‌ಗಳಿಬ್ಬರಿಗೆ ಆಶ್ರಯ ಕೊಟ್ಟಿರುವುದಲ್ಲದೆ ಮನೆಯಲ್ಲೆಲ್ಲ ಖದೀಮರು, ದರೋಡೆಕೋರರು! ಈಗಲೇ ಪೋಲೀಸ್‌ಗೆ ಫೋನ್ ಮಾಡುವೆ!" ಎನ್ನುತ್ತ ಜೀತ್ ಫೋನ್ ಕಿವಿಗೇರಿಸಿದ.


"ಜೀತ್, ಜೀತ್ -ಇಲ್ಲಿ ನೋಡು ಇನ್ನೂ ಕ್ಲೂಗಳಿವೆ" ಹಾಳೆಯನ್ನು ತೋರಿಸುತ್ತ ಹೇಳಿದ ದಿನಕರ "ನಿನಗೂ ನಾಗಾನಂದ ಕಂಡ ಪ್ರೂಫ್ ಬೇಕಾ? ನಡಿ ಶೃಂಗೇರಿಗೆ ಹೋಗಿ ಒಟ್ಟಿಗೆ ಏನೆಂದು ನೋಡೋಣ"


ಜೀತ್ ಪೋನ್ ಕಿವಿಯಿಂದಿಳಿಸಿದ.


ವಿಚಾರಮಗ್ನ ಧ್ವನಿಯಲ್ಲಿ ದಿನಕರ ಮುಂದುವರೆಸಿದ "ಈ ಆವತಂಶಕ ಸಂಘದವರೇ ಬಹುಶಃ ನಾಗಾನಂದನ ಕೊಲೆಯ ಸಂಚು ಹೂಡಿರಬಹುದು -ಬ್ರಹ್ಮಾವರ, ಈ ಭಿಕ್ಕು, ಈ ನಿಗೂಢ-ರಹಸ್ಯದ ಎಲ್ಲ ತುಣುಕುಗಳು ಸ್ವಸ್ಥಾನಕ್ಕೆ ಸೇರುತ್ತಿವೆ" ಕೊಂಚ ಮೌನದ ನಂತರ "ನಮ್ಮ ಮಿತ್ರ ನಾಗಾನಂದನ ಕೊಲೆಯ ಸಂಚು ಹೊರತರಬೇಕಾದರೆ ಇದೊಂದೇ ದಾರಿ, ಜೀತ್, ಪ್ಲೀಸ್"



*****



"ಈ ಹಲಾಯುಧ-ಬುದ್ಧ ಎಕ್ಸ್‌ಚೇಂಜ್ ಹೇಗಾಯಿತು" ಕಾರಿನಲ್ಲಿ ಮುಂದೆ ಜೀತ್ ಪಕ್ಕ ಕುಳಿತಿದ್ದ ಪೂಜಾ ಕೇಳಿದಳು.


ದಿನಕರನ ಆಕ್ಷೋಭ ಮನವಿಯ ನಂತರ ಜೀತ್ ಸೌಮ್ಯವಾಗಿ, ಶೃಂಗೇರಿಗೆ ಹೋಗಲೊಪ್ಪಿದ್ದ. ಭಿಕ್ಕುವನ್ನು ಬಿಟ್ಟು ಹೋಗುವುದೂ ಕಷ್ಟ, ಪೋಲೀಸರಿಗೊಪ್ಪಿಸುವುದೂ ತೊಂದರೆಯೆಂದು ನಿರ್ಧರಿಸಿ, ಅವನನ್ನೂ ಕಟ್ಟಿ ಹಾಕಿದ್ದಂತೆಯೇ ಜೀತ್ ಕಾರಿನಲ್ಲಿ ದಿನಕರನೊಡನೆ ಹಿಂದಿನ ಸೀಟಿನಲ್ಲಿ ಕೂರಿಸಿ, ಜೀತ್ ಹಾಗೂ ಪೂಜಾ ಮುಂದೆ ಕುಳಿತು ಶೃಂಗೇರಿ ಕಡೆ ಸಾಗುತ್ತಿದ್ದರು. ರಸ್ತೆಗಳ ಮೇಲೆ ಹೆಚ್ಚು ವಾಹನಗಳಿಲ್ಲವಾಗಿ ವೇಗದಿಂದ ಸಾಗಿ ಬೆಳಗಾಗುವಷ್ಟರಲ್ಲಿ ಶೃಂಗೇರಿ ತಲುಪುವ ಹಾಗೆ ಕಾಣಿಸುತ್ತಿತ್ತು. ಜ್ಞಾನ ತಪ್ಪಿ ಬಿದ್ದ ಭಿಕ್ಕು ಒಮ್ಮೆ ಎದ್ದು ತನ್ನ ಕಟ್ಟುಗಳೊಡನೆ ಸ್ವಲ್ಪ ಹೊತ್ತು ಹೋರಾಡಿ, 'ಸುಮ್ಮನಾಗದಿದ್ದರೆ ಪುನಃ ಚೆಚ್ಚಿ ಜ್ಞಾನ ತಪ್ಪಿಸುವೆ' ಎಂದು ಬೆದರಿಸಿದ ನಂತರ ಸುಮ್ಮನಾಗಿ ಮಲಗಿದ್ದ. ಸುಸ್ತಾಗಿದ್ದ ದಿನಕರ ಕೂಡ ಕುಳಿತಲ್ಲೇ ನಿದ್ದೆ ಮಾಡಿದ್ದ. ಪೂಜಾ, ಕಾರ್ ಚಲಿಸುತ್ತಿದ್ದ ಜೀತ್‌ಗೆ ಕಂಪನಿ ಕೊಡಲೆಂದು ಜೀತ್ ಜೊತೆ ಮಾತನಾಡುತ್ತಿದ್ದಳು.


"ಇದಕ್ಕೆ ಒಂದು ಸ್ಟ್ರೇಟ್ ಆನ್ಸರ್ ಇಲ್ಲ. ಬರೀ ಊಹೆಗಳಷ್ಟೆ. ಆಗಲೇ ಹೇಳಿದಂತೆ, ಸ್ಥಪತಿಗಳಿಂದ ಒತ್ತಾಯವಾಗಿ ಹಿಂದೂ ಕತೆಗಳಲ್ಲಿ ಬುದ್ಧನನ್ನು ಸೇರಿಸಿ ಆ ದೃಷ್ಯಗಳನ್ನು ಸ್ತೂಪಾಗಳ ಮೇಲೆ ಕೆತ್ತಿಸುತ್ತಿದ್ದರು. ಕಾಲ ಕ್ರಮೇಣ ಆ ಸ್ಥಪತಿಗಳನ್ನು ಫೋರ್ಸಿಬಲ್‌ಆಗಿ ಬುದ್ಧಿಸಂಗೆ ಕನ್ವರ್ಟ್ ಮಾಡಿದ್ದರೆಂದು ಕಂಡು ಬರುತ್ತದೆ. ಧರ್ಮ ಬದಲಾಯಿಸಿದ ಸ್ಥಪತಿಗಳು, ಈ ಬುದ್ಧನ ಐಕನೋಗ್ರಫಿಯನ್ನೇ ಅವರ ಮುಂದಿನ ಪೀಳಿಗೆಗೆ ಬಳುವಳಿಯಾಗಿ ಕೊಟ್ಟಿರಬೇಕು. ನಂತರ, ಪ್ರಾಚೀನ ಭಾರತದಲ್ಲಿ ಬುದ್ಧಿಸಂ ಮಾಯವಾದ ಮೇಲೆ ಈ ಸ್ಥಪತಿಗಳೆಲ್ಲ ಪುನಃ ಹಿಂದೂಗಳಾದರು. ಹಿಂದೂಗಳೂ ದೇವತೆಗಳ ವಿಗ್ರಹಗಳುಳ್ಳ ದೇವಾಲಯಗಳನ್ನು ಕಟ್ಟಿಸಿದಾಗ, ಅದೇ ಸ್ಥಪತಿಗಳು ಅವರಿಗೆ ತಿಳಿದಿದ್ದ ಬುದ್ಧನಿರುವ ದೃಷ್ಯಗಳನ್ನು ಕೆತ್ತಿರಬೇಕು. ಕಾಲ ಕ್ರಮೇಣ, ಅದನ್ನೇ ನಿಜವಾದ ಪುರಾಣವೆಂದು ಜನರು ಭಾವಿಸಿರಬೇಕು. ಇದೇ ಕಾರಣ ಒರಿಜಿನಲ್ ದಶಾವತಾರದ ಕೆತ್ತನೆಗಳು ವಿರಳವಾಗಿರುವುದಕ್ಕೆ. ಒಂದು ಸುಳ್ಳನ್ನು ಮೇಲೆ ಮೇಲೆ ಹೇಳಿ ಅದನ್ನೇ ನಿಜವಾಗಿಸಿದ ಪ್ರಸಂಗ ಇದು" ಜೀತ್ ವಿವರಿಸಿದ ಎಲ್ಲ ಅಂಶಗಳನ್ನು ಪೂಜಾ ತನ್ನ ಮನಸ್ಸಿನಲ್ಲೇ ಅಚ್ಚು ಇಳಿಸಿಕೊಂಡಳು.


"ಪುರಾಣಗಳು... ಕೊನೆ ಪಕ್ಷ ಅವುಗಳಾದರೂ ಬುದ್ಧನನ್ನು ಬಿಟ್ಟು ಹಲಾಯುಧನನ್ನು ಹೇಳಬೇಕಲ್ಲವೇ? ಹಳೇ ಕಾಲದ ರೆಕಾರ್ಡ್ಸ್...?"


"ಪುರಾಣಗಳ ಅತೀ ಪ್ರಾಚೀನ ಕಾಪಿಗಳು ಎಲ್ಲೂ ದೊರಕಿಲ್ಲ -ದೊರಕುವುದಿಲ್ಲ. ಅವುಗಳೆಲ್ಲ ಬೆಂಕಿ, ರಾಜಾಕ್ರಮಣಗಳು, ಧಾರ್ಮಿಕ ಕಳವಳ, ಕಾಲ ಇತ್ಯಾದಿಗಳಿಂದ ನಷ್ಟವಾಗಿರುತ್ತವೆ. ಹಿಂದಿನ ಕಾಲದಲ್ಲಿ ಪುಸ್ತಕಗಳನ್ನ ಕೈಯಲ್ಲೇ ಕಾಪಿ ಮಾಡಬೇಕಾಗುತ್ತಿತ್ತು. ಈ ಮ್ಯಾನುಸ್ಕ್ರಿಪ್ಟ್ ಕಾಪಿಗಳು ಯಾವಾಗಲೂ ಎಕ್ಸಾಕ್ಟ್‌ಆಗಿರೋದಿಲ್ಲ. ಕಾಪಿ ಮಾಡುವವರು ಸಹಜವಾಗಿ ತಮ್ಮದೇ ಆದ ತಿದ್ದುವಿಕೆಗಳನ್ನು ಕಾಪಿಯಲ್ಲಿ ಮಾಡಿರುತ್ತಾರೆ. ಹೀಗೆ ಪುರಾಣಗಳ ಪ್ರತಿ ಮಾಡುವವರು ಅಲ್ಲಿ ಹಲಾಯುಧನನ್ನು ಕಂಡು, ಅದು ತಾವು ಕೇಳಿದ/ನೋಡಿದ ಕತೆಗೆ ಹೋಲುವುದಿಲ್ಲವೆಂದು ನಿರ್ಧರಿಸಿ, ಅವನನ್ನು ಕಿತ್ತು ಬುದ್ಧನನ್ನು ಸೇರಿಸಿರಬೇಕು. ನಮಗೆ ಸಿಕ್ಕಿರುವ ಗ್ರಂಥಗಳೆಲ್ಲ ಈ ರೀತಿ ಡಕ್ಟರ್ಡ್ ಕಾಪೀಸ್ ಮಾತ್ರ. ಹಾಗಾಗಿ ಪುರಾಣಾದಿ ದಂತ ಕತೆಗಳಲ್ಲಿ ಬುದ್ಧನೇ ಇದ್ದು ಹಲಾಯುಧ ಮಾಯವಾಗಿದ್ದಾನೆ" ಎಂದು ಜೀತ್ ತರ್ಕ ಹೇಳಿದ.


"ವಾವ್!" ಎಂದು ಉದ್ಗಾರ ತೆಗೆಯುತ್ತ "ಹಾಗಿದ್ದರೆ ಪ್ರೊಫೆಸರ್ ನಾಗಾನಂದರ ಪ್ರೂಫ್ ಏನಿರಬಹುದು?" ಪೂಜ ಕೇಳಿದಳು


"ಪುರಾಣಗಳ, ಯಾ ಸಿಮಿಲರ್ ಸೋರ್ಸಸ್‌ಗಳ ಒಂದಾದಮೇಲೊಂದು ಕಾಪಿಗಳು -ವಿತ್ ಗ್ರ್ಯಾಜುಅಲ್ ಚೇಂಜಸ್. ಉದಾಹರಣೆಗೆ, ಯಾವುದೋ ಒಂದು ಪುರಾಣ ಅಂದುಕೊ. ಅದರ ಫಸ್ಟ್ ಕಾಪಿ, ಸೆಕೆಂಡ್ ಕಾಪಿ, ತರ್ಡ್ ಕಾಪಿ. ಮೊದಲನೆಯದರಲ್ಲಿ ಒರೀಜಿನಲ್ ಕತೆ -ಹಲಾಯುಧ. ಎರಡನೇ ಕಾಪಿಯಲ್ಲಿ ಕತೆ ಸ್ವಲ್ಪ ಬದಲು, ಫೈನಲಿ, ಮೂರನೆಯದರಲ್ಲಿ ಬುದ್ಧನ ಕತೆ. ನಾವು ಲಕಿಯಾಗಿದ್ದರೆ ಕಾಪಿ ಮಾಡಿದ ಪಂಡಿತರು ತಮ್ಮ ಅನಿಸಿಕೆ, ಕತೆ ಬದಲಾಯಿಸುವುದಕ್ಕೆ ಕಾರಣಾಂತರಗಳನ್ನೂ ಬರೆದಿರಬಹುದು. ಆ ರೀತಿ ಮ್ಯಾನುಸ್ಕ್ರ್‍ಇಪ್ಟ್ಸ್ ಸಿಕ್ಕಿದರೆ ಕನ್ಕ್ಲೂಸಿವ್ ಪ್ರೂಫ್ ಅನ್ನಬಹುದು" ಜೀತ್ ವಿವರಿಸಿದ.


"ಇದಕ್ಕೆ ಕನೆಕ್ಟೆಡ್ ಇನ್ನೊಂದು ಪ್ರಶ್ನೆ"


"ಕೇಳು"


"ಕೆಲವೊಮ್ಮೆ ಕೃಷ್ಣನ ಅಣ್ಣ ಬಲರಾಮ ಒಂದು ಅವತಾರವೆಂದು ಕೇಳಿದ್ದೇನೆ, ಅದರ ಎಕ್ಸ್‌ಪ್ಲನೇಶನ್ ಏನು?"


"ಇದು ವೈಷ್ಣವ/ಹರೆ ಕೃಷ್ಣ/ಇಸ್ಕಾನ್‌ನವರ ಇಂಟರ್‌ಪ್ರಿಟೇಶನ್. ಮಾಯವಾದ ಹಲಾಯುಧನ ಕತೆಗಳು ಬಲರಾಮನಿಗೆ ಕಟ್ಟಿದ್ದಿರಬೇಕು. ಆಗಲೇ ಎರಡು ಕತೆ ಹೇಳಿದೆನಲ್ಲ. ಇನ್ನೂ ಹಲವಾರಿವೆ. ಈ ಕತೆಗಳಿಂದಲೇ ಬಲರಾಮನಿಗೂ ನೇಗಿಲೇ ಅತೀ ಪ್ರಿಯ ಆಯುಧವೆಂಬ ಪ್ರತೀತಿ ಬಂದಿರಬೇಕು, ಅಷ್ಟೇ ಏಕೆ ಹಲಾಯುಧನೆಂಬ ನಾಮಾಂಕಣವೂ ಬಂದಿದೆ. ಆಕ್ಚುಅಲಿ, ಬಲರಾಮನ ಪ್ರಿಯ ಆಯುಧ ಗದೆ -ಭೀಮ, ದುರ್ಯೋಧನರಿಗೆ ಗುರು ಅಲ್ಲವೇ ಬಲರಾಮ?. ಅದು ಹಾಗಿರಲಿ, ಬಲರಾಮನು ಅವತಾರವೆನ್ನುವವರೂ ಬುದ್ಧ ಅವತಾರವಲ್ಲವೆಂದು ಗುರುತಿಸಿದ್ದಾರೆ. ಆದರೆ ಬುದ್ಧನನ್ನು ಕಿತ್ತು ಹಲಾಯುಧ -ಕನ್‌ಫ್ಯೂಸ್ಡ್ ವಿತ್ ಬಲರಾಮನನ್ನು -೯ನೇ ಅವತಾರ ಮಾಡಿದ್ದಾರೆ. ಇದೂ ಸರಿಯಲ್ಲವೆಂದು ಆಗಲೇ ಹೇಳಿದ್ದೇನೆ. ಸೋ, ಬಲರಾಮ ರಾಂಗ್, ಒಂಬತ್ತೆನೇ ಅವತಾರ ರಾಂಗ್" ಜೀತ್ ಸ್ಪಷ್ಟೀಕರಿಸಿದ


"ಫೈನಲಿ, ಜಸ್ಟ್ ಫಾರ್ ದ ಸೇಕ್ ಆಫ್ ಕಂಪ್ಲೀಟ್‌ನೆಸ್, ಈ ಚೇಂಜ್ ಯಾವ ಕಾಲದಲ್ಲಿ ಆಗಿರಬಹುದು?" ಪೂಜಾಳ ಕುತೂಹಲಕ್ಕೆ ಕೊನೆಯೇ ಕಾಣಿಸುತ್ತಿರಲಿಲ್ಲ.


"ಆಗಲೇ ಹೇಳಿದಂತೆ ವೆನ್ ಸಾಂಗ್ -ಹ್ಯೂಯನ್ ತ್ಸಾಂಗ್ ಅಲ್ಲ" ಎಂದು ನಕ್ಕು "ವೆನ್ ಸಾಂಗ್ ಎಲ್ಲೂ ಬುದ್ಧಾವತಾರದ ಬಗ್ಗೆ ಹೇಳಿಲ್ಲ. ಕಡಾಖಂಡಿತವಾಗಿ ೭೫೦ ಎ.ಡಿ.ಯಲ್ಲಿ ಈ ಕತೆ ಪ್ರತೀತಿಯಲ್ಲಿರಲಿಲ್ಲ. ಲೈಕ್‌ವೈಸ್, ಶಂಕರಾಚಾರ್ಯರ ಕಾಲದಲ್ಲೂ ಇದು ಪ್ರತೀತಿಯಲ್ಲಿರಲಿಲ್ಲ -ದಿಸ್ ವಾಸ್ ೮೨೦ ಎ.ಡಿ. ಒಟ್ಟಿನಲ್ಲಿ ಒರಿಯಾ ಕವಿ ಜಯದೇವನ ಪ್ರಸಿದ್ಧ ಸಂಸ್ಕೃತ ಕಾವ್ಯ 'ಗೀತ ಗೋವಿಂದ'ದಲ್ಲಿ ಬೌದ್ಧಾವತಾರ ಧೃಡವಾದಂತೆ ಕಾಣಿಸುತ್ತದೆ. ಆದರೂ, ೧೫ನೇ ಶತಮಾನದಲ್ಲೂ ಕನಿಷ್ಠ ದಕ್ಷಿಣದಲ್ಲಿ ಬೌದ್ಧಾವತಾರ ಪ್ರಚಲಿತವಾಗಿರಲಿಲ್ಲವೆಂದು ತೋರುತ್ತದೆ. ಫಾರ್ ಎಕ್ಸಾಂಪಲ್, ಹರಿದಾಸರು ದಶಾವತಾರ ಹಾಡೋವಾಗ 'ಬತ್ತಲೆ ನಿಂತವ, ಬೌದ್ಧಾವತಾರ' ಎಂದು ಹಾಡಿದ್ದಾರೆ. ಬುದ್ಧ ಎಂದೂ ಬತ್ತಲೆ ನಿಂತವನಲ್ಲವೇ ಅಲ್ಲ. ಬತ್ತಲೆ ನಿಂತವ ಜೈನ ತೀರ್ಥಂಕರ ಮಹಾವೀರ -ಜೈನ ದಿಗಂಬರರು. ಹರಿದಾಸರು ಪರೋಕ್ಷ ಜ್ಞಾನಿಗಳೆನಿಸಿದ್ದಾರೆ. ಬೇರೆ ಎಲ್ಲೂ ಇಂತಹ ತಪ್ಪು ಇಲ್ಲ. ಹಾಗಿದ್ದ ಮೇಲೆ ಅವತಾರ ಪುರುಷ ಬುದ್ಧನೋ ಅಥವ ಅವನಂತೆ ಮತ್ತೊಬ್ಬ ವ್ಯಕ್ತಿಯಾದ ಮಹಾವೀರನೋ ಎನ್ನುವ ಕನ್‌ಫ್ಯೂಶನ್ ಯಾಕೆ? ಒಂದೇ ಕಾರಣ -ದಕ್ಷಿಣದಲ್ಲಿ ೧೫ನೇ ಶತಮಾನದಲ್ಲೂ ಬೌದ್ಧಾವತಾರದ ಕತೆ ಇನ್ನೂ ಸಾಲಿಡ್ ಆಗಿರಲಿಲ್ಲ. ಅಂದರೆ -ಕ್ಲಿಯರ್ಲಿ -ಇದು ಸ್ವಲ್ಪ ಅಡ್‌ಜಸ್ಟ್ ಮಾಡಿರೋ ಕತೆ. ಇದಕ್ಕೆ ಇನ್ನೊಂದು ಆಧಾರ ಸೌತ್ ಇಂಡಿಯಾದ ೧೨ರಿಂದ ೧೫ನೇ ಶತಮಾನದ ದೇವಸ್ಥಾನಗಳಲ್ಲಿ ಕೆಲವೆಡೆ ಹಲಾಯುಧನಿದ್ದರೆ, ಇನ್ನು ಕೆಲವೆಡೆ ಬುದ್ಧನಿದ್ದಾನೆ" ಎಂದು ಜೀತ್ ಹೇಳಿದಾಗ ಪೂಜಾಳ ತಲೆ ಸುತ್ತುತ್ತಿತ್ತು.


ಸ್ವಲ್ಪ ಹೊತ್ತಿನ ಬಳಿಕ ದಿನಕರ ಎದ್ದು, ಮುಂದೆ ಬಂದು, ಡ್ರಿವ್ ಮಾಡ ತೊಡಗಿದ. ಜೀತ್ ಹಿಂದಿನ ಸೀಟಿಗೆ ಹೋಗಿ ಹಿಂದಕ್ಕೊರಗಿ ಕಣ್ಣುಮುಚ್ಚಿಕೊಂಡ. ಪೂಜಾ ಈಗ ದಿನಕರನನ್ನು ಕೇಳಿದಳು. "ನಿಮಗೆ ಈ ಕತೆ ಎಷ್ಟು ಗೊತ್ತಿತ್ತು, ಡಕ್ಟರ್?"


"ಹಿಂದೆ ಕೇಳಿದ್ದೆ. ನಾಗಾನಂದ ಆಗಾಗ ಹೇಳುತ್ತಿದ್ದ. ಆದರೆ ಇದು ಕೊಲೆ-ದರೋಡೆಗಳವರೆಗೆ ಹೋಗಬಹುದೆಂದು ಗೊತ್ತಿರಲಿಲ್ಲ" ದಿನಕರ ಹೇಳಿದ. "ನೀನಿನ್ನು ಮಲಗಿ ನಿದ್ದೆ ಮಾಡು. ಬೆಳಗ್ಗೆ ಎದ್ದು ಏನು ಕಾದಿದೆಯೋ".



*****




ಬೆಳಗ್ಗೆ ಸುಮಾರು ೯:೦೦ ಘಂಟೆಗೆ ಶೃಂಗೇರಿ ತಲುಪಿದರು. ಮಳೆಗಾಲವಾಗಿತ್ತು, ಹಾಗಾಗಿ ಊರಿನಲ್ಲಿ ಹೆಚ್ಚಾಗಿ ಯಾತ್ರಿಕರಿರಲಿಲ್ಲ. ಮಲೆನಾಡಿನ ಮಳೆ ಬೇರೆ. ಊರಿನ ಸಣ್ಣ ಸಣ್ಣ ರಸ್ತೆಗಳ ಮೇಲೆ ಕೊಚ್ಚೆ ನೀರು ನಿಂತಿತ್ತು. ನೇರವಾಗಿ ದೇವಸ್ಥಾನದ ಬೀದಿಗೆ ಹೋದರು. ದೇವಸ್ಥಾನದ ಮುಂಭಾಗದಲ್ಲಿ ಇರುವ ರಿಸೆಪ್ಶನ್/ಇನ್ಫರ್‌ಮೇಶನ್ ಕಛೇರಿಗೆ ಹೋಗಿ ವಿಚಾರಿಸಿದರು.


"ನಮಸ್ಕಾರ ಸಾರ್. ರೂಂ ಬೇಕಾ?" ಕುಳಿತಿದ್ದ ಗುಮಾಸ್ತ ಕೇಳಿದ


"ಬೇಡ ತ್ಯಾಂಕ್ಸ್" ಜೀತ್ ಉತ್ತರಿಸಿದ. "ನಮಗೆ ಶೃಂಗೇರಿಯಲ್ಲಿರುವ ಲೈಬ್ರರಿಗಳ ಬಗ್ಗೆ ಮಾಹಿತಿ ಬೇಕು"


"ಒಹ್?" ಗುಮಾಸ್ತ ಜೀತ್, ದಿನಕರ ಹಾಗು ಪೂಜಾರನ್ನು ವಿಚಿತ್ರವಾಗಿ ನೋಡಿದ. "ಶಾರದಾ ಪೀಠದ ಲೈಬ್ರರಿಗೆ 'ಸರಸ್ವತಿ ಭಂಡಾರ' ಎಂದು ಹೆಸರು. ಇದು ಚಿಕ್ಕಮಗಳೂರು ಜಿಲ್ಲೆಯಲ್ಲೇ ಏಕೆ, ಬಹುಶಃ ಇಡೀ ಕರ್ನಾಟಕದಲ್ಲೇ ಅತೀ ಹಳೆಯ ಲೈಬ್ರರಿ. ಪ್ರಾಚೀನ ಕಾಲದಿಂದ ಇಲ್ಲಿ ಧರ್ಮ, ವೇದಾಂತ, ಜ್ಯೋತಿಶ್ಯ ಶಾಸ್ತ್ರಗಳ ತಾಳೆಗರಿ ಪುಸ್ತಕಗಳಿದ್ದರೂ, ೧೪-೧೫ನೇ ಶತಮಾನದಲ್ಲಿ ನರಸಿಂಹ ಭಾರತಿ ಸ್ವಾಮಿಗಳು ಈ ಪುಸ್ತಕಗಳ ಮಹತ್ವವನ್ನರಿತು ಒಂದು ಪುಸ್ತಕ ಭಂಡಾರವನ್ನು ಸ್ಥಾಪಿಸಿದರು. ಆದರೆ.."


"ಏನು?"


"ಅಲ್ಲಿಗೆ ಹೋಗಲು ವಿಶೇಷ ಅನುಮತಿ ಪಡೆದುಕೋಳ್ಳಬೇಕು. ಇವತ್ತು ಆಗೋದಿಲ್ಲ"


"ನಾ.."


"ನಾನೊಬ್ಬ ರಿಪೋರ್ಟರ್" ಜೀತ್‌ಗೆ ಮಾತನಾಡಲು ಅವಕಾಶ ಕೊಡದೆ ಪೂಜಾ ಮುಂದೆ ಬಂದಳು. "ನನಗೆ ಪ್ರೆಸ್ ಆಕ್ಸೆಸ್ ಕ್ಲಿಯರೆನ್ಸ್ ಇದೆ. ಇಗೋ ನನ್ನ ಕಾರ್ಡ್. ಬೇಕಿದ್ದರೆ ನನ್ನ ಪೇಪರ್‌ಗೆ ಫೋನ್ ಮಾಡಿ ಕೇಳಿ"


"ನಂಗೊತ್ತಿಲ್ಲ..." ಸಂದೇಹದಿಂದ ತಲೆಕೆರೆಯುತ್ತ ಹೇಳಿದ ಗುಮಾಸ್ಥ "ನೀವು ಲೈಬ್ರರಿಯನ್‌ನೇ ಕೇಳಬೇಕು. ಪಕ್ಕದ ಗೇಟ್ ಒಳಗಿಂದ ಹೋಗಿ. ಶಾರದಾ ದೇವಸ್ಥಾನದ ಎರಡನೇ ಮಹಡಿ ಮೇಲೆ ಲೈಬ್ರರಿ ಇದೆ"


ದೇವಸ್ಥಾನದ ಹೆಬ್ಬಾಗಿಲಿನಿಂದ ಹಾಯ್ದು ಲೈಬ್ರರಿ ತಲುಪಿದರು. ಪೂಜಾಳ ಪ್ರೆಸ್ ಕ್ಲಿಯರನ್ಸ್ ಮಾಟದಂತೆ ಕೆಲಸ ಮಾಡಿತು. ಮೂವರೂ ಮಂದಿ ಕ್ಯಾಟಲಾಗ್ ಹಿಡಿದು ಕಾಲ್-ನಂಬರ್‌ಗಳನ್ನು ನೋಡತೊಡಗಿದರು.


ಮಧ್ಯಾಹ್ನ ಊಟದ ಸಮಯವಾಯಿತು. ನಾಗಾನಂದ ಬರೆದಿದ್ದ ಕಾಲ್-ನಂಬರ್ ಎಲ್ಲೂ ಕಾಣಿಸಲಿಲ್ಲ. ಕೊನೆಗೆ, ಜೀತ್ ಸೋತು ಕೈಬಿಟ್ಟ. "ಇಲ್ಲ. ಇಲ್ಲಂತೂ ಇಲ್ಲ. ನಾನೊಮ್ಮೆ ಹೋಗಿ ನಮ್ಮ ಬಂಧಿ ಹೇಗಿದ್ದಾನೆ ನೋಡಿ ಬರುತ್ತೇನೆ. ಹಿಂದೆ ಹಾಕಿ 'ಅಲುಗಾಡಿದರೆ ನನ್ನ ಮನೆಗೆ ನುಗ್ಗಿದ ದರೋಡೇಕೋರನೆಂದು ಪೋಲೀಸರಿಗೊಪ್ಪಿಸುವೆ' ಎಂದು ಹೇಳಿ ಬಂದಿದ್ದೆ. ಅವನಿಗೇನು ಬೇಕೋ ನೋಡಿಬರ್ತೀನಿ"


ಕೆಲವು ನಿಮಿಷಗಳ ನಂತರ ದಿನಕರ, ಪೂಜಾ ಇಬ್ಬರೂ ದೂರ, ಜನಸಂಚಾರವಿಲ್ಲದ ಸ್ಥಳದಲ್ಲಿ ನಿಲ್ಲಿಸಿದ್ದ ಜೀತ್ ಕಾರ್ ಕಡೆ ಹೊರಟರು. ಅಲ್ಲಿ ನೋಡಿದರೆ ಭಿಕ್ಕು ಹೇಗೋ ತಪ್ಪಿಸಿಕೊಂಡು ರಿವಾಲ್ವರ್‌ವೊಂದನ್ನು ಜೀತ್ ತಲೆಗೆ ಹಿಡಿದು ನಿಂತಿದ್ದಾನೆ.


"ಪ್ರೊಫೆಸರ್ ನಾಗಾನಂದ್ ಬರೆದಿಟ್ಟ ಚೀಟಿ ನನ್ನ ಕೈಗೆ ಕೊಟ್ಟುಬಿಡಿ. ಇಲ್ಲವೇ..." ಎನ್ನುತ್ತ ಜೀತ್ ತಲೆಗೆ ರಿವಾಲ್ವರ್ ಒತ್ತಿದ.


ದಿನಕರನಿಗೆ ಬೇರೆ ದಾರಿ ಕಾಣಲಿಲ್ಲ. ಚೀಟಿಯನ್ನು ಭಿಕ್ಕುವಿನ ಕೈಗೆ ಕೊಟ್ಟ ನಂತರ ಭಿಕ್ಕು ಗನ್‌ನಿಂದ ಜೀತ್ ತಲೆ ಚೆಚ್ಚಿದ. ಜೀತ್‌ನ ಕಣ್ಣುಗಳು ಮುಚ್ಚಿದವು. ಜೀತ್‌ನನ್ನು ಅವನ ಕಾರಿನ ಡಿಕ್ಕಿಯಲ್ಲೇ ಹಾಕಿ ಮುಚ್ಚಿದ.


"ಈತನನ್ನು ಕಿಡ್ನಾಪ್ ಮಾಡುತ್ತಿರುವೆ -ಚೀಟಿ ಓದಲು ಇವನ ಸಹಾಯ ಬೇಕಾಗಬಹುದು. ಇನ್ನು ನೀವಿಬ್ಬರು -ಸಾರಿ" ಎಂದು ಗುಂಡು ಹಾರಿಸಲು ರಿವಾಲ್ವರ್ ಎತ್ತಿದ. ಆ ಹೊತ್ತಿಗೆ ಸರಿಯಾಗಿ ಮೇಲೆ ಹಾರುತ್ತಿದ್ದ ಪಾರಿವಾಳವೊಂದು ಭಿಕ್ಕುವಿನ ಕೈಮೇಲೆ ಹಿಕ್ಕೆ ಹಾಕಿತು. ಅವನ ಗಮನ ತಿರುಗಿದ್ದನ್ನು ನೋಡಿ ದಿನಕರ, ಪೂಜಾ ಅಲ್ಲಿಂದ ಓಡಿದರು. ಭಿಕ್ಕು ಏನಾಗುತ್ತಿದೆ ಎಂದು ಅರ್ಥ ಮಾಡಿಕೊಂಡು ರಿವಾಲ್ವರ್‌ನಿಂದ ಗುಂಡು ಹಾರಿಸುವಷ್ಟು ಹೊತ್ತಿಗೆ ಇಬ್ಬರೂ ಜನ ಸಂಚಾರವಿರುವ ಕಡೆಗೆ ಓಡತೊಡಗಿದರು.


ಕೆಲ ನಿಮಿಶಗಳ ನಂತರ ಏದುಸಿರು ಎಳೆಯುತ್ತ ದಿನಕರ, ಪೂಜಾ ದಣಿವಾರಿಸಿಕೊಳ್ಳಲು ನಿಂತರು. ಭಿಕ್ಕು ಅವರನ್ನು ಹಿಂಬಾಲಿಸುತ್ತಿಲ್ಲವೆಂಬುದು ಖಚಿತವಾಗಿತ್ತು. ಹೊಟ್ಟೆ ತುಂಬಿಸಿಕೊಳ್ಳಲು ಹತ್ತಿರವಿದ್ದ ರೆಸ್ಟೋರಾಂಟ್‌ಗೆ ಹೋದರು.


"ಈಗೇನು?" ಪೂಜಾ ಕೇಳಿದಳು.


"ಜೀತ್ ಜೀವಕ್ಕೇನೂ ಅಪಾಯವಿಲ್ಲ. ಆ ಒಗಟು ಬಿಡಿಸುವವರೆಗೂ ಅವರಿಗೆ ಜೀತ್ ಬೇಕು" ದಿನಕರ ಉತ್ತರಿಸಿದ.


"ಬಿಡಿಸಿಯಾದಮೇಲೆ?"


"ನಾವು ಅವರಿಗಿಂತ ಮುಂಚೆ ಆ ಒಗಟು ಬಿಡಿಸೋಣ" ಎನ್ನುತ್ತ ತನ್ನ ಫೋನ್ ಹೊರತೆಗೆದ.


"ಏನು ಮಾಡುತ್ತಿದ್ದೀರ?"


"ಶಾರದೆ ಹೆಸರುಳ್ಳ ಲೈಬ್ರರಿ ಬೇರೆಲ್ಲಿ ಇದೆ ಗೂಗಲಿಸುತ್ತಿದ್ದೀನಿ -ನನ್ನ ಫೋನ್‌ನಲ್ಲಿ ಇಂಟರ್‌ನೆಟ್ ಇದೆ... ಅರೆರೆ ಇದೇನು ನನ್ನ ಇಮೈಲ್ ಡೌನ್ ಆಗಿದೆಯೇ?" ಎರಡು ನಿಮಿಷಗಳು ನೋಡಿ "ಚೇ! ಇಷ್ಟು ದೂರ ಬಂದಿದ್ದು ದಂಡವಾಯಿತೇ? ನನಗೇಕೆ ಇದು ಮೊದಲೇ ಹೊಳೆಯಲಿಲ್ಲ?" ಎನ್ನುತ್ತ ಟೇಬಲ್ ಮೇಲೆ ಸ್ವಲ್ಪ ಹಣ ಹಾಕಿ ತರಿಸಿದ್ದ ತಿಂಡಿ ಹಾಗೇ ಬಿಟ್ಟು ಓಡಿ ಹೊರಟ.


"ಡಕ್ಟರ್? ಏನ್..?" ಪೂಜಾಳೂ ಅವನ ಹಿಂದೆಯೇ ಹೊರಟಳು.


ಮಧ್ಯಾಹ್ನ ಸಮಯ ೨:೦೦ ಘಂಟೆಯಾಗಿತ್ತು. ದಿನಕರ ನೇರವಾಗಿ ಟ್ಯಾಕ್ಸಿ ಬಾಡಿಗೆಗೆ ಸಿಗುವಲ್ಲಿಗೆ ನುಗ್ಗಿದ. ಕೆಲವೇ ನಿಮಿಷಗಳಲ್ಲಿ ಹೊರಬಂದು ಪೂಜಾಳ ಮೊಣಕೈ ಹಿಡಿದು ಅವಳನ್ನು ಟ್ಯಾಕ್ಸಿಯೊಂದಕ್ಕೆ ತಳ್ಳಿ ತಾನೂ ಹತ್ತಿದ. "ನಡೆಯಪ್ಪ" ಡ್ರೈವರ್‌ಗೆ ಹೇಳಿದ.


"ಏನಾಗುತ್ತಿದೆ ಹೇಳುತ್ತೀರ, ಡಾಕ್ಟರ್?" ಪೂಜಾ ಕೇಳಿದಾಗ ದಿನಕರ ತನ್ನ ಫೋನ್ ಎತ್ತಿ ಹಿಡಿದ.


"ಸರಸ್ವತಿ ಮಹಲ್ ಲೈಬ್ರರಿ, ತಂಜಾವುರ್" ಪೂಜಾ ಓದಿದಳು.



*****



ಸರ್ಫೋಜಿ ಸರಸ್ವತಿ ಮಹಲ್ ಲೈಬ್ರರಿ ತಂಜಾವೂರಿನ ಅರಮನೆ ಆವರಣದಲ್ಲಿದೆ. ದುರ್ಲಭ ಪ್ರಾಚೀನ ಗ್ರಂಥಗಳ ಭಂಡಾರಗಳಲ್ಲಿ ಇದೊಂದು. ತಂಜಾವೂರಿನ ತೆಲುಗು ನಾಯಕ ವಂಶದ ಮಹಾರಾಜರ ಕಾಲದಲ್ಲಿ (೧೬-೧೭ನೇ ಶತಮಾನ) ಇದು ಸರಸ್ವತಿ ಭಂಡಾರವೆಂಬ ಹೆಸರಿನಿಂದ ಪ್ರಾರಂಭವಾಯಿತು. ಮರಾಠರು ತಂಜಾವೂರನ್ನು ಸ್ವಾಧೀನ ಮಾಡಿಕೊಂಡ ನಂತರ ಸರಸ್ವತಿ ಭಂಡಾರವೂ ಅವರ ಅಧೀನಕ್ಕೆ ಬಂದಿತು. ಮರಾಠಾ ಮಹಾರಾಜ ಸರ್ಫೋಜಿ ೧೮೨೦ರಲ್ಲಿ ಕಾಶಿಗೆ ಯಾತ್ರೆ ಮಾಡಿದಾಗ ಈ ಭಂಡಾರಕ್ಕೆ ಬಹಳಷ್ಟು ಗ್ರಂಥಗಳ ಸೇರ್ಪಡೆಯಾಯಿತು. ಇದಾದ ನಂತರವೇ ಸರ್ಫೋಜೆಯ ಹೆಸರು ಈ ಗ್ರಂಥ ಭಂಡಾರಕ್ಕೆ ಸೇರಿಕೊಂಡಿತು. ಕನಿಷ್ಠ ಹನ್ನೊಂದು ಲಿಪಿಗಳಲ್ಲಿ, ೩೦೦೦೦ಕ್ಕೂ ಹೆಚ್ಚು ತಾಳೇಗರಿ, ತಾಮ್ರ ಹಾಗು ಕಾಗದದ ಮೇಲಿನ ಹಸ್ತಪ್ರತಿಗಳಿವೆ. ಸಂಸ್ಕೃತವೊಂದೇ ಅಲ್ಲದೆ ಕನ್ನಡ, ತಮಿಳು, ತೆಲುಗು, ಮರಾಠಿ ಭಾಷೆಗಳ ಪುಸ್ತಕಗಳು ಇಲ್ಲಿ ಲಭ್ಯವಿದೆ.


ದಿನಕರ, ಪೂಜಾ ಟ್ಯಾಕ್ಸಿಯನ್ನು ನೇರವಾಗಿ ತಂಜಾವೂರಿನ ಅರಮನೆ ಆವರಣದಲ್ಲಿ ತಂದು ನಿಲ್ಲಿಸಿದರು. ಆವರಣದಲ್ಲಿ ಲೈಬ್ರರಿ ಹುಡಿಕಿ, ಒಳಗೆ ಹೋದರು. ತಮ್ಮ ಬಳಿ ಇದ್ದ ಕಾಲ್-ನಂಬರ್ ವಿಚಾರವಾಗಿ ಕೇಳಿದ ನಂತರ, ಅಲ್ಲಿದ್ದ ಗುಮಾಸ್ತ ಅವರನ್ನು ಲೈಬ್ರರಿಯ ವಿಶಯಪಟ್ಟಿಯ ಕಡೆ ತಿರುಗಿಸಿದ.


"ಯಾವ ಸೆಕ್ಷನ್‌ನಲ್ಲಿ ಇರಬಹುದು, ಡಾಕ್ಟರ್? ವೇದ-ಸಂಹಿತ, ವೇದ-ಬ್ರಹ್ಮಣ, ಉಪನಿಷತ್ತು, ವೇದಾಂಗ, ಭಾಷ್ಯ-ಪ್ರಯೋಗ, ಧರ್ಮಶಾಸ್ತ್ರ, ಇತಿಹಾಸ, ಪುರಾಣ -ಈ ಎಲ್ಲ ಸೆಕ್ಷನ್‌ಗಳಿವೆ" ಪೂಜಾ ಹೇಳಿದಳು.


"ಪುರಾಣ. ಡಿಸೈಡೆಡ್ಲಿ ಪುರಾಣ. ಜೀತ್ ಪುರಾಣಗಳಲ್ಲೇ ಇರುವ ಚಾನ್ಸ್ ಹೆಚ್ಚು ಎಂದು ಹೇಳಿದ್ದ" ದಿನಕರ ಹೇಳಿದ.


ಸುಮಾರು ಹೊತ್ತು ಇಬ್ಬರೂ ಕ್ಯಾಟಲಾಗ್ ನೋಡುತ್ತಿದ್ದರು. ಕೊನೆಗೊಮ್ಮೆ "ಗಾಟ್ ಇಟ್" ಪೂಜಾ ಉಲ್ಲಾಸದಿಂದ ಕೂಗಿದಳು. "ಇಲ್ಲಿದೆ ನೋಡಿ -'ಅಗ್ನಿಪುರಾಣ', ೧೨ನೇ ಶತಮಾನ, ತಾಳೆಗರಿ ಪತ್ರ, ಕಲ್ಪ-ಪುರಾಣ ಸೆಕ್ಷನ್, ಮಹಾಪುರಾಣ ಸಬ್-ಸೆಕ್ಷನ್. ರೋ-ನಂಬರ್ ೮೭, ಶೆಲ್ಫ್-ನಾಂಬರ್ ೧೧, ರೆಫರೆನ್ಸ್ ಓನ್ಲಿ"


ಇಬ್ಬರೂ ೮೭ನೇ ಸಾಲನ್ನು ಹುಡುಕಿಕೊಂಡು ಹೊರಟರು. "'ರೆಫರೆನ್ಸ್ ಓನ್ಲಿ' ಎಂದರೆ ಪುಸ್ತಕ ಲೈಬ್ರರಿಯಿಂದ ಹೊರತೆಗೆಯುವ ಹಾಗಿಲ್ಲ. ಇಲ್ಲೇ ಆ ಪುಸ್ತಕ ಸುರಕ್ಷಿತವಾಗಿರುತ್ತೆ" ದಿನಕರ ತನ್ನ ಆಲೋಚನೆ ಹೇಳಿದ.


"ಆದರೆ ಆವತಂಶಕದ ನಿಲಿಕು ನೋಡಿದರೆ ಇದೂ ಸೇಫ್‌ಆಗಿರದಿರಬಹುದು. ಇಲ್ಲಿಂದಲೂ ಅದನ್ನು ಮಾಯ ಮಾಡಿದರೆ..." ಪೂಜಾ ತಿಳಿಸಿದಳು.


"ಹಾಗಿದ್ದರೆ ನಮಗೊಂದೇ ದಾರಿ. ಆ ಪುಸ್ತಕ ನಾವೇ ಕದಿಯಬೇಕು"


"ಹೂಂ..." ಪೂಜಾ ಆಶ್ಚರ್ಯವೇನೂ ವ್ಯಕ್ತ ಪಡಿಸಲಿಲ್ಲ.


ಪ್ರಸ್ತುತ ಅಗ್ನಿಪುರಾಣವಿದ್ದ ಸಾಲಿಗೆ ಹೋಗಿ ಅದನ್ನು ಹುಡುಕಿ ಕೈಗೆತ್ತಿಕೊಂಡರು.


"ಇಲ್ಲಿ ಕೊಡಿ ಅದನ್ನು" ಹಿಂದಿನಿಂದ ಪರಿಚಿತ ಧ್ವನಿ ಬಂತು


"ಜೀತ್? ನೀನು? ಆ ಭಿಕ್ಕು? ಹೇಗೆ..." ದಿನಕರ ಅಸಂಬದ್ಧಪ್ರಲಾಪ ಮಾಡಿದ


"ಅವನೇ? ಅವನಿಗೆ... ನನ್ನ ರಿವಾಲ್ವರ್ ಬುಲೆಟ್ಟಿನ ಜೊತೆ ಭೇಟಿ ಮಾಡುವುದಿತ್ತು"


"ನಾ...ಹಾ.." ಅತ್ತ ಜೀತ್ ತಪ್ಪಿಸಿಕೊಂಡನೆಂದು ಹರ್ಷವಾದರೆ ಇತ್ತ ತನಗೆ ಬಂದೂಕು ತೋರಿಸುತ್ತಿದ್ದಾನೆಂಬ ಆತಂಕ ದಿನಕರನಿಗೆ.


"ನನಗೆ ಅವನೊಬ್ಬ ಕೈಗೊಂಬೆಯಷ್ಟೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೀಬೇಕು ಅನ್ನೋಹಾಗೆ ನೀನು ಕೈಯಲ್ಲಿ ಹಿಡಿದಿರೋ ಸತ್ಯ ಹೊರತೆಗೆಯೋದಕ್ಕೆ ಅವನನ್ನು ಅವನ ಸಂಘವನ್ನೇ ಉಪಯೋಗಿಸಿಕೊಂಡೆ ಅಷ್ಟೆ" ಜೀತ್ ಹೇಳಿದ.


ಧಗ್ಗನೆ ದಿನಕರನಿಗೆ ಇದರ ಪರಮಾರ್ಥ ತಿಳಿಯಿತು. "ಹಾಗಾದರೆ... ನಾಗಾನಂದ?"


"ಆಕ್ಸಿಡೆಂಟ್... ಬಟ್ ವೆಲ್ ಡಿಸರ್ವ್ಡ್. ಆ ಆವತಂಶಕ ಸಂಘದವರು ಅವನನ್ನು ಹೆದರಿಸಿ, ಬೆದರಿಸಿ ಈ ಪ್ರೂಫ್ ಪಬ್ಲಿಶ್ ಮಾಡಬೇಡವೆಂದು ಹೇಳಿದರೆ ಇವನು ಮಹಾಧೀರ, ಕೇಳಿಕೊಂಡು, ಬಾಲ ಮುದುರಿಕೊಂಡು ಸುಮ್ಮನಿದ್ದ" ಜೀತ್ ಕೋಪದಿಂದ ಹೇಳಿದ.


"ಆಕ್ಸಿಡೆಂಟ್?" ದಿನಕರನ ದಿಗಿಲು ಗೋಚರವಾಗಿತ್ತು.


"ಯಾಹ್! ಆ ಮುಠ್ಠಾಳ ಭಿಕ್ಕು ಕೆಲಸ. ಪ್ರೂಫ್ ಕೇಳಕ್ಕೆ ಹೋದಾಗ ಆ ಪುಸುಕಲ ನಾಗಾನಂದ ಗನ್ ತೋರಿಸಿದನಂತೆ. ಹೆದರಿ ಇವನು ಶೂಟ್ ಮಾಡಿದನಂತೆ. ಇನ್ಕಾಂಪಿಟೆಂಟ್ ಫೂಲ್! ನಾಗಾನಂದ ಸತ್ತ ಮೇಲೆ ಆ ಪ್ರೂಫ್ ಕೂಡ ಸತ್ತು ಹೋಯಿತೆಂದುಕೊಂಡಿದ್ದೆ. ಆಗ ತಂಗಾಳಿ ಬಂದ ಹಾಗೆನೀವಿಬ್ಬರೂ ನೀವಾಗಿಯೇ ನನ್ನ ಬಳಿ ಬಂದಿರಿ. ನಾವು ಮಾತನಾಡುತ್ತಿದ್ದಾಗ ಬಂದ ಫೋನ್ ನೆನಪಿದೆಯಾ? ಭಿಕ್ಕುವನ್ನು ಮನೆಯೊಳಗೆ ಬರಹೇಳಿ ನಾಗಾನಂದನ ಒಗಟಿನ ಚೀಟಿ ಕಸಿದುಕೊಳ್ಳುವ ಪ್ರಯತ್ನ ಮಾಡಿದ್ದು ನಾನೇ, ನಿನ್ನ ಇನ್ಸ್‌ಪೆಕ್ಟರ್ ಅಲ್ಲ" ಪೂಜಾಳ ಕಡೆ ನೋಡುತ್ತ "ನಿನ್ನ ಕೈಚಳಕದಿಂದ ಅಲ್ಲೂ ಫೇಲ್ ಆದ. ನಂತರ ಅವನನ್ನು ಪೋಲೀಸರಿಗೆ ಒಪ್ಪಿಸದೆ ನಮ್ಮ ಜೊತೆಯೇ ಕರೆದೊಯ್ಯುವ ಹಾಗೆ ಮ್ಯಾನಿಪ್ಯುಲೇಟ್ ಮಾಡಿದೆ. ನಂತರ ಶೃಂಗೇರಿಯಲ್ಲಿ ಹುಡುಕಾಟ ಫೇಲ್ ಆದ ತಕ್ಷಣ ನನಗೆ ನಾಗಾನಂದನ ಶಾರದಾ ಪೀಠ ಇದೆಂದು ಅರ್ಥವಾಯಿತು. ಅವನ ಕಟ್ಟು ಬಿಚ್ಚಿ ಬಂಧನದಿಂದ ಬಿಡಿಸಿ ನನ್ನನ್ನು 'ಕಿಡ್ನಾಪ್' ಮಾಡಿ ನಿಮ್ಮಿಬ್ಬರನ್ನು ಮುಗಿಸಲು ಹೇಳಿದೆ. ನೀವಿಬ್ಬರೂ ತಪ್ಪಿಸಿಕೊಂಡಿರಿ, ಮತ್ತೆ ವಿಫಲನಾದ. ಸರಿ ಶೃಂಗೇರಿಯಿಂದ ಇಲ್ಲಿಗೆ ರವಾನೆಯಾದಮೇಲೆ ದಾರಿಯಲ್ಲಿ ಅವನನ್ನು ಮುಗಿಸಿದೆ. ನಂತರ ಇಲ್ಲಿಗೆ ಬಂದರೆ ನೀವಿಬ್ಬರೂ ಇಲ್ಲೇ ಸಿಕ್ಕಿದ್ದಿರಿ"


"ಹಾಗಾದರೆ...ಹಾಗಾದರೆ... ಆವತಂಶಕ?" ಪೂಜಾ ಕೇಳಿದಳು


"ಓಹ್! ಆ ಭಿಕ್ಕು ನಿಜವಾಗಿ ಆವತಂಶಕದವನೇ. ನಾಗಾನಂದನ ಪ್ರೂಫ್ ಹೊರತರುವ ಸಲುವಾಗಿ ನಾನು ಅನಾನಿಮಸ್‌ಆಗಿ ಆವತಂಶಕದೊಂದಿಗೆ ಸಂಪರ್ಕ ಮಾಡಿ ಪ್ರೂಫ್‌ಗಳನ್ನು ನಾಶ ಮಾಡದಿದ್ದರೆ ಅವರಿಗೆ ಉಳಿಗಾಲವಿಲ್ಲವೆನ್ನುವುದನ್ನು ತೋರಿಸಿದೆ. ಅವರು ನಾನು ತೋಡಿದ ಹಳ್ಳಕ್ಕೆ ಬಿದ್ದರು -ನಾಗಾನಂದನಿಂದ ಆ ಪ್ರೂಫ್‌ಗಳನ್ನು ಪಡೆಯುವದಕ್ಕಾಗಿ ಅವರ ಆ ಭಿಕ್ಕುವನ್ನು ನನ್ನ ನಿಗ್ರಹಕ್ಕೆ ಒಪ್ಪಿಸಿದರು. ಆ ಭಿಕ್ಕು ನಾನು ಹೇಳಿದಂತೆ ಆಡುತ್ತಿದ್ದ" ಜೀತ್ ವಿಶದಪಡಿಸಿದ. "ಪ್ರೂಫ್ ಕೈಗೆ ಸಿಕ್ಕಮೇಲೆ ಆ ಭಿಕ್ಕು ಅವನ್ನು ನನಗೆ ತಲುಪಿಸುವವನಿದ್ದ. ನಂತರ ನಾನು ಆವತಂಶಕದವರನ್ನೂ ಡಬಲ್-ಕ್ರಾಸ್ ಮಾಡುವವನಿದ್ದೆ. ಆ ಪ್ರೂಫ್‌ಗಳನ್ನು ಪಬ್ಲಿಶ್ ಮಾಡಿ, ಬುದ್ಧಾವತಾರದ ಸುಳ್ಳನ್ನು ಜಗತ್ತಿನ ಮುಂದೆ ಇಡುವುದೇ ನನ್ನ ಧ್ಯೇಯ"


"ಪೋಲೀಸ್! ಗನ್ ಕೆಳಗೆ ಬಿಸಾಡಿ!" ಹಿಂದಿನಿಂದ ಕೂಗು ಬಂತು.


ಜೀತ್ ದಿಕ್ಕಾಪಾಲಾಗಿ ಅತ್ತಿತ್ತ ನೋಡಹತ್ತಿದ.


"ಬಿಸಾಡಿ! ಈಗ!" ಪುನಃ ಕರೆ ಬಂತು. ಹತ್ತಾರು ಮಂದಿ ಪೋಲೀಸರು ನುಗ್ಗಿ ಜೀತ್, ಪೂಜಾ, ದಿನಕರರನ್ನು ಸುತ್ತುವರಿದು ನಿಂತರು.


"ಆತ! ಅವನನ್ನು ಅರೆಸ್ಟ್ ಮಾಡಿ" ಜೀತ್‌ನನ್ನು ತೋರಿಸಿ ಇನ್ಸ್ಪೆಕ್ಟರ್ ಬ್ರಹ್ಮಾವರ್ ಮುಂಬರುತ್ತ ಹೇಳಿದ. ದಿನಕರನ ಕಡೆ ತಿರುಗಿ. "ಐ ಆಮ್ ಸಾರಿ ಮಿ. ದಿನಕರ್. ನಿಮಗೆ ತೊಂದರೆ ಕೊಡಬೇಕಾಯಿತು. ಕ್ಷಮಿಸಿ" ಎಂದ. ನಂತರ ಜೀತ್‌ನನ್ನು ನೋಡಿಕೊಂಡು "ಮಿ. ಜೀತೇಂದ್ರ, ನಿಮ್ಮ ಆ ಭಿಕ್ಕು-ವೇಷಧಾರಿಯನ್ನು ನೀವು ಬಳುವಳಿಯಾಗಿ ಕೊಟ್ಟ ಗುಂಡು ಕೊಲ್ಲಲಿಲ್ಲ. ಈಗ ನಮ್ಮ ನಿಗ್ರಹದಲ್ಲಿದ್ದಾನೆ; ಕೋಗಿಲೆಯಂತೆ ಹಾಡುತ್ತಿದ್ದಾನೆ. ನಿಮ್ಮ ಸಂಪೂರ್ಣ ಜಾತಕವನ್ನು ಆಗಲೇ ಒದರಿದ್ದಾನೆ. ನಿಮ್ಮನ್ನು ಕೊಲೆ ಆಪಾದನೆ ಮೇಲೆ ಅರೆಸ್ಟ್ ಮಾಡಲಾಗುತ್ತಿದೆ" ಎಂದ. "ಕರೆದೊಯ್ಯಿರಿ ಇವನನ್ನು" ಉಳಿದ ಪೋಲೀಸರಿಗೆ ಹೇಳಿದ.


"ಆವತಂಶಕ..." ದಿನಕರ ಇನ್ಸ್‌ಪೆಕ್ಟರ್ ಬೆರಳಿನಲ್ಲಿದ್ದ ಉಂಗುರ ನೋಡುತ್ತ ಉಸುರಿದ.


"ನೋ ಮಿ. ದಿನಕರ್" ಇನ್ಸ್‌ಪೆಕ್ಟರ್ ಮೆಲ್ಲಗೆ ದಿನಕರನಿಗೆ ಹೇಳಿದ. "ನನ್ನ ನಿಷ್ಠೆ ನನ್ನ ಕರ್ತವ್ಯದಲ್ಲಿ. ಕೊಲೆಗಾರನನ್ನು ಪತ್ತೆಹಚ್ಚುವುದು ನನ್ನ ಗುರಿಯಾಗಿತ್ತು. ಯು ಆರ್ ಫ್ರೀ"


ಗಡಿಬಿಡಿಯಲ್ಲಿ ದಿನಕರ ಮತ್ತು ಪೂಜ ಕೈಯಲ್ಲಿದ್ದ ಅಗ್ನಿಪುರಾಣವನ್ನು ಲೈಬ್ರರಿಯಿಂದ 'ಬಾಡಿಗೆ' ತೆಗೆದುಕೊಂಡು ಹೊರಬಿದ್ದರು.



*****



ಮಾರನೆಯ ದಿನ ಸಂಜೆ ರೆಸ್ಟೋರಾಂಟ್‌ನಲ್ಲಿ ಕುಳಿತು ದಿನಕರ ಹಾಗು ಪೂಜಾ ಡಿನ್ನರ್ ಮಾಡುತ್ತಿದ್ದರು.


"ಆ ಅಗ್ನಿಪುರಾಣದಲ್ಲಿ ಜೀತ್ ಹುಡುಕುತ್ತಿದ್ದ ಎಲ್ಲ ಪ್ರೂಫ್‌ಗಳೂ ಇವೆ. ಹಸ್ತಪ್ರತಿ ಮಾಡುವವ ಇನ್ನೂ ಹಿಂದಿನ ಕಾಲದ ಗ್ರಂಥವನ್ನು ಆಧಾರ ಮಾಡಿಕೊಂಡು ಬರೆದಿದ್ದಾನೆ. ಅದರಲ್ಲಿ ಹಲಾಯುಧ ಇರುವುದು, ತಾನು ತಿಳಿದಿರುವ ಬುದ್ಧನನ್ನು ಅದಲಿ ಬದಲಿ ಮಾಡುತ್ತಿರುವುದು ಎಲ್ಲವೂ ವಿಸ್ತಾರವಾಗಿ ಬರೆದಿದ್ದಾನೆ" ದಿನಕರ ಪೂಜಾಳಿಗೆ ಹೇಳುತ್ತಿದ್ದ. ಸ್ವಲ್ಪ ಮೌನದ ನಂತರ "ಬುದ್ಧ ವಾಸ್ ಎ ಗ್ರೇಟ್ ಮ್ಯಾನ್ ವಿಥೌಟ್ ಬೀಇಂಗ್ ಆನ್ ಅವತಾರ... ಅಂದಹಾಗೆ, ಎರಡನೇ ಕ್ಲೂ ಭದ್ರಕಾಳಿಯ ತವರೂರು, ಕೊಲ್ಕತ್ತಾ"


"ಓಹ್, ವಾವ್!" ಪೂಜಾಳ ಉದ್ಗಾರ.


"ಅಷ್ಟೇ ಅಲ್ಲ, ನನ್ನ ಈಮೈಲ್ ಪುನಃ ಅಪ್ ಆಗಿದೆ. ನಾಗಾನಂದ ತನ್ನ ರೆಸರ್ಚ್ ಮೆಟೀರಿಯಲ್ ಅಟ್ಯಾಚ್‌ಮೆಂಟ್‌ಆಗಿ ನನಗೆ ಈಮೈಲ್ ಕಳಿಸಿದ್ದಾನೆ. ಆದರಲ್ಲಿ ಇನ್ನೂ ಹಲವಾರು ಇದೇ ರೀತಿ ವಿವರಗಳಿವೆ. ಒಟ್ಟಿನಲ್ಲಿ ಜೀತ್ ಹೇಳುತ್ತಿದ್ದ, ಮುಖ್ಯವಾಗಿ ನನ್ನ ಮಿತ್ರ ನಾಗಾನಂದ ರಿಸರ್ಚ್ ಮಾಡುತ್ತಿದ್ದ ಹಲಾಯುಧನೇ ಮೂಲ ಅವತಾರ, ಬುದ್ಧ ನಂತರ ಸೇರಿಸಿದ ಅವತಾರವೆಂದು ಕನ್‌ಕ್ಲೂಸಿವ್‌ಆಗಿ ಪ್ರೂವ್ ಮಾಡುತ್ತದೆ" ದಿನಕರ ಮುಂದುವರೆಸಿದ.


"ಮುಂದೇನು, ಡಾಕ್ಟರ್? ನೀವು ಇದನ್ನು ಪಬ್ಲಿಶ್ ಮಾಡುವಿರಾ?" ಪೂಜಾ ಕೇಳಿದಳು. ನಾಗಾನಂದ ತಲೆಯಾಡಿಸಿದಾಗ "ಮತ್ತೆ ಆವತಂಶಕ?"


"ಆವತಂಶಕ ಬಿ ಡ್ಯಾಮ್ಡ್. ನನ್ನ ಮಿತ್ರ ನಾಗಾನಂದನಿಗೆ ಶ್ರದ್ಧಾಂಜಲಿಯಾಗಿ ಈ ಪುಸ್ತಕ ಖಂಡಿತವಾಗಿ ಪಬ್ಲಿಶ್ ಮಾಡಿಸುವೆ. ಇಲ್ಲಲ್ಲದಿದ್ದರೆ ಅಮೇರಿಕಾದಲ್ಲಿ" ದಿನಕರ ಢೃಡವಾಗಿ ಹೇಳಿದ. "ನೀನು? ನಿನ್ನ ಸ್ಟೋರಿ ಸಿಕ್ಕಿತೇ? ಇನ್ನೂ ಹೆಚ್ಚು ಸಿಕ್ಕಿತೇ?"


"ನಾನು? ನಾನು ಇನ್ನು ಮೇಲೆ ಸ್ಟೋರಿಯಲ್ಲ ಫಿಕ್ಷನ್-ಥ್ರಿಲ್ಲರ್ಸ್ ಬರೆಯೋಣವೆಂದು ನಿರ್ಧಾರ ಮಾಡಿದ್ದೇನೆ. ಮೊದಲ ಕತೆಗೆ ಸಾಕಷ್ಟು ಮೆಟೀರಿಯಲ್ ಸಿಕ್ಕಿದೆ" ಎಂದು ನಕ್ಕಳು.



*****